page1

Pages

Showing posts with label malenadu. Show all posts
Showing posts with label malenadu. Show all posts

Saturday, June 13, 2015

ಮತ್ತೆ ಮುಂಗಾರಿನ ಅಭಿಷೇಕಕ್ಕೆ ಕಾದಿದೆ ಮನವು | Mind Body Soul awaiting for Monsoon

ಈ ಸಲ ಯಾಕೋ ಎಂದಿಗಿಂತ ಹೆಚ್ಚು ಕಾಲ ಗ್ರೀಷ್ಮನ ಸಾಂಗತ್ಯದಲ್ಲೇ ಮೈಮರೆತ ನಮ್ಮ ಪ್ರಕೃತಿ ಕೊನೆಗೂ ಮುಂಗಾರಿನ ಅಭಿಷೇಕಕ್ಕೆ ಸಜ್ಜಾಗಿದ್ದಾಳೆ.

ಪ್ರತಿ ಸಾರಿಯಂತೆ ಈ ಸಲವೂ ಅಡಿಕೆ ಮರಕ್ಕೆ ಔಷಧ ಹಾಕಲು ಮರೆತವರು ಗಡಿಬಿಡಿಯಲ್ಲಿ ಮರ ಏರುತ್ತಿರುವ ದೃಶ್ಯ ಮನೆಗೆ ಹೋಗುವಾಗ ಕಣ್ಣಿಗೆ ಬಿತ್ತು. ಈ ಬಾರಿ ಮಳೆ ಪ್ರಮಾಣದ ಲೆಕ್ಕಾಚಾರ, ಖರ್ಚಿನ ಲೆಕ್ಕಾಚಾರ, ಅಡುಗೆ ಮನೆಯಲ್ಲಿ ಶೇಖರಿಸಿಟ್ಟ ಹಪ್ಪಳದ ವ್ಯಾಪಾರ, ನಿತ್ಯ ಪಾರಾಯಣ, ಆಗಾಗ ಪ್ರಸಂಗಗಳ ರಂಜನೀಯ ಕಾಲಕ್ಕೆ ಮುಂಗಾರು ನಾಂದಿ ಹಾಡುತ್ತಿದೆ.


ಅಪ್ಪ ಆಗಲೇ ತೋಟಕ್ಕೆ ಬೇಕಾದ ವ್ಯವಸ್ಥೆ ಮಾಡಿ ಮಳೆರಾಯನನ್ನು ಸ್ವಾಗತಿಸಲು ಸಿದ್ಧರಾಗಿದ್ದಾರೆ. ನಾನಂತೂ ಮುಂಗಾರಿನ ಮೊದಲ ಮಳೆಯ ಮಹಾ ಮಜ್ಜನಕ್ಕೆ ಸಜ್ಜಾಗಿದ್ದೇನೆ. ಈ ನಡುವೆ ಕಳೆದ ವಾರ ಮಳೆಯ ನಿರೀಕ್ಷೆಯಲ್ಲಿ ರಾಜಧಾನಿಯಿಂದ ಮನೆಗೆ ಬಂದಿದ್ದ ಕಿಟ್ಟನ ಆರ್ಭಟ ಮಾತ್ರ ಜೋರಾಗಿತ್ತು.

ಹುಟ್ಟಿದ್ದು, ಓದಿದ್ದು, ಬೆಳೆದಿದ್ದು ಇಲ್ಲೇ ಆದರೂ ಕಿಟ್ಟನ ಹಾವ ಭಾವ ವರಸೆ ಎಲ್ಲವೂ ಯಾವುದೇ ಪಟ್ಟಣದ ಪೋಕರಿಗಳಿಗೇನು ಕಡಿಮೆ ಏನಿಲ್ಲ. ಬೆಂಗಳೂರಲ್ಲಿ ಎಂಎನ್ ಸಿ ಕಂಪನಿಯಲ್ಲಿ ಕೆಲ್ಸ ಮಾಡುತ್ತಿರುವ ಧಿಮಾಕು ಬೇರೆ ಈ ನಡುವೆ ಹೆಚ್ಚಾಗಿ ಕಾಣುತ್ತಿತ್ತು.

ಊರಿಗೆ ಬಂದವನೇ ಇಲ್ಲಿನ ಬಿಸಿಲನ್ನು ಬೆಂಗಳೂರಿನ ದಿನ ನಿತ್ಯದ ಸಂಜೆ ಮಳೆಯನ್ನು ಶಪಿಸತೊಡಗಿದ. ಅದೇನು ಮರವೋ ಯಾರು ಯಾವ ಕಾಲದಲ್ಲಿ ನೆಟ್ಟರೋ ದಿನವೋ ಒಂದಲ್ಲ ಒಂದು ಕಡೆ ಉದುರಿ ಬೀಳುತ್ತಲೇ ಇರುತ್ತದೆ. ಬೈಕಲ್ಲಿ ಅಡ್ಡಾಡುವುದಿರಲಿ, ಆಫೀಸಿನಿಂದ ಮನೆಗೆ ವಾಪಸ್ ಬರೋಕೆ ಹೆದರಿಕೆ ಆಗುತ್ತೆ..ಇದರ ಜೊತೆಗೆ ಮಳೆ ಸ್ವಲ್ಪ ಜೋರಾದರೆ ಸಾಕು ರಸ್ತೆ ಹೊಂಡದ ತುಂಬಾ ನೀರು ನಿಲ್ಲುತ್ತೆ...ಒಟ್ಟಾರೆ, ಆಫೀಸ್ ಹತ್ತಿರನೇ ಮನೆ ಇದ್ದವರೇ ಲಕ್ಕಿ ಅಂದುಬಿಟ್ಟ.

ಮರಗಳು ಹಳೆಯವಾದರೂ ನಮ್ಮಲ್ಲಿನ ಮರಗಳಲ್ಲ, ಬ್ರಿಟಿಷರ ಕಾಲದ್ದು ಎಂದು ಹೇಳಿಕಂಡರೂ ಅವು ಮಾವು, ಹಲಸಲ್ಲ, ಬಣ್ಣ ಹೂಬಿಡುವ ಅಲಂಕಾರಿಕ ಮರಗಳಷ್ಟೇ. ಇನ್ನಾದರೂ ಗಟ್ಟಿ ಮರಗಳನ್ನು ಬೆಳೆಸುವ ಬಗ್ಗೆ ಬೆಂಗಳೂರಲ್ಲಿ ಪ್ರಜ್ಞೆ ಮೂಡಿಸಿತು.. ಅಲ್ವೋ ಆಫೀಸ್ ಗೂ ನಿನ್ನ್ ರೂಮಿಗೂ ಏನ್ ಮಹಾ ದೂರ ಇದೆ. ಹತ್ತು ಕಿ.ಮೀ ಇರಬಹುದು ಅಷ್ಟೇ ಅಲ್ವ ಅಂದೆ.

ಏನು ಹತ್ತು ಕಿ.ಮೀ ನೀನು ಬಂದು ಓಡಾಡು ಎರಡು ದಿನ ಗೊತ್ತಾಗ್ತು ಅಂದ.
ಅಯ್ಯೋ ಬೇಡ ಮಾರಾಯ.. ನಾ ಇದ್ರು ಹೋದ್ರು ಬದುಕಿದ್ರೂ ಇಲ್ಲೇ ಮಲೆನಾಡಿನ ಮೂಲೆ ನಾಗೆ ಎಂದು ಹೇಳಿದೆ.

ನೀನು ಬಿಡು, ಯಾವಾಗ್ಲು ಹೀಗೆ ಹೇಳ್ತಿಯಾ ನಾಳೆ ಮದ್ವೆ ಆದ್ಮೇಲೆ ನೋಡುವಾ ಎಂದು ಕಿಸಿದವನು ಸುಮ್ಮನಾದ. ಅಷ್ಟರಲ್ಲಿ ಅವನ ದೊಡ್ಡಪ್ಪ ಎದುರಿಗೆ ಬಂದಿದ್ರು..

ಯಾರದೋ ಮದ್ವೆ ಅಂದ್ರು

ಅದು ದೊಡ್ಡಪ್ಪ, ಸಸಿತೋಟ ಕಡೆ ಫ್ರೆಂಡ್ ಹೋಗುಕು ನಾಳೆ.. ನಾ ಬರ್ತಿನಿ ಎಂದು ತನ್ನ ಮನೆಗೆ ಹೊರಟ.

ಅಣ್ಣನಿಗೆ ಅವನು ಯಾರ ಮದ್ವೆ ಬಗ್ಗೆ ಹೇಳಿದ್ದು ಎಂಬುದು ತಿಳಿಯದಷ್ಟು ದಡ್ಡರಲ್ಲ. ಮಗಳ ಮದುವೆ ಮಾಡುವ ಇರಾದೆ ಇಲ್ಲದ್ದಷ್ಟು ನಿರ್ದಯಿ, ನಿರ್ಭಾವುಕ ವ್ಯಕ್ತಿ ಏನಲ್ಲ. ಮೂವತ್ತರ ಹರೆಯದ ಮಗಳನ್ನು ಈ ಮಳೆಕಾಡಿನ ಮನೆಯನ್ನು ಸಂಭಾಳಿಸಬಲ್ಲ ಹುಡುಗನಿಗಾಗಿ ನನಗರಿವಿಲ್ಲದ್ದಂತೆ ಹುಡುಕಿದ್ದು ಉಂಟು.

ಆದರೆ, ನನಗೆ ಅಪ್ಪನ ಎಲ್ಲಾ ಚರ್ಯೆಗಳು ಬಹುಬೇಗ ತಿಳಿದು ಬಿಡುತ್ತಿತ್ತು. ಅಪ್ಪ ಹೇಳದಿದ್ದರೂ ಅವರ ಸುತ್ತಾಟ ಎಲ್ಲಿ ತನಕ ಸಾಗಿತ್ತು ಎಂಬುದನ್ನು ರಾಮಣ್ಣ ವರದಿ ಒಪ್ಪಿಸುತ್ತಿದ್ದ. ಆದರೆ, ಇದುವರೆವಿಗೂ ಸಂಬಂಧ ಕುದರಿಲ್ಲ, ನಾನು ಒಪ್ಪುವುದಿರಲಿ, ಅಣ್ಣನಿಗೆ ಇಷ್ಟವಾಗುತ್ತಿರಲಿಲ್ಲ.

ನಮಗಿಬ್ಬರಿಗೂ ನಮ್ಮನ್ನು ಇಷ್ಟಪಡುವವರಿಗಿಂತ ನಮ್ಮ ಪರಿಸರವನ್ನು ಪ್ರೀತಿಸುವ ಜನ ಬೇಕೆನಿಸಿ ವರ್ಷಗಳೇ ಕಳೆದಿವೆ. ಮನೆ, ತೋಟ, ಅಣ್ಣ ನೋಡಿಕೊಳ್ಳುವ ವೃದ್ಧಾಶ್ರಮ, ಶಾಲೆ, ನದಿ, ಆಗಾಗ ಪೇಟೆ ಕಡೆ ಸುತ್ತಾಟ, ಪ್ರತಿದಿನವೂ ಹೊಸ ನೋಟ, ಬದುಕಿಗೆ ಇಷ್ಟು ಸಾಕು ಬೇರೆ ಯಾವ ಕಾಮನೆಗಳು ಸುಳಿಯದಿರಲಿ.. ಮಳೆ ಸುರಿಯುವ ಹಾಗಿದೆ.. ಮುಂಗಾರಿನ ಅಭಿಷೇಕಕ್ಕೆ ಮೊದಲ ಮಜ್ಜನಕ್ಕೆ ನಾ ಹೊರಡಬೇಕಿದೆ..ಅದಕ್ಕೂ ಮೊದಲು ಬೆಚ್ಚಗಿನ ಕಾಫಿ ಹೀರಬೇಕಿದೆ...ಸದ್ಯಕ್ಕೆ ಅಲ್ಪ ವಿರಾಮ..

Sunday, March 31, 2013

ಮಳೆ ಮೇಲೆ ಮುನಿಸು












ವಾರದಿಂದ ಕಾದಿದ್ದೆ ಬಂತು ಗುಡುಗು ಇಲ್ಲ... ಗಾಳಿಯೂ... ನಾವಿರೋದು ಮಲೆನಾಡೋ ಬಯಲು ಸೀಮೆಯೋ ಎಂಬ ಶಂಕೆ ಬಂದು ಬಿಟ್ಟಿತ್ತು.

ವಾರಾಂತ್ಯದಲ್ಲಿ ಮೋಜಿನಲ್ಲಿ ವ್ಯಸ್ತನಾಗಿದ್ದ ನನ್ನ ತಮ್ಮ ಕಿಟ್ಟಿ ಕರೆ ಮಾಡಿ ಬೆಂಗಳೂರಿನಲ್ಲಿ 'ಮಸ್ತ್ ಮಳೆ ಸುರೀತಿದೆ ಕಣೆ..ಬಸ್ ಹತ್ತಿ ಬಂದು ಬಿಡು ಬೆಳಗ್ಗೆ ಒಳಗೆ ನಿಂಗೂ ಸಿಗಬಹುದು ಲಕ್ ಇದ್ರೆ' ಎಂದು ಹೇಳಿ ಫೋನ್ ಕುಕ್ಕಿದ.. ಇಲ್ಲ ನಾನೇ ಫೋನ್ ಕುಕ್ಕಿದೆ


ತಕ್ಷಣವೇ ಮನೆ ಹೊರಗೆ ಬಂದು ಹುಣ್ಣಿಮೆ ಮುಗಿಸಿದ ಚಂದಿರ ಹುಡುಕತೊಡಗಿದೆ. ತಾರೆಗಳು, ಮೋಡ ಘರ್ಜನೆ,ವಾಯುದೇವನ ಆಹ್ಲಾದಕರ ಆಹ್ವಾನ ಹೂಂ ಏನು ಇಲ್ಲ....

ಅಲ್ಲೇ ಚಿಟ್ಟೆ ಮೇಲೆ ಕುಂತಿದ್ದ ಅಣ್ಣ 'ನನ್ನ ಬಾಧೆ  ಕಂಡು ಒಳಗೊಳಗೆ ನಗುತ್ತಾ ಎಂಥಾಯ್ತೆ ಪುಟ್ಟಿ ಯಾರ ಮೇಲೆ ಮುನಿಸು' ಎಂದರು.

ಅವರಿಗೂ ಗೊತ್ತು ಆ ಸಮಯಕ್ಕೆ ನನ್ನ ಮುನಿಸು ಮಳೆ ಮೇಲೆ ಇತ್ತು ಎಂದು. ಅವರ ಕಡೆಗೆ ಒಮ್ಮೆ ನೋಡಿ ಒಳಗೆ ನಡೆದೆ. ಮಲೆನಾಡಿಗೆ ಬರದೆ ಬೆಂಗಳೂರಿನ ಜನಕ್ಕೆ ತಂಪು ನೀಡಲು ಹೋಗಿರುವ ಮಳೆರಾಯನ ಮೇಲೆ ಸಿಟ್ಟಾಗದೆ ಇರಲು ಸಾಧ್ಯವೇ?

ಈ ಬಾರಿ ಬೇಸಿಗೆಯಲ್ಲಿ ಊಟದ ಮನೆಗಳು ಇದ್ದದ್ದೇ ಕಮ್ಮಿ. ನಮ್ಮ ಪೈಕಿ ಎಲ್ಲಾ ಊರು ಬಿಟ್ಟು ಬೆಂಗಳೂರು ಸೇರಿದ್ದರೋ ಏನೋ ಇಲ್ಲಿ ಉಳಿದಿರುವುದು ನಾವೇ ಒಂದು ನಾಲ್ಕು ಮನೆಯವರು ಅನ್ಸೋಕೆ ಶುರುವಾಗಿದ್ದು...

ಈ ಕಾಟದ ಜೊತೆಗೆ  ಮಳೆರಾಯ ಕೂಡಾ  ನಮ್ಮ ಕಡೆ ತಲೆ ಹಾಕಿ ಮಲಗಿಲ್ಲದಿರುವುದು ನನ್ನ ಬೇಸರ ಇನ್ನಷ್ಟು ಹೆಚ್ಚಿಸಿತ್ತು. ಮಳೆಯಂತೆ ನನ್ನನ್ನು ಕಾಡುವ ಇನ್ನೊಂದು ವಿಷ್ಯ ಇದೆಯೋ ಇಲ್ಲವೋ ಗೊತ್ತಿಲ್ಲ.

ಆದರೆ, ಸದಾ ಬಯಸುವ ಅತಿಥಿ ಬಾರದ ಸಮಯಕ್ಕೂ ಸರಿ.. ನಿರೀಕ್ಷಿತ ಸಮಯಕ್ಕಾದರೂ ಸರಿ ಬರದಿದ್ದರೆ ಸಿಟ್ಟು ಬಾರದೆ ಇರುತ್ತದೆಯೇ?


ಸದಾ ಕಾಡುವ ಅತಿಥಿ ನೀ ಬರದಿದ್ದರೆ ನಮಗೇನು ಗತಿ
ನಮ್ಮ ಪರಿಸ್ಥಿತಿ ಮೇಲೆ ನಿನಗೆ ಮುನಿಸೋ, ನಗೆಯೋ
ನಮಗಂತೂ ನಿನ್ನ ಕಾಣದೆ ವರ್ಷವಾದಂಥ ಅನುಭವ

ಒಪ್ಪಿಕೊಂಡಿರುವೆ ನನ್ನ ಪರಾಭವ ಆಲಂಗಿಸು ಬಾ
ನನ್ನ ಜನುಮದ ಗೆಳೆಯನೇ ನಿನ್ನ ಒಡಲಾಳದ
ಆರ್ದ್ರತೆಯಿಂದ ತೋಯಿಸು ನನ್ನ ಮನದ ದುಗುಡವ
ಮಣ್ಣ ಮಕ್ಕಳ ಕಾಯುವ ಸಖ ನೀನಿಲ್ಲದೆ ನಮಗೆಲ್ಲಿ ನೆಲೆ

ದೂರದ ಊರಿಗೆ ನೀ ಹೋಗಿರುವುದು ಚುಟುಕು ಪ್ರಯಾಣ
ಎಂದೇ ನಾ ಭಾವಿಸಿರುವೆ, ನಿರೀಕ್ಷೆಯ ಹುಸಿ ಮಾಡಬೇಡ
ಮುಂದಿನ ಹುಣ್ಣಿಮೆಯ ಮೊದಲು ಮನೆಯ ಹಿಂದಿನ ಹೊಂಡ
ತುಂಬಿಸು ಮತ್ತೊಮ್ಮೆ ಅಲ್ಲಿ ನಿನ್ನ ನೆನದು ಹೋಕುಳಿ ಆಡುವೆ

ನಿನ್ನ ಸ್ವಾಗತಿಸಲು ಭಜಂತ್ರಿ ಹಿಡಿದು ನಾನೇ ಮುಂದೆ ನಿಲ್ಲುವೆ
ನೀ ಸಮಯಕ್ಕೆ ಸರಿಯಾಗಿ ಕಾಣಿಸದಿದ್ದರೆ ಮನೆಯ ಮುಂದಿನ
ತುಂಗೆಯ ಒಡಲಲ್ಲಿ ಮಲಗಿ ಎಂದಿನಂತೆ ನಿನ್ನ ನೆನದು ಸುರಿಸುವೆ
ನಾಲ್ಕು ಹನಿ ಮತ್ತೊಮ್ಮೆ ನೀ ಬರುವ ಹಾದಿಯ ಕಾಣುತ್ತಾ...

Tuesday, September 27, 2011

ರಮಣ ನಿನ್ನಿಂದ ಮನಸ್ಸು ಮೆದು ಹರಣ

ನಿಶಾಂತನ ಜೊತೆ ಪ್ರಶಾಂತವಾಗಿದ್ದ ಮನಸ್ಸಿನೊಳಗೆ ಕೊಂಚ ರಭಸವಾಗೇ ಎಂಟ್ರಿ ಕೊಟ್ಟಿದ್ದು ರಮಣ ಪ್ರಕಾಶ್. ಮುಂಬೈನಲ್ಲಿದ್ದ ಆತ ಪರಿಚಯವಾಗಿದ್ದು, ಆತನ ಪತ್ನಿ ರಚನಾ ಮೂಲಕ. ತೇಜಸ್ವಿ ಅವರ ಪುಸ್ತಕ ಅರಸುತ್ತಿದ್ದ ರಚನಾ ಆರ್ಕುಟ್ ನಲ್ಲಿ ಈ ಬಗ್ಗೆ ಹಾಕಿದ್ದ ಪೋಸ್ಟ್ ನೋಡಿ ನಾನು ಉತ್ತರಿಸಿದ್ದೆ ಬಂತು.

ರಚನಾ ಜೊತೆ ಗೆಳೆತನ ಬೆಳೆಯಿತು. ನಂತರ ರಚನಾ ರಮಣನ ಪರಿಚಯವಾಗಿ ಆತನಿಗೂ ಕಂಪ್ಯೂಟರ್ ನಲ್ಲಿ ಕನ್ನಡ, ತೇಜಸ್ವಿ ಪುಸ್ತಕ, ಕವಿ, ಕವನ ಬಗ್ಗೆ ಸಮಾನ ಆಸಕ್ತಿ ಇದ್ದ ಪರಿಣಾಮ ರಮಣ ಇಷ್ಟವಾದ. ನನ್ನ ಪತಿ ಕನ್ನಡ, ಕವನ, ಪುಸ್ತಕಗಳ ಹುಚ್ಚು ಬಿಡಿಸಿ ಎಂದು ಗೆಳೆತನದ ಕೊಂಡಿ ಹಾಕಿಕೊಟ್ಟ ಗೆಳತಿ ರಚನಾಳಿಗಿಂತ ತುಸು ಹೆಚ್ಚು ಆಪ್ತವಾಗಿ ರಮಣ ಹತ್ತಿರವಾಗಿದ್ದ.

ನಿಶಾಂತನಂತೆ ರಮಣ ಕೂಡಾ ಕವನಧಾರೆ ಹರಿಸುತ್ತಿದ್ದ. ನಿಶಾಂತನ ಕವನಗಳು ವಿರಹ ರಾಗ ಹಾಡಿದರೆ, ರಮಣನದ್ದು ಎಲ್ಲದರಲ್ಲೂ ಆಶಾಭಾವನೆ. ರಮಣ, ರಚನಾ ದಂಪತಿಗಳಿಗೆ ಇದ್ದ ಏಕೈಕ ಕೂಸು ಅಲ್ಲಮ. ಹೆಸರು ಸ್ವಲ್ಪ ವಿಚಿತ್ರ ಎನಿಸಿತ್ತು ಮೊದಲಬಾರಿ ಕೇಳಿದಾಗ ಆದರೆ, ಅಲ್ಲಮ ಚುರುಕಾದ ಹುಡುಗ, ಆದರೆ, ತಲೆಯಲ್ಲಿ ಎಲ್ಲಾ ಪುಟ್ಟ ಮಕ್ಕಳಂತೆ ಪ್ರಶ್ನೆಗಳ ಮೂಟೆಗಳನ್ನೇ ಹೊತ್ತಿರುತ್ತಿದ್ದ.

ಅಲ್ಲಮನನ್ನು ಕರೆದುಕೊಂಡು ರಮಣ ಒಮ್ಮೆ ನಮ್ಮೂರು, ನಮ್ಮ ಮನೆಗೂ ಬಂದಿದ್ದರು. ಕೋಮಲಾಳಿಗೆ ಅವರ ಊರಿನ ಕಡೆಯವರು ಎಂದು ತಿಳಿದು ವಿಶೇಷವಾಗಿ ಮಾತನಾಡಿಸುತ್ತಿದ್ದಳು. ನಾಗರಪಂಚಮಿ ಸಮಯದ ಅಣ್ಣ ತಂಗಿ ಮಾಡೆಲ್ ಥರಾ ಕಾಣುತ್ತಿದ್ದರು ಅವರಿಬ್ಬರು ನನಗೆ. ಅಲ್ಲಮನ ಓದುವ ಉತ್ಸಾಹ, ಆಟ ಆಡುವ ಹುಚ್ಚನ್ನು ನಾನಂತೂ ತೀರಿಸಲು ಸಾಧ್ಯವಿರಲಿಲ್ಲ. ಊರಿಗೆ ಬಂದಿದ್ದ ತಮ್ಮ ಕಿಟ್ಟಿಗೆ ಅವನನ್ನು ಒಪ್ಪಿಸಿ, ರಮಣನ ಜೊತೆ ಹರಟುತ್ತಿದ್ದೆ.

ರಮಣನನ್ನು ಒಮ್ಮೆ ಮೇಲಿಂದ ಕೆಳಗೆ ನೋಡಿದೆ, ನಿಶಾಂತನ ರೂಪು ಇಲ್ಲದಿದ್ದರೂ, ಒಳ್ಳೆ ಹೇರ್ ಸ್ಟೈಲ್ ಇಲ್ಲದಿದ್ದರೂ ನಿಶಾಂತನಿಗಿಂತ ಹೆಚ್ಚು ವಾಚಾಳಿ. ತಗ್ಗಿ ಬಗ್ಗುವ ವ್ಯಕ್ತಿತ್ವ ಎನಿಸಿತು. ರಮಣನ ಫ್ಯಾಮೀಲಿ ಮ್ಯಾಟರ್‍ ಎಲ್ಲ ನನ್ನ ತಲೆಲಿತ್ತು. ಮೊದಲ ಭೇಟಿಯಲ್ಲಿ ಮಾತಿಗಿಂತ ಮೌನವೇ ಹೆಚ್ಚಾಗಿತ್ತು.

ಆದರೆ, ನಂತರ ಪಸರ್ನಲ್ ಮ್ಯಾಟರ್ ಎಲ್ಲಾ ವಿನಿಮಯವಾಗುತ್ತಿತ್ತು. ರಮಣ ಸ್ವಲ್ಪ ಜಾಸ್ತಿನೇ ಪೊಸೆಸಿವ್
ಅಂಥಾ ಅನ್ನಿಸತೊಡಗಿತು. ರಮಣನ ಜೊತೆ ಗೆಳೆತನದ ಬಗ್ಗೆ ನಿಶಾಂತನಿಗೆ ವಿವರವಾಗಿ ಹೇಳೋಕೆ ಆಗಿರಲಿಲ್ಲ. ಹೊಸ ಗೆಳೆಯರ ಬಗ್ಗೆ ಸ್ವಲ್ಪ ಹುಶಾರು ಎಂದಿದ್ದು ಮಾತ್ರ ಅರೆಕ್ಷಣ ಮಾತ್ರ ನೆನಪಿರುತ್ತಿತ್ತು.

ಹರಕೆಯ ಕುರಿಯಂತೆ ಎಲ್ಲರ ಸಮಸ್ಯೆ ಬಗೆಹರಿಸುವಂತೆ ಮುಂದೆ ನಿಲ್ಲುತ್ತಿದ್ದ ನಾನು ಅನೇಕ ಬಾರಿ ಬೆಸ್ತು ಬಿದ್ದಿದ್ದು ಇದೆ. ಅದು ಹುಟ್ಟಿನಿಂದ ಬಂದ ಸಮಸ್ಯೆ ಎಂದು ನಕ್ಕು ಸುಮ್ಮನಾಗುತ್ತಾನೆ ಅಷ್ಟೆ.

ರಮಣನ ಜೊತೆ ಚಾಟಿಂಗ್, ಮೆಸೇಜಿಂಗ್ ನಡೆದಿತ್ತು. ಉದ್ದುದ್ದಾ ಕವನಗಳನ್ನು ಕಳಿಸಿ ಕೊನೆಗೆ ಹೇಗಿದೆ ಡಿಯರ್ ಎಂದಾಗಲೆಲ್ಲಾ ಕಷ್ಟಪಟ್ಟು ಸಹಿಸಿಕೊಂಡಿದೆ. ಆದರೆ ಒಂದು ದಿನ ತೀರಾ ಹತ್ತಿರವಾಗಿ ಕೂತು ಹರಟುತ್ತಿದ್ದ ವೇಳೆ ಕೆನ್ನೆಗೆ ತುಟಿ ತಾಗಿಸಿ ಬಿಟ್ಟ.

ಮಾರ್ಡ್ರನ್ ಲೈಫ್ ಸ್ಟೈಲ್ ನ ಒಳಹೊರಗೂ ತಿಳಿದಿದ್ದ ರಮಣನಿಗೂ ಇದು ಸಹಜವಾಗಿತ್ತು. ಆದ್ರೆ ನನಗೆ ಒಂದು ಕ್ಷಣ ಏನೂ ತೋಚದಂತಾಯಿತು. ಕೆಲವೊಮ್ಮೆ ನಾನ್ ವೆಜ್ ಜೋಕ್ಸ್ ಹದ್ದು ಮೀರದಂತೆ ಸಂಭಾಷಣೆ ಮಧ್ಯೆ ಸುಳಿಯುತ್ತಿತ್ತು.

ನಾನಾದರೋ ರಮಣನನ್ನು ಬಿಟ್ಟರೆ ಬೇರೆ ಆಪ್ತ ಗೆಳೆಯರಿಲ್ಲ ಎಂಬಂತೆ ಆಡುತ್ತಿದ್ದೆ. ಇದು ಕೆಲವೊಮ್ಮೆ ನನ್ನ ಕಸಿನ್ಸ್ ಗಳಿಗೂ ಇರುಸು ಮುರುಸು ತರಿಸಿತ್ತು. ರಮಣನ ಜೊತೆ ಆಗಾಗ ಕಿತ್ತಾಟ ನಡೆಯುತ್ತಿತ್ತು.

ರಮಣ ಎಲ್ಲವನ್ನೂ ಎಕ್ಸ್ ಪ್ರೆಸಿವ್ ಆಗಿರಬೇಕು ಎಂದು ಬಯಸುತ್ತಿದ್ದ. ತುಂಬಾ ಪೊಸೆಸಿವ್ ಆಗಿರುತ್ತಿದ್ದ. ಅದರೆ, ಸ್ನೇಹಿತರೆಂದರೆ ಪ್ರೊಟೆಕ್ಟಿವ್ ಆಗಿ ಹೆಲ್ಪ್ ಫುಲ್ ಆಗಿರುತ್ತಿದ್ದ. ಆದರೆ, ಯಾವುದೇ ಸರ್ಕಲ್ ಗೆ ಒಳಪಡದೆ ಇದ್ದ ನಾನು ನನಗೆ ತಿಳಿಯದಂತೆ ರಮಣನ ಗೆಳೆತನದ ಸರ್ಕಲ್ ನಲ್ಲಿ ಸೇರಿ ಹೊರ ಬರಲಾರದೆ ಒದ್ದಾಡುತ್ತಿದೆ.

ಕೊನೆಗೂ ರಮಣನ ಅತಿಯಾದ ಗೆಳೆತನದಿಂದ ಮುಕ್ತಿ ಪಡೆವ ಮಾರ್ಗ ಸಿಕ್ಕಿಬಿಟ್ಟಿತ್ತು. ದೂರದ ಊರಿಗೆ ಪ್ರವಾಸಕ್ಕೆಂದು ಹೋದ ನಾನು ಕೊನೆಗೆ ಅಲ್ಲೇ ನೆಲೆಗೊಳ್ಳುವಂತಾಯಿತು. ಈ ನಡುವೆ ರಮಣನ ಜೊತೆ ಸಂಪರ್ಕವನ್ನು ನಿಧಾನವಾಗಿ ಕಡಿದುಕೊಳ್ಳುತ್ತಾ ಬಂದೆ.

ಆದರೆ, ಫ್ರೆಂಡ್ ಶಿಪ್ ಬ್ರೇಕ್ ಮಾಡಿಕೊಳ್ಳಲಿಲ್ಲ. ಯಾವ ಮನುಷ್ಯನಾದರೂ ದ್ವೇಷ ಕಟ್ಟಿಕೊಳ್ಳಬೇಡ. ಯಾರಿಗೊತ್ತು ಯಾರು ಯಾವಾಗ ಬೇಕಾಗುತ್ತಾರೋ ಗೊತ್ತಿರುವುದಿಲ್ಲ ಎಂಬ ಆಪ್ತರೊಬ್ಬರ ಮಾತಿಗೆ ಬೆಲೆಕೊಟ್ಟು ಎಲ್ಲರೊಡನೆ ಸ್ನೇಹ ಉಳಿಸಿಕೊಂಡು ಸಾಗಿಸುತ್ತಿದ್ದೇನೆ ಜೀವನ.... ಸದಾ ಮಳೆ ಸುರಿವ ನಾಡಿನಲ್ಲಿ...


Saturday, July 30, 2011

ನಿಶಾಂತ ಬಳಿ ಇದ್ದರೆ ಮನಸಿಗೆ ಪ್ರಶಾಂತ

ನನದಲ್ಲದ ಕಾರಣಕ್ಕೆ ನಾನು ಕೆಲಸ ತೊರೆದ ಮೇಲೆ ಮನೆಯಲ್ಲಿ ಸಮಯದೂಡುವುದೇ ಕಷ್ಟವಾಗುತ್ತಿತ್ತು,. ಇಂಥ ಸಂದರ್ಭದಲ್ಲಿ ಸಿಕ್ಕವನು ನಿಶಾಂತ. ಅವನೆಂದರೆ ನನಗಷ್ಟೆ ಅಲ್ಲಾ ನನ್ನ ಗೆಳತಿಯರಿಗೂ ಏನೋ ಆಕರ್ಷಣೆ.

ಸೊಂಪಾಗಿ ಬೆಳೆದಿದ್ದ ತಲೆಕೂದಲನ್ನು ಹಿಂದಕ್ಕೆ ಹಾಕುತ್ತಾ ಹೇರ್ ಸ್ಟೈಲ್ ಸರಿ ಮಾಡಿಕೊಂಡು, ಗಡಸು ಧ್ವನಿಯಲ್ಲಿ ಅವನು ಸ್ವರಚಿತ ಗೀತೆಗಳ ಹಾಡುತ್ತಿದ್ದರೆ, ಎಲ್ಲರೂ ಮರುಳಾಗಿಬಿಡುತ್ತಿದ್ದರು. ಆದರೆ, ಅವನೇನೂ ಯಾರೊಂದಿಗೂ ಫ್ಲರ್ಟ್ ಮಾಡಿದವನಲ್ಲ.


ತನ್ನ ವೃತ್ತಿ, ಸಾಹಿತ್ಯ ಲೋಕವನ್ನು ಇಷ್ಟಪಡುವ ನಿಶಾಂತ ಎಲ್ಲರೊಡನೆ ಬೆರತರೂ ಸದಾ ಏಕಾಂಗಿಯಾಗಿ ಕಾಣುತ್ತಿದ್ದ. ಅವನೊಂದಿಗೆ ದಿನವಿಡೀ ಹರಟೆ ಹೊಡೆಯುವುದು ಈಗಲೂ ನನ್ನ ನೆಚ್ಚಿನ ವಿಷಯ. ನಮ್ಮ ಮಾತುಕತೆಯಲ್ಲಿ ಇಡೀ ವಿಶ್ವದ ಆಗು ಹೋಗುಗಳು ಆವರಿಸಿರುತ್ತಿತ್ತು.

ಮಲ್ಲಿಕಾಳ ಮೈಮಾಟದಿಂದ ಹಿಡಿದು ಶಂಕರರ ಅದ್ವೈತ, ಶಿಕ್ಷಣ ಪದ್ಧತಿ, ಬೇಂದ್ರೆ ಕವನ, ಕುವೆಂಪು ಕಥನ, ಕಾರಂತರ ಸುತ್ತಾಟ, ತೇಜಸ್ವಿ ಜೀವನ ಸರಸ ಎಲ್ಲವೂ ಸುಳಿದಾಡುತ್ತಿತ್ತು. ಒಟ್ಟಿನಲ್ಲಿ ಅವನೊಟ್ಟಿಗೆ ಮಾತಾಡುತ್ತಾ ದಿನಕ್ಕೊಂದು ಹೊಸ ವಿಷಯವನ್ನು ಗ್ರಹಿಸುವುದು ನನಗೆ ಇಂದಿಗೂ ಖುಷಿ ಕೊಡುತ್ತದೆ.

ನಿಶಾಂತ ಹಾಗೂ ನನ್ನ ಗೆಳೆತನ ಹಲವರ ಕಣ್ಣು ಕುಕ್ಕುತ್ತಿತ್ತು. ನಿಶಾಂತನನ್ನು ನನಗೆ ಪರಿಚಯಿಸಿದ ನಮ್ಮ ಸಹಕಾರ ಸಂಘದ ಅಧ್ಯಕ್ಷ ಮಿತ್ರ ಸುರೇಶ್ ನಾಯಕ ಕೂಡಾ ಅವನು ಸರಿಯಿಲ್ಲ ಎಂದು ಏನೇನೋ ಹೇಳಿದ್ದ. ನನ್ನ ಗೆಳತಿ ಕೋಮಲಾಳಿಗೂ ಕೂಡಾ ನಿಶಾಂತ ನಿನ್ನ ಮಾತ್ರ ಮಾತಾಡಿಸುತ್ತಾನೆ ಬರೀ. ನಾವೆಂಥ ಮಾಡಿದ್ದೀವಿ ಮಾರ್ರಾಯ್ತಿ ಎಂದು ಗೊಣಗುತ್ತಿದ್ದಳು.


ಮೊಬೈಲ್ ಕಾಣದ ಆ ದಿನಗಳಲ್ಲಿ ನಿಶಾಂತನ ದೆಸೆಯಿಂದ ಮೊಬೈಲ್, ಮೆಸೇಂಜಿಂಗ್ , ಟಾಕಿಂಗ್ ಎಲ್ಲವೂ ವೇದ್ಯವಾಯಿತು. ಮೊಬೈಲ್ ಬಿಲ್ ಕೂಡಾ ಅವನೇ ಕಟ್ಟುತ್ತಿದ್ದ. ಕೆಲವೊಮ್ಮೆ ನಿಶಾಂತ ಮಾತಿಗಿಂತ ಹೆಚ್ಚು ಮೌನಕ್ಕೆ ಶರಣಾಗುತ್ತಿದ್ದ. ಹುಡುಗರೂ ಈ ರೀತಿ ವೇದನೆ ಪಡುತ್ತಾರಾ ಎಂದೆನಿಸಿಬಿಡುತ್ತಿತ್ತು. ಕಾಲೇಜು ದಿನಗಳಿಂದ ಹಿಡಿದು ಇಂದಿನ ವರೆಗಿನ ಆತನ ಪ್ರೇಮ ಪ್ರಕರಣಗಳನ್ನು ಒಂದೊಂದಾಗಿ ಹೇಳತೊಡಗಿದ್ದ.

ಇವನ ಹಿಂದೆ ಬಿದ್ದ ಹುಡುಗಿಯರ ಪಟ್ಟಿ ಅವರ ಬೇಡಿಕೆಗಳು, ಜೀವನದ ಅರ್ಥ ಗೊತ್ತುಗುರಿಯಿಲ್ಲದ ಇಂದಿನ ಪ್ರೇಮಿಗಳ ಬಗ್ಗೆ ಗಂಟೆಗಟ್ಟಲೆ ಹೇಳುತ್ತಿದ್ದ. ನನಗೋ ಇವೆಲ್ಲವೂ ಹೊಸ ಕಥೆಗಳು ಆಸಕ್ತಿಯಿಂದ ಕೇಳುತ್ತಿದ್ದೆ. ಆಗಾಗ ಇದಕ್ಕೆ ಏನು ಪರಿಹಾರ ಎನ್ನುತ್ತಿದ್ದ.. ನಾನೇನು ಹೇಳಲಿ.. ನನ್ನದೋ ಬರೀ ಪುಸ್ತಕ ಜ್ಞಾನ. ಕೆಲವೊಮ್ಮೆ ಅವನು ಪ್ರಶ್ನೆ ಮೇಲೆ ಪ್ರಶ್ನೆ ಎಸೆಯುತ್ತಿದ್ದರೆ ನನಗೆ ಏನು ಹೇಳಲು ತೋಚುತ್ತಿರಲಿಲ್ಲ.

ಒಂದು ದಿನ ಬಂದವನೇ ಮತ್ತೆ ಮುಂದೆ ಏನು ಯೋಚ್ನೆ ಮಾಡಿದ್ದೀಯಾ? ಅಂದಾ.. ನಾನು ಕೇಳ್ದೆ ಯಾವುದರ ಬಗ್ಗೆ ಜೀವನದ ಬಗ್ಗೆ.. ಮದ್ವೆನಾ ಅಥವಾ ಕೆಲಸನಾ ಮದ್ವೆ ಬಗ್ಗೆ ಮನಸ್ಸಿಲ್ಲ.. ಕೆಲಸ ಮಾಡ್ಬೇಕು ಆಂದ್ರೆ ಹಳೆ ಫೀಲ್ಡ್ ಬೇಡ ಅಂದೆ ಆಯ್ತು ಎಂದು ತನ್ನ ಬೈಕ್ ಹತ್ತಿ ಹೊರಟುಬಿಟ್ಟ.

ವಾರದೊಳಗೆ ನನಗೊಂದು ಕೆಲ್ಸ ಸಿಕ್ಕಿತ್ತು. ಅದು ನನ್ನ ನೆಚ್ಚಿನ ಕ್ಷೇತ್ರದಲ್ಲೇ.. ಕೃಷಿ ಇಲಾಖೆ ಸಂಶೋಧನೆ..ನಮ್ಮೂರಿನಿಂದ ಮೂರ್ನಾಲ್ಕು ಗಂಟೆ ಹಾದಿ ಮನಸ್ಸು ಹರುಷದಿಂದ ಹಾರಾಡುತ್ತಿತ್ತು.

ನಿಶಾಂತನ ಉಪಕಾರಕ್ಕೆ ಪ್ರತ್ಯುಪಕಾರ ಮಾಡುವ ಆಸೆ ಹುಟ್ಟಿಕೊಂಡಿತ್ತು. ಆದರೆ, ಎಲ್ಲಾ ಸ್ತರದಲ್ಲೂ ನನಗಿಂತ ಒಂದು ಹೆಜ್ಜೆ ಮುಂದಿದ್ದ ಅವನಿಗೆ ನಾನು ಏನು ತಾನೇ ನೀಡಲು ಸಾಧ್ಯ ಎನಿಸಿತ್ತು. ಆದರೆ, ನಿಶಾಂತ ಸಾಹಿತ್ಯ ಹಾಗೂ ಹಾಡುಗಾರಿಕೆ ಕ್ಷೇತ್ರದಲ್ಲಿ ಮೇಲಕ್ಕೆ ಬರಲು ನಾನು ಅಲ್ವಸ್ವಲ್ಪವಾದರೂ ಸಹಾಯ ಮಾಡುವ ಎಂದು ಎನಿಸಿತು.

ಹಾಗೂ ಹೀಗೂ ಅಪ್ಪನ ಶಾಲೆ ಕಾರ್ಯಕ್ರಮಕ್ಕೆ ಬಂದಿದ್ದ ನಮ್ಮ ಸೀಮೆಯ ಈಗ ರಾಜ್ಯದ ಪ್ರಮುಖ ಸಾಹಿತಿ, ಸಂಗೀತ ನಿರ್ದೇಶಕ ಎನಿಸಿರುವ ಮಹಾನುಭಾವನನಿಗೆ ಕಾಲ್ ಮಾಡಿ ಭೇಟಿ ಮಾಡುವುದಾಗಿ ಕೇಳಿಕೊಂಡೆ. ನಿಶಾಂತ ನಾನು ಬೈಕ್ ನಲ್ಲಿ ಸ್ವಲ್ಪ ದೂರದಿದ್ದ ಅವ್ರ ಮನೆಗೆ ಹೋಗಿ ಬಂದೆವು. ನಿಶಾಂತನ ಸಾಹಿತ್ಯ ಇಷ್ಟಪಟ್ಟ ಸಾಹಿತಿ ಮುಂದೆ ಎಂದಾದರೂ ಬಳಸುವುದಾಗಿ ಹೇಳಿದರು.

ಮುಂದೆ ನಿಶಾಂತ ಅವರೊಂದಿಗೆ ಸಂಪರ್ಕದಲ್ಲಿದ್ದ, ಆದರೆ, ಆ ಸಾಹಿತಿಯ ರಚನೆಗಳೂ ಕೂಡಾ ಬೇರೆಡೆಯಿಂದ ನಕಲು ಮಾಡಿದ್ದು, ಪ್ರಭಾವಿತವಾಗಿದ್ದು ಎಂಬುದು ಅರಿತ ನಿಶಾಂತ ಅದನ್ನು ಅವರಿಗೆ ತಿಳಿಸುವ ಧೈರ್ಯ ಮಾಡಿದ್ದೆ ತಪ್ಪಾಯಿತು. ಮತ್ತೆ ಆ ಸಾಹಿತಿ ನಿಶಾಂತನ ಭೇಟಿ ಮಾಡಲೆ ಇಲ್ಲವಂತೆ. ಹೋಗ್ಲಿ ಬಿಟ್ಟಾಕು ನನಗೇನು ಹೆಚ್ಚಿಗೆ ನಿರೀಕ್ಷೆ ಇರಲಿಲ್ಲ ಎಂದು ಬಿಟ್ಟ.


ಮುಂದೆ ಒಂದು ದಿನ ಇದ್ದಕ್ಕಿದ್ದಂತೆ ಸಂಜೆ ಸಿಗ್ತೀಯಾ ಒಂದು ವಿಷ್ಯ ಹೇಳ್ಬೇಕು ಅಂದಾ. ನನಗೇನೋ ಅವನು ಹೇಳೋ ವಿಷ್ಯದ ಸುಳಿವು ಮನಸ್ಸಿನಲ್ಲಿ ಓಡಾಡತೊಡಗಿತು. ನಿರೀಕ್ಷೆಯಂತೆ ಅವನು ತನ್ನ ಮದುವೆ ಬಗ್ಗೆ ಪ್ರಸ್ತಾಪಿಸಿದ.

ನನಗೆ ಸಕತ್ ಖುಷಿಯಾಯ್ತು. ತನ್ನ ವೃತ್ತಿ, ಪ್ರವೃತ್ತಿಯನ್ನು ಮೆಚ್ಚುತ್ತಾ ಆತನನ್ನು ಪ್ರೋತ್ಸಾಹಿಸಿದ್ದವಳನ್ನೇ ಆರಿಸಿದ್ದ. ನನ್ನ ಊಹೆಯಂತೆ ಸ್ಮಿತಾ ಅವನಿಗೆ ತಕ್ಕ ಜೋಡಿಯಾಗಿದ್ದಳು. ಮಿತಭಾಷಿ ಸ್ಮಿತಾಳನ್ನು ಒಂದೆರಡು ಸಲ ಕಂಡಿದ್ದೆ ಅಷ್ಟೇ. ಆದರೆ, ಸ್ಮಿತಾಳ ಬಗ್ಗೆ ನಿಶಾಂತ ತೋರುತ್ತಿದ್ದ ಕಾಳಜಿ ಕಂಡು ನನಗಸಿತ್ತು ಎಂಥಾ ಜೋಡಿ ಎಂದು. ಆದರೆ ನಿಶಾಂತನಿಗೆ ಆ ಬಗ್ಗೆ ಹೇಳಿರಲಿಲ್ಲ.

ಎಲ್ಲವೂ ಸುಖಾಂತ್ಯ ಎಂದು ಕೊಂಡಿದ್ದ ಸಮಯದಲ್ಲಿ ಸ್ಮಿತಾಳಿಗೆ ವಿದೇಶದಲ್ಲಿ ಕೆಲ್ಸ ಸಿಕ್ಕಿತ್ತು. ವಿಧಿ ಇಲ್ಲದೆ ನಿಶಾಂತ ಕೂಡಾ ಜೊತೆ ತೆರಳಿದ.. ಅಲ್ಲಿಗೆ ಹೋದ ಮೇಲೂ ನನ್ನ ಸಂಪರ್ಕದಲ್ಲಿದ್ದ. ಆದರೆ, ಈಗ ಆತ ಕೂಡಾ ತನ್ನ ಸಂಸಾರದಲ್ಲಿ ಮುಳುಗಿದ್ದಾನೆ.. ಮತ್ತೆ ನನ್ನ ಪ್ರಜ್ಞೆಯಂತಿದ್ದ ಗೆಳೆಯನ ನಿರೀಕ್ಷೆ ಮಾತ್ರ ಹಾಗೆ ಇದೆ..

Monday, July 25, 2011

ಜಯರಾಮ...ಬರೀ ಫ್ರೆಂಡ್ ಅಷ್ಟೇ ಆಗಿರಲಿಲ್ಲ

ನಮ್ ಲೈಬ್ರರಿ ಆಫೀಸ್ ನಲ್ಲಿ ಎಲ್ಲರಿಗೂ ನನ್ನ ಹಾಗೂ ಜಯರಾಮ್ ಫ್ರೆಂಡ್ ಶಿಪ್ ಕಂಡು ಸಕತ್ ಹೊಟ್ಟೆಕಿಚ್ಚು, ನನಗೆ ಗೆಳೆಯನಿಗಿಂತ ಹೆಚ್ಚಾಗಿ ಸ್ವಂತ ಅಣ್ಣನಂತಿದ್ದ. ಅಫೀಸ್ ನಲ್ಲೂ ಏನ್ರಿ ನಿಮ್ ಜಯರಾಮಣ್ಣ ಏನಂತಾನೇ? ಎಂದು ನನ್ನನ್ನು ಕಿಚಾಸುತ್ತಿದ್ದರು. ಆದ್ರೆ ನಾನು ಯಾರಿಗೂ ಕೇರ್ ಮಾಡ್ತಾ ಇರ್ಲಿಲ್ಲ. ನನ್ನ ವೃತ್ತಿ ಜೀವನದಲ್ಲಷ್ಟೇ ಅಲ್ಲ. ನನ್ನ ವೈಯಕ್ತಿಕ ಜೀವನದ ಏಳಿಗೆಗೂ ಜಯರಾಮಣ್ಣ ಹಲವು ರೀತಿ ಕಾರಣನಾಗಿದ್ದಾನೆ.

ಅವನ ಬಗ್ಗೆ ಹೇಳ್ತಾ ಇದ್ರೆ ಸಮಯ ಸಾಲದು. ಜಯರಾಮ ಮಂಗಳೂರು ಕಡೆಯವನು. ಸ್ವಲ್ಪ ಸಿಡುಕಿನ ಸ್ವಭಾವ, ಸ್ವಾಭಿಮಾನಿ, ಕೀಟಲೆ ಬುದ್ಧಿ ಬೇರೆ. ಅವನ ಪತ್ನಿ ರಮಾ ನಮ್ಮೂರ ಕಡೆಯವಳು. ಗಣೇಶ ಅವರ ಪುಟ್ಟ ಕೂಸು. ಅಪ್ಪನಂತೆ ತರ್ಲೆ.

ಜಯರಾಮ ಡಬ್ಬಲ್ ಡಿಗ್ರಿ ಮುಗಿಸಿದ್ದ. ನಾನು ಆಗಿನ್ನೂ ಡಿಗ್ರಿ ಮುಗಿಸಿ ಕೆಲಸಕ್ಕೆ ಸೇರಿದ್ದೆ.ನನಗೋ ಎಲ್ಲಾ ಹೊಸತು. ಕಂಪ್ಯೂಟರ್ ಗೊತ್ತಿಲ್ಲ. ಪಾಠ ಮಾಡೋ ಕಲೆನೂ ಕರಗತವಾಗಿರಲಿಲ್ಲ. ಗದ್ದೆ ನಾಟಿ ಕೆಲ್ಸ, ಮನೆ ಕೆಲಸ ಬಿಟ್ರೆ ಹಾಡು ಹಸೆ, ಕುಂಟೆಬಿಲ್ಲೆ, ಚೌಕಾಭಾರ ಅದು ಇದು ಆಡುತ್ತಾ ಬೆಳೆದವಳು. ವೃತ್ತಿ ಜೀವನಕ್ಕೆ ನಾನು ಕಾಲಿರಿಸಿದ್ದು ಕೆಲಸ ಮಾಡಿದ್ದು ಕೆಲ ವರ್ಷವಷ್ಟೇ ಎಂಬುದು ನನ್ನ ಪಾಲಿನ ಪರಮ ಸಂತೋಷದ ಸಂಗತಿ.

ಆದರೆ, ಇದ್ದಷ್ಟು ದಿನ ಜಯರಾಮನ ತಲೆ ತಿನ್ನುತ್ತಲೇ ಇದ್ದೆ. ನನ್ನ ಕಾಟ ಹೆಚ್ಚಾಗಿ ಎಷ್ಟೋ ಸಾರಿ 'ನಿ ಮನೆಗೆ ಹೋಗ್ತಿಯಾ ಸುಮ್ನೆ' ಅಂತಿದ್ದಾ.. ನಮ್ಮೂರಿಗೆ ಇರೋದು ಒಂದೇ ಬಸ್ ಅದು ಬರೋದು ಸಂಜೆನೇ ಎಂದು ಕಿಸಿತ್ತಿದ್ದೆ.

ಪ್ರತಿನಿತ್ಯ ಎಷ್ಟೇ ಕಿತ್ತಾಡಿದರೂ ಸಂಜೆ ಪಾನಿಪೂರಿ ತಿನ್ನಿಸುವುದನ್ನು ಮರೆಯುತ್ತಿರಲಿಲ್ಲ. ಇಬ್ಬರಿಗೂ ಇಷ್ಟವಾದ ಇನ್ನೊಂದು ಅಂಶ...ಮಳೆ. ಸುತ್ತಮುತ್ತ ಎಲ್ಲೆ ಮಳೆ ಹುಯ್ಯುತ್ತಲಿದ್ದರೂ ಅಲ್ಲಿ ನಾವು ಹಾಜರ್. ಕೆಲವೊಮ್ಮೆ ರಮಾ ಹಾಗೂ ಗಣೇಶನನ್ನು ಕರೆದುಕೊಂಡು ನಮ್ಮೂರ ಬಳಿ ಇದ್ದ ಪಕ್ಷಿಧಾಮಕ್ಕೆ ಮಳೆಯಲ್ಲೇ ಬಂದು ಬಿಡುತ್ತಿದ್ದ.

ಎಲ್ಲಾ ಚೆನ್ನಾಗಿತ್ತು.. ನಾನು ಕೆಲ್ಸ ಬಿಡೋ ತನಕ.. ನಾವು ಕೆಲ್ಸ ಮಾಡುತ್ತಿದ್ದ ಸಂಸ್ಥೆಗೆ ನಾನೇ ಗುಡ್ ಬೈ ಹೇಳಿದ್ನೋ ಅಥವಾ ಅವರೇ ನಿಮ್ಮ ಸೇವೆ ಸಾಕು... ಎಂದ್ರೋ ಗೊತ್ತಾಗಲಿಲ್ಲ.. ಎಲ್ಲಾ ಸಡನ್ ಆಗಿ ಬಿಡ್ತು.

ಆಮೇಲೆ ಜಯರಾಮ ಸಿಗೋದು ಕಷ್ಟ ಆಯ್ತು. ಮೊಬೈಲ್ ಇಲ್ಲದ ಕಾರಣ.. ಲ್ಯಾಂಡ್ ಲೈನ್ ಗೆ ಕರೆ ಮಾತಾಡ್ತಾ ಇದ್ದೆ. ಆದ್ರೆ ನಮ್ಮ ಆಫೀಸಿನಲ್ಲಿ ಫೋನ್ ನಲ್ಲಿ ಮಾತಾಡೋದಕ್ಕೆ ನಿರ್ಬಂಧವಿತ್ತು..ಮನೆಗೂ ಆಫೀಸಿಗೂ ಏನಿಲ್ಲ ಎಂದರೂ 15 ಕಿ.ಮೀ...

ಬರಬರುತ್ತಾ ಜಯರಾಮ ಅವನ ಕುಟುಂಬ ನೋಡೋದೆ ಕಷ್ಟ ಆಯ್ತು.. ಬೇಸಿಗೆಯಲ್ಲಾದರೆ ಒಂದಿಲ್ಲ ಒಂದು ಊಟದ ಮನೆಯಲ್ಲಿ ದರ್ಶನ ಆಗುತ್ತಿತ್ತು. ಈಗ ಮಳೆಗಾಲ..ಆಫೀಸಿಗೂ ರಜೆ.. ನನಗೋ ಕೆಲ್ಸವಿಲ್ಲದೆ ಒಂದು ರೀತಿ ಸಜೆ..ಜಯರಾಮ ಏನಾದ? ತಿಳಿಯದೇ ಮನಸ್ಸು ತೊಳಲಾಟದಲ್ಲಿತ್ತು..

ಮನಸ್ಸು ಸಂಪೂರ್ಣ ಖಾಲಿಯಾದ ಪರಿಸ್ಥಿತಿಯಲ್ಲಿ ಕಾಣಿಸಿಕೊಂಡವನೇ ನಿಶಾಂತ ನಾಯಕ.. ಹೆಸರೇ ಒಂದು ರೀತಿ ಆಕರ್ಷಣೆಯಾಗಿತ್ತು ನನಗೆ.. ನಿಶಾಂತನಿಂದ ಮನಸ್ಸಿಗೆ ಪ್ರಶಾಂತ ಸ್ಥಿತಿ ಮತ್ತೆ ಆವರಿಸಿತು.[ಸಶೇಷ]

Sunday, July 24, 2011

ಮಳೆಯ ಹನಿ ಜೊತೆ ಮರೆಯದ ಮಾಯೆಯ ಮನಸ್ಸು



ಮತ್ತೆ ಮಳೆ ಹನಿ ಸುರಿಯುತ್ತಿದೆ. ನೆನಪಿನ ಗರಿ ಒಂದೊಂದಾಗಿ ಬಿಚ್ಚ ತೊಡಗಿದೆ.

ಸುಮಾರು ಒಂದು ವರ್ಷ ಎರಡೂವರೆ ತಿಂಗಳ ನಂತರ ಬರೆಯಬೇಕೆಂಬ ಹಂಬಲ ಉಂಟಾಗಿದೆ.

ಇದಕ್ಕೆ ಮಳೆ ಹಿಮ್ಮೇಳ ಜೊತೆಗೂಡಿದೆ ಅಥವಾ ನನ್ನ ಮನಸ್ಸು ಮಳೆಗಾಲಕ್ಕೆ ಕಾದು ಕೂತ್ತಿತ್ತೋ ಗೊತ್ತಿಲ್ಲ. ಏನೋ ಇರಲಿ...

ಈಗ ಒಂದು ಕಥೆ ಹೇಳುತ್ತೇನೆ. ಸ್ನೇಹಿತರ ಕಥೆ ಅದರಲ್ಲಿ ಒಂದಿಷ್ಟು ಪ್ರೇಮ ಕಥೆಗಳು ಉಪಕಥೆಯಾಗಿ ಇಣುಕುತ್ತವೆ. ಐದಾರು ವರ್ಷಕ್ಕೂ ಹಳೆಯದಾದ ನೈಜ ಘಟನೆಗಳನ್ನು ಆಧರಿಸಿದ ಇದು ನನ್ನ ನಿಮ್ಮ ಕಥೆ ಆಗಿರಲೂ ಬಹುದು.

ಪ್ರೇಮ, ಕಾಮದ ಸೋಂಕು ತಗುಲದ ಅನ್ಯೋನ್ಯ ಗೆಳೆತನಕ್ಕೆ ಮತ್ತೊಂದು ಹೆಸರು ಎಂಬಂತ್ತಿದ್ದ, ಎಂಬಂತೆ ಇರುವ ಗೆಳೆಯ, ಗೆಳತಿಯರ ಕಥೆ..ಒಂದಿಷ್ಟು ಮುನಿಸು..

ಒಂದಿಷ್ಟು ಕಾರಣವಿಲ್ಲದ ವಿದಾಯಕ್ಕೆ ಮುನ್ನುಡಿ ಹಾಡಿದ ಸ್ನೇಹದ ಪರಿಧಿಯೊಳಗೆ ಮತ್ತೊಮ್ಮೆ ಇಳಿಯುವ ತವಕದಲ್ಲಿ ನಾನಿದ್ದೇನೆ...ಮಿಕ್ಕಿದ್ದು ನಾಳೆಗೆ....

Saturday, April 10, 2010

ತೇಜಸ್ವಿ ಬರೀ ಸ್ಮಾರಕಕ್ಕೆ ಸೀಮಿತವಾಗದಿರಲಿ!


ಅಂತೂ ಬಿಡುವು ಮಾಡಿಕೊಂಡು ಬ್ಲಾಗ್ ಗೆ ಅಂತಾ ನಾಲ್ಕು ಸಾಲು ಬರೆಯೋಣ ಅನ್ನಿಸಿತು. ಕೈಲಿ ಪೆನ್ ಹಿಡಿದು ಬಿಳಿ ಹಾಳೆ ಮೇಲೆ ಅಕ್ಷರ ಯಜ್ಞ ಮಾಡಲು ಕೂತರೆ, ಆಗ ತಾನೆ ಕೊಲ್ಲೂರಲ್ಲಿ ಅಪ್ಪನ ಕೈ ಹಿಡಿದು ಓನಾಮ ಬರೆದ ನೆನಪು ಮರುಕಳಿಸಿತು.

ಬರವಣಿಗೆ ಇರಲಿ, ಓದಿರಲಿ,ಯಾವುದೇ ಕೆಲಸವಿರಲಿ ಹೆಚ್ಚು ದಿನ ವಿರಾಮದ ನಂತರ ಮತ್ತೆ ಶುರು ಮಾಡಿದರೆ ಆಗುವ ಎಲ್ಲಾ ಅನನುಕೂಲಗಳ ಹಿನ್ನೆಲೆ ಇಟ್ಟುಕೊಂಡೇ ಬರೆಯಲು ಕೂತೆ. ಅನ್ನಿಸಿದ್ದನ್ನೆಲ್ಲ ಬರೆದು ಮುಗಿಸಿಬಿಡಬೇಕೆಂಬ ಹಂಬಲವಂತೂ ನನಗಿಲ್ಲ.

ಬರೆಯಲು ಸರಿ ಕಾರಣ ಸಿಗಲಿಲ್ಲವೆಂದರೆ ಮನಸ್ಸು ಸಹಕರಿಸುವುದಿಲ್ಲ. ಒಂದು ಸಾಲು ಸೃಷ್ಟಿಯೂಗುವುದಿಲ್ಲ. ಇರಲಿ, ಈಗ ನಮ್ಮಲ್ಲಿ ನಾಲ್ಕಾರು ದಿನದಿಂದ ಬಿಟ್ಟು ಬಿಡದಂತೆ ಕಣ್ಣಾಮುಚ್ಚಾಲೆ ಆಡುತ್ತಿರುವ ಮಳೆಯ ಕಾರಣವೋ ಏನೋ ಬರೆಯುವ ಉಮೇದು ಹುಟ್ಟಿತು.

ತೇಜಸ್ವಿ ಮರೆಯಾಗಿ ೩ ವರ್ಷ ಕಳೆಯಿತು. ಮೊನ್ನೆ ಕುಪ್ಪಳಿಯಲ್ಲಿ ಸ್ಮಾರಕವೂ ಸ್ಥಾಪನೆಯಾಯಿತು. ನೆನ್ನೆ ನಾರ್ವೆ ಕಡೆ ಹೊರಟಿದ್ದವಳು ತುಸು ದೂರ ಹಾಗೆ ಮುಂದೆ ಸಾಗಿ ಸ್ಮಾರಕವನ್ನು ನೋಡಿ ಬಂದೆ. ಆಗಿಂದ ಮನದಲ್ಲಿ ಪ್ರಶ್ನೆ ಉದ್ಭವಿಸುತ್ತಲೇ ಇತ್ತು. ತೇಜಸ್ವಿಗೆ ಸ್ಮಾರಕ ಅಗತ್ಯವೇ? ಯಾವ ಪ್ರಶಸ್ತಿ, ಪಾರಿತೋಷಕ, ಹಾರ ತುರಾಯಿ, ಸ್ಮಾರಕ, ಬೆಂಬಲಿಗರ ದಂಡನ್ನು ನೆಚ್ಚಿಕೊಳ್ಳದ ಎನ್ನ ಗುರುವನ್ನು ಸ್ಮಾರಕ ಎಂಬ ಸೌಧದಲ್ಲಿ ಬಂಧಿಸುವುದು ತರವೇ ಎಂದು.

ಮೂಡಿಗೆರೆಯಲ್ಲಿ ತೇಜಸ್ವಿ ಆಶಯಗಳನ್ನು ಸಾಕಾರಗೊಳಿಸಲು ಒಂದು ಪ್ರತಿಷ್ಠಾನ ಇದೆ. ಅದು ನಿಧಾನಗತಿಯಲ್ಲಿಯಾದರೂ ತನ್ನ ಕಾರ್ಯವನ್ನು ಆರಂಭಿಸಿದೆ. ಆದರೆ, ಕುಪ್ಪಳಿಯಲ್ಲಿ ತೇಜಸ್ವಿ ಹೆಸರಿನಲ್ಲಿ ಏಳು ಬೃಹತ್ ಕಂಬಗಳನ್ನು ನೆಟ್ಟು, ಅದರ ಅರ್ಥ ವಿವರಣೆ ಕೂಡ ನೀಡದೆ, ತೇಜಸ್ವಿ ಆರಾಧಕರ ದಂಡು ನಿರ್ಮಿಸುವುದು ಸರಿಯೆ.

ಒಂದು ವಿಷಯ ನೆನಪಿರಲಿ, ತೇಜಸ್ವಿಯಲ್ಲಿ ಹತ್ತಿರದಿಂದ ಬಲ್ಲ ಆಪ್ತರಿಗಿಂತ ಹತ್ತು ಪಟ್ಟು ಹೆಚ್ಚು ಜನ ಅವರನ್ನು ಮಾನಸಿಕ ಗುರುವಾಗಿ ಭಾವಿಸಿ, ಪರಿಸರ ಸಂರಕ್ಷಣೆಯೋ, ಬರವಣಿಗೆಯೋ, ಫೋಟೋಗ್ರಾಫಿಯೋ, ತಂತ್ರಾಂಶವೋ ಮತ್ತೊಂದು ಕ್ಷೇತ್ರದಲ್ಲಿ ಅವರ ಆಶಯವನ್ನು ಪಾಲಿಸುತ್ತಾ ಬಂದಿದ್ದಾರೆ.

ಈ ಸಂಖ್ಯೆ ಬೆಳೆಯುತ್ತಲೇ ಇದೆ. ಇವರಲ್ಲಿ ಹೆಚ್ಚು ಜನ ಪ್ರತ್ಯಕ್ಷವಾಗಿ ತೇಜಸ್ವಿಯನ್ನು ದೂರದಿಂದಾದರೂ ಕಂಡವರಲ್ಲ. ಕೇವಲ ಅವರ ಬರಹಗಳ ಮೂಲಕ ಸ್ಫೂರ್ತಿ ಪಡೆದು ಸದಭಿರುಚಿ ಕಾರ್ಯಗಳಲ್ಲಿ ತೊಡಗಿಕೊಂಡವರು.

ಕಾಡಿನಲ್ಲಿ ತಾನೇ ತಾನಾಗಿ ಬೆಳೆವ ಮರಗಳ ನೆರಳನಲ್ಲಿ, ಹಕ್ಕಿಗಳ ಇಂಪಿನ ನಡುವೆ ತೇಜಸ್ವಿ ಒಂದಾಗಿ ಇರಲಿ ಎಂಬ ಉದ್ದೇಶದಿಂದ ಕುಪ್ಪಳಿಯಲ್ಲಿ ಸ್ಮಾರಕ ಸ್ಥಾಪಿಸಿದ್ದರೆ ಸರಿ. ಇಲ್ಲವಾದರೆ, ಎಲ್ಲರಂತೆ, ತೇಜಸ್ವಿ ಎಂಬ ಬ್ರಾಂಡ್ ನೇಮ್ ಹಿಂದೆ ಬಿದ್ದು, ಗಲ್ಲಿ ಗಲ್ಲಿಗೆ ಹೆಸರು ಮೂಲೆ ಮೂಲೆಗೆ ಸ್ಮಾರಕ, ಒಂದಿಷ್ಟು ಅವರ ಹೆಸರಿನಲ್ಲಿ ಪ್ರಶಸ್ತಿ, ಪುರಸ್ಕಾರ ಎಂಬಂತಾದರೆ... ಕ್ಷಮಿಸಿ, ತೇಜಸ್ವಿಗೆ ಅದು ಮಾಡುವ ಅಪಮಾನವಾದೀತು.

ಸ್ಮಾರಕ ಮಾಡಲು ಯಾರು ಬೇಡಲಿಲ್ಲ. ನಮ್ಮ ಇಷ್ಟ ನಾವು ಮಾಡಿದೆವು ಎಂದು ಅವರ ಕುಟುಂಬ, ಆಪ್ತರು ಹೇಳಬಹುದು. ಆದರೆ, ಇದು ಖಾಸಗಿ ವಿಷಯವಲ್ಲ. ಇರಲಿ, ತೇಜಸ್ವಿ ಸ್ಮಾರಕ ಸ್ಥಾಪನೆಯಾಯ್ತು ಮುಂದೇನು? ಸುತ್ತಮುತ್ತಲ ಅರಣ್ಯ ಸಂರಕ್ಷಣೆಗೆ ಸ್ಮಾರಕ ಸ್ಥಾಪಕರು ಮುಂದಾಗಬಹುದು. ಕವಿಮನೆ(ಕುವೆಂಪು ಮೂಲಮನೆ) ಯಂತೆ ತೇಜಸ್ವಿ ಹೆಸರಲ್ಲಿ ಪರ್ಣಕುಟೀರ ನಿರ್ಮಿಸಬಹುದು.

ಅಲ್ಲಿ ಅಧ್ಯಯನ ಪೀಠ ಸ್ಥಾಪಿಸಬಹುದು, ಆಗಾಗ ಸಾಂಸ್ಕೃತಿಕ ಕಾರ್ಯಕ್ರಮಗಳು, ಚರ್ಚಾಗೋಷ್ಠಿಗಳು, ತೇಜಸ್ವಿ ಆಗಿದ್ದರೂ, ಹೀಗಿದ್ದರೂ, ಹಾಗೆ ಮಾಡ್ಬೇಕು, ಹೀಗೆ ಮಾಡ್ಬೇಕು ಎಂದೆಲ್ಲಾ ಬೊಬ್ಬೆ ಹಾಕಬಹುದು. ನಿಮ್ಮ ನಿಮ್ಮ ಕಾರ್ಯಗಳನ್ನು ನಿಮ್ಮ ನಿಮ್ಮ ಚೌಕಟ್ಟಿನಲ್ಲಿ ಸರಿಯಾಗಿ ನಿಭಾಯಿಸಿದರೆ ಅಷ್ಟು ಸಾಕು. ತೇಜಸ್ವಿ ಹೆಸರಿನಲ್ಲಿ ಪೋಗ್ರಾಂ ಮಾಡಿದರೆ ಯಾವ ಪುರಷಾರ್ಥ ಸಾಧನೆಯೂ ಆಗುವುದಿಲ್ಲ.

ತೇಜಸ್ವಿ ಎಂದರೆ ಒಂದೂವರೆ ಅಡಿಪಾಯದ ಮೇಲಿನ 10 ಅಡಿ ಎತ್ತರದ 7 ಕಂಬಗಳು ಎಂದು ಆಗದಿರಲಿ. ಕಲ್ಲಿನ ಪಕ್ಕ ನಾಲ್ಕು ಮರ ನೆಟ್ಟು ಹಕ್ಕಿಗಳನ್ನು ಆಹ್ವಾನಿಸಿ, ಅಲ್ಲೊಂದು ಕಾಡಿನ ನಡುವೆ ಇರುವ ನಿಗೂಢ ಸ್ತಂಭಗಳಿಗೆ ಆಕರ್ಷಣೆ ತುಂಬುತ್ತಾ, ತುಂಬುತ್ತಾ, ಸರಿ ಆಶಯವನ್ನು ಮರೆಯುವಂತೆ ಆಗದಿರಲಿ.

ಏನಾದರೂ ಮಾಡಲೇ ಬೇಕು ಅಂತಾದರೆ, ಕಾಡು ಉಳಿಸಿ, ತೇಜಸ್ವಿ ಪುಸ್ತಕಗಳನ್ನು ಕೊಳ್ಳಿರಿ, ಪರಿಸರ ಉಳಿಸಿ, ಬೆಳಸಿ, ಮಕ್ಕಳಿಗೆ ಒಂದಿಷ್ಟು ಅರಿವು ಮೂಡಿಸಿ, ಸಾತ್ವಿಕ ಬದುಕು ಬಾಳಿರಿ, ನೀವು ಬದುಕಿ ಪರರನ್ನು ಬಾಳಿಸಿ ಅಷ್ಟು ಮಾಡಿ ಸಾಕು. ಇದ್ದಾಗ ಯಾರ ಹಿಡಿತಕ್ಕೂ ಸಿಗದ ತೇಜಸ್ವಿಯನ್ನು ಈಗ ದಯವಿಟ್ಟು ನಿಮ್ಮ ಕೈಗೊಂಬೆ ಮಾಡಿಕೊಳ್ಳಬೇಡಿ.

Saturday, April 11, 2009

ಮತ್ತದೇ ಬೇಸರ, ಅದೇ ಹುರುಪು


"ಮಲೆಸೀಮೆಯಲ್ಲಿ ಈ ಪಾಟಿ ಬಿಸಿಲು ಕಂಡಿದ್ದೇ ಇಲ್ಲಾ ಭಟ್ಟರೇ, ಎಲ್ಲಿಗಾದ್ರೂ ಹೊಗುವ ಬಂದ್ರೆ ರಣಬಿಸಿಲು ನೆತ್ತಿ ಸುಡುತ್ತೆ ?" , ಮನೆ ಮುಂದಿನ ಚಿಟ್ಟೆಯಲ್ಲಿ ವಿರಮಿಸಿದ್ದ ಮೇಗಿನ ಗದ್ದೆ ರಾಮಣ್ಣ, ಅಣ್ಣ (ಅಪ್ಪಯ್ಯ)ನ ಜೊತೆ ಹರಟುತ್ತಿದ್ದ.

ಅವನ ಮಾತಿಗೆ ಗೌಣುಹಾಕುತ್ತಾ ನನ್ನೆಡೆ ತಿರುಗಿದರು. ಅದು ರಾಮನಿಗೆ ಕಾಫಿ ಸಮಾರಾಧನೆ ಅಣಿ ಮಾಡು ಎನ್ನುವ ಸೂಚನೆ. ನಾನು ಒಳನಡೆದೆ.

ಇಬ್ಬರೂ ಮಟ ಮಟ ಮಧ್ಯಾಹ್ನ ಕಾಫಿ ಹೀರಿ ಮತ್ತೆ ಮಾತಲ್ಲೆ ಊಟ ಮುಗಿಸಿದ್ದರು. ರಾಮಣ್ಣನಿಗೆ ಬೇಸಿಗೆಯಲ್ಲಿ ಸಾಮಾನ್ಯವಾಗಿ ಓಡಾಟ ಹೆಚ್ಚು, ಅದೂ ಯುಗಾದಿ ನಂತರ ಸುಮಾರು ಶುಭ ಸಮಾರಂಭಗಳಿಗೆ ಹೇಳಿಕೆ ನೀಡುವುದು. ಚಪ್ಪರ ಹಾಕುವುದು, ಮಂಟಪ ಮಾಡುವುದರಿಂದ ಹಿಡಿದು ಎಲ್ಲಾ ಕೆಲ್ಸಗಳಲ್ಲಿ ವ್ಯಸ್ತನಾಗಿರುತ್ತಿದ್ದ.

ಹೀಗೆ ಸದಾ ಚಟುವಟಿಕೆಯ ಜೀವಿ ರಾಮಣ್ಣನಿಗೂ ಬಿಸಿಲಿನ ಝಳ ಈ ಬಾರಿ ಚುರುಕು ಮುಟ್ಟಿಸಿದ್ದಂತೂ ನಿಜ. ಚಿಕ್ಕಂದಿನಿಂದ ಆತನನ್ನು ನಾವೆಲ್ಲಾ ರಾಮಣ್ಣ ಅಂತೆಲೆ ಕರೆಯೋದು.

ಆದ್ರೆ ಆತನಿಗೆ ಏನಿಲ್ಲಾ ಅಂದ್ರೂ 45-50 ರ ಪ್ರಾಯ ಇರಬಹುದು ಅಥವಾ ಅದಕ್ಕಿಂತ ಹೆಚ್ಚಿರಬಹುದು. ಆದ್ರೆ ಆತನ ಚುರುಕುತನ ನಮ್ಮ ವಯಸ್ಸಿನವರಿಗೂ ಇಲ್ಲ. ಎಣ್ಣೆಗಂಪು ಬಣ್ಣದ ರಾಮಪ್ಪನ ಆಸ್ತಿ ಎಂದೂ ಮಾಸದ ಮುಗ್ಧ ನಗು.

ಎರಡು ಕಿವಿಗೂ ಒಂಟಿ ಧರಿಸಿ, ಸದಾ ಅದೇ ಮಾಸಿದ ಬಿಳಿ ಅಂಗಿ ಮೊಳಕಾಲಿಗಿಂತ ಮೇಲೆ ಉಟ್ಟ ಕಚ್ಚೆ ಪಂಚೆ. ಕೈಲಿ ಎಂದಿನಂತೆ ಕರಿ ಬಣ್ಣದ ಛತ್ರಿ. ಹೊಗೆಸೊಪ್ಪು ಹೊಸೆಯುತ್ತಾ ಗೊಟಡಿಕೆ ಮೆಲ್ಲುತ್ತಾ ಶೃಂಗೇರಿ, ಮೂಡಿಗೆರೆ, ಕೊಪ್ಪ, ಬಾಳೆಹೊನ್ನೂರು, ಶಿವಮೊಗ್ಗ.... ಸೀಮೆಯ ವಕ್ತಾರನಂತೆ ಸದಾ ಓಡಾಡುವ ಇವನನ್ನು ನೋಡದವರೆ ವಿರಳ.

ಸಹಕಾರ ಸಾರಿಗೆ, ನಿಸ್ಮಿತಾ, ಮಲ್ಲಿಕಾರ್ಜುನ, ಕೆಕೆಬಿ, ತುಂಗಭದ್ರಾ. ಅವಿಭಜಿತ ಶಂಕರ್ ಟ್ರಾನ್ಸ್ ಪೋರ್ಟ್ ಹೀಗೆ ಎಲ್ಲಾ ವಾಹನದಲ್ಲೂ ಡ್ರೈವರ್ ಪಕ್ಕದ ಬದಿ ಸೀಟು ಖಾಯಂ.

ಸಾಮಾನ್ಯವಾಗಿ ರಾಮಣ್ಣ ಬಸ್ ಸ್ಪಾಪ್ ಗಳಲ್ಲಿ ನಿಂತು, ಬಸ್ ಕಾಯ್ದು ಹತ್ತುತ್ತಿದ್ದದ್ದೆ ಕಮ್ಮಿ. ಮೊದಮೊದಲೆಲ್ಲಾ ಇವನು ಕೈ ಒಡ್ಡಿದ ಕಡೆಯೆಲ್ಲಾ ಬಸ್ ನಿಲ್ಲಿಸುತ್ತಿದ್ದ ಡ್ರೈವರ್ ಗಳು, ಬರಬರುತ್ತಾ ಇವನ ಕಡೆ ಉದಾಸೀನರಾಗುತ್ತಾ ಬಸ್ ಹಾಗೆ ಹೊಡೆದುಕೊಂಡು ಹೋಗತೊಡಗಿದರು.

ಆದ್ರೆ ಇವ ಬಿಡಬೇಕಲ್ಲ. ತಿಂಗಳ ಕೆಳಗೆ ಜೈಪುರದಿಂದ ಮುಂದೆ ಕಲ್ಕೆರೆಗೂ ಮುನ್ನ ಸಾಮಾನ್ಯವಾಗಿ ಕೈ ಒಡ್ಡಿ ಬಸ್ ನಿಲ್ಲಿಸುತ್ತಿದ್ದ ರಾಮಣ್ಣ, ಮುಷ್ಟಿಯಲ್ಲಿ ಕಲ್ಲು ಹಿಡಿದು ಗಣ ಬಂದ ಹಾಗೆ ಆಡುತ್ತಾ ಬಸ್ ಗೆ ಅಡ್ಡವಾಗಿ ನಿಂತ್ತಿದ್ದನಂತೆ. ಡ್ರೈವರ್ ಬ್ರೇಕ್ ಒತ್ತಿದ್ದ ರಭಸಕ್ಕೆ ಹಲವರ ಮುಸುಡಿ, ಕಿವಿ ಮೂಗುಗಳು ಜಖಂ ಆಗಿದ್ದಂತೂ ಸತ್ಯ.

ಆಮೇಲೆ ಏನೂ ಅರಿಯದವನಂತೆ ಮೆಲ್ಲಗೆ ಬಸ್ ಏರಿ ತನ್ನ ಸೀಟಿನಲ್ಲಿ ಕೂತ ರಾಮಣ್ಣನಿಗೆ ಕಂಡೆಕ್ಟರ್ ಬೈಗುಳ ಪುಷ್ಪವೃಷ್ಟಿಯಂತೆ ಅನಿಸಿ, ಎಂದಿನ ಪೆಕರು ನಗೆ ನಕ್ಕನಂತೆ. ಕಡೆಗೆ ಕಂಡೆಕ್ಟರ್ ಹಣೆ ಬಡಿದುಕೊಂಡು ಹೋದನಂತೆ.

ಈ ಬಗ್ಗೆ ಅಣ್ಣ ಪ್ರಶ್ನಿಸಿ ಯಾಕೋ ರಾಮ ಹೀಗೆಲ್ಲಾ ಮಾಡಿದೆಯಂತೆ ಅಂದ್ರೆ, "ಅಯ್ಯೋ ಬಿಡಿ ಭಟ್ಟರೆ, ಹುಡುಗು ಮುಂಡೇವು. ಅವಕ್ಕೆನೂ ಗೊತ್ತು. ಅವರಪ್ಪನ ಕಾಲದಿಂದ ನಾನು ಬಸ್ ನಲ್ಲಿ ಓಡಾಡಿದ ಸರ್ವೀಸ್ ಇದೆ ನಂಗೆ. ಒಂಚೂರು ಮರ್ಯಾದೆ ಕೊಟ್ಟು ಅಭ್ಯಾಸ ಇಲ್ಲ ಈಗೀನಾ ಮುಂಡೆವಕ್ಕೆ" ಅನ್ನೋದೆ.

ರಾಮಣ್ಣನ್ನಂತವರು ನಮ್ಮ ಸೀಮೆಯಲ್ಲಿ ಹುಡುಕಿದರೆ ನೂರು ಮಂದಿ ಸಿಗುತ್ತಾರೆ. ಆದ್ರೆ ಇತ್ತೀಚೆಗೆ ರಾಮಣ್ಣನಂಥಹ ಟಿಪಿಕಲ್ ಮಲೆನಾಡಿನ ಜೀವಿಗಳ ಬಗ್ಗೆ ಒಂದಷ್ಟು ಹೆಚ್ಚಿನ ಆಸ್ಥೆ ಮೂಡಿತ್ತು.

ಅದಕ್ಕೆ ಕಾರಣ ಇಷ್ಟೆ. ತೇಜಸ್ವಿ ಅವರ ಕಣ್ಮರೆಯ ವಿಷಾದ ರಾಗ, ಮತ್ತೆ ಇಂಥಹ ಜನ ನೋಡಿ ಮೂಡುವ ಹುರುಪು. ಕಾಲ ಎಲ್ಲವನ್ನೂ ಮರೆಸುತ್ತದೆ ಅನ್ನೋ ಮಾತನ್ನು ಕಾಲ ಎಲ್ಲವನ್ನು ಜೀವಂತ ಇರಿಸುತ್ತದೆ. ಹೀಗಲ್ಲಾದಿದ್ದರೆ ಹಾಗೆ ಎಂದು ತಿದ್ದುಕೊಳ್ಳೋದು ವಾಸಿ ಅನಿಸುತ್ತದೆ.

ತೇಜಸ್ವಿ ಮರೆತರೆ ನಮ್ಮನ್ನು ನಾವು ಮರೆತಂತೆ
ಅಕ್ಕಾ ಎಷ್ಟು ಚೆಂದಿತ್ತು ಗೊತ್ತಾ? ಮೇಷ್ಟ್ರು ಮೊದಲು ಹೇಳಿದಾಗ ನಾವು ಎಲ್ಲೋ ಇಲ್ಲಿ ಮನೆ ಹತ್ರಾ ಇರೋ ಕಾಡು ತರಾನೇ ಏನೋ ತೋರಿಸಿ ಕಳಿಸ್ತಾರೆ ಅಂತಾ ಮಾಡಿದ್ವಿ. ತೇಜಸ್ವಿ ಅಜ್ಜ ಓಡಾಡಿದ ಕಾಡಂತೆ ಕಣೆ. ಹೋಗ್ ನಿಂಗೆ ಪುಣ್ಯ ಇಲ್ಲ ಹೀಗೆ ಸಾಗಿತ್ತು ಪುಟ್ಟ ಪೋರಿಯ ಮಾತಿನ ಝರಿ..

ತೇಜಸ್ವಿ ಅವರ ನೆನಪಿನಲ್ಲಿ ಏ.5 ರಂದು ನಡೆದ ಚಾರಣ ಕಾರ್ಯಕ್ರಮಕ್ಕೆ ಹೋಗಿ ಬಂದ ಮೇಲೆ ವರ್ಷಿಣಿಯ ಸಂಭ್ರಮಕ್ಕೆ ಎಣೆಯಿಲ್ಲ. ಬರೀ ಮನೆ ಸುತ್ತಣ ಕಾಡಿನಲ್ಲಿ ನಮ್ಮ ಜೊತೆ ಅಲೆಯುತ್ತಾ ಇದ್ದ ಹುಡುಗಿಗೆ ಒಮ್ಮೇಲೆ ಹೊಸದಾದ ಸಿರಿ ಕಂಡ ಅನುಭವ.

ಮೂಡಿಗೆರೆಯ ವಿಸ್ಮಯಾ ಟ್ರಸ್ಟ್ ನ ಚಾರಣ ಕಾರ್ಯಕ್ರಮಕ್ಕೆ ಗೆಳತಿಯರೊಡನೆ ನನ್ನ ಚಿಕ್ಕನ ಮಗಳು ೧೦ ವರ್ಷದ ವರ್ಷಿಣಿ ಅಲ್ಲಲ್ಲ ವಾಕ್ ವರ್ಷಿಣಿ(ಮಾತಿನ ಮಳೆಗೆರೆಯುವವಳು ಅಹಹ್ಹಹಹಾ) ಕೂಡ ಹೋಗಿದ್ದಳು.

ಆರೋಗ್ಯ ಕೊಂಚ ಏರುಪೇರಾದ ಕಾರಣ ನೆಚ್ಚಿನ ಗುರು ತೇಜಸ್ವಿ ಅಲೆದಾಡಿದ ತಾಣಕ್ಕೆ ನಾನು ಹೋಗಲಾಗಲಿಲ್ಲ. ಆದರೆ, ವರ್ಷಿಣಿಯ ಮಾತು, ಸಂಭ್ರಮ ಆ ನೋವನ್ನು ಮರೆ ಮಾಡಿತು.

ಅಲ್ಲಿ ಪುಟ್ಟ ಪೋರಿ ಪ್ರಕೃತಿಯ ಮಡಿಲಿನಲ್ಲಿ ವಿಜ್ಞಾನಿಗಳು, ಪರಿಸರವನ್ನು ತಿಳಿದವರು, ತೇಜಸ್ವಿ ಒಡನಾಡಿಗಳ ಜೊತೆ ಏನೆಲ್ಲಾ ಕಲಿತಿರಬಹುದು. ಚಾರಣ ಮಾಡಿ, ದಿನ ನೋಡೊ ಗಿಡ ಮರ ಆದ್ರೂ ವೈಜ್ಞಾನಿಕ ದೃಷ್ಟಿಯಿಂದ ಅವುಗಳ ಬಗ್ಗೆ ಇನ್ನಷ್ಟು ತಿಳಿದಾಗ ಆಗುವ ಸಂತೋಷ ವರ್ಣಿಸಲು ಬರುವುದಿಲ್ಲ.

ಯಾರೂ ಬೇಡ ತೇಜಸ್ವಿ ಅವರ ಜೀವಂತ ಪಾತ್ರ ಬಿರಿಯಾನಿ ಕರಿಯಪ್ಪನನ್ನು ನೋಡಿದರೆ ಸಾಕು ತೇಜಸ್ವಿ ಬರೆದ ಕಥೆಗಳು ನಮಗರಿವಿಲ್ಲದಂತೆ ಕಣ್ಮುಂದೆ ಬಂದು ನಿಲ್ಲುತ್ತದೆ.

ತೇಜಸ್ವಿ ಅಗಲಿದ ನಂತರ ಅವರ ಬಗ್ಗೆ ಜನರಲ್ಲಿ ಮೂಡುತ್ತಿರುವ ಆಸಕ್ತಿ , ಆದರಗಳನ್ನು ಕಂಡರೆ ಖುಷಿಯಾಗುತ್ತದೆ. ಆದರೆ ಅದೇ ರೀತಿ ಒಂದಿಷ್ಟು ಭಯ ಕೂಡ ಆಗುತ್ತದೆ. ಯಾವ ನಿರ್ಜೀವ ಶಕ್ತಿಗೂ ನಿಲುಕದಂತಿದ್ದವರು ತೇಜಸ್ವಿ.

ಆದರೆ ಎಲ್ಲಿ ನಮ್ಮ ಜನ ತೇಜಸ್ವಿ ಎಂಬ ಬ್ರಾಂಡ್ ನೇಮ್ ಇಟ್ಟುಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೋ ಎಂಬ ಅಳುಕು ಮನದ ಮೂಲೆಯಲ್ಲಿ ಕೊರೆಯುತ್ತಿದೆ.

ಏನೇ ಆದರೂ ಪ್ರಕೃತಿಯಲ್ಲಿ ಸತ್ವವಿರುವುದಷ್ಟೇ ಉಳಿಯುವುದು. ಸರಳ ಜೀವಿಗೆ ಅಭಿಮಾನದ ಕಾಮನಬಿಲ್ಲು ಸುತ್ತಿ ಬೆಟ್ಟ ಮೇಲೆ ಕೂರಿಸಿ ಉತ್ಸವ ಮಾಡುವುದು ಅನಗತ್ಯ. ನಾವಂತೂ ನಿತ್ಯ ಕಾಯಕದಲ್ಲೇ ಮೂಡಿಗೆರೆ ಸಂತನನ್ನು ಕಾಣುತ್ತೇವೆ.
ಚಿತ್ರಗಳ ಕೃಪೆ: ದಟ್ಸ್ ಕನ್ನಡ

Saturday, March 14, 2009

ನೆಲೆ


ಇರುಳು ಕಳೆದು ಕೋಟಿ ಚುಕ್ಕಿಗಳ ಬೆಳಕಿನಿಂದ
ಮನೆ ಮನ ಬೆಳಗಿರಲು,
ಒಂಟಿತಾರೆ ದಿನಕರನ ಸಾಂಗತ್ಯವೇಕೆ?

ಬರಡು ಭೂಮಿಗೆ ನೀರುಣಿಸಿ ಸಕಲ ಚರಾಚರಕ್ಕೆ
ಜೀವಜಲವಾಗಿಹ ತುಂಗೆ ಇರಲು,
ತನ್ನೊಡಲಲ್ಲಿ ನೂರು ತುಂಗೆಯಯರನ್ನುಳ್ಳ
ಕಡಲ ಹಂಬಲವೇಕೆ?

ಗೋಳಿಮರದಿ ಕೂತ ಪುಟ್ಟ ಮಡಿವಾಳ ಹಕ್ಕಿಯ
ಇನಿದನಿ ಇಂಪಾಗಿರೆ,
ದೂರದೂರಿನ ಕೋಗಿಲೆಯ ಸ್ವರ ಆಲಿಸುವಾಸೆಯೇಕೆ?

ಮೈಮನಕೆ ಮುದ ನೀಡುವ ಪ್ರೀತಿಯ ಗುಡಿಸಿರಲು
ಕಾಣದೂರ ಹಂಗಿನರಮನೆಯ ವೈಭೋಗವೇಕೆ?
ಒಡಲಾಳದಲ್ಲಿ ಆರದ ಜ್ಞಾನಜ್ವಾಲೆ ಆವರಿಸಲು
ಉಳಿದ ಕಾಮತೃಷೆಯೇಕೆ?

ಮಲೆನಾಡಿನ ಮಗಳಾಗೆ ನಾ ಇರುವೆ, ನನ್ನ ಅಳಿವು ಉಳಿವು
ಗೆಲುವು ಸೋಲು, ನೋವು ನಲಿವಿಗೆ
ಪಂಚಭೂತಗಳೇ ಸಾಕ್ಷಿಯಾಗಿರಲಿ
ಎಲ್ಲಕ್ಕೂ ಅವುಗಳ ನೆರವಿರಲಿ, ನನ್ನಿ ಪರಿಸರ ತೊರೆಯುವ ಮುನ್ನ
ನನ್ನ ಈ ಆಕೃತಿ ಪ್ರಕೃತಿಯೊಂದಿಗೆ ಲೀನವಾಗಿರಲಿ

Saturday, April 12, 2008

ಮಳೆ ನಿಂತು ಹೋದ ಮೇಲೆ ಹನಿ ಎರಡು ಉದುರಿದೆ

Dr.Rajtejaswi
ಮೋಜಿನ ಮಳೆ ನಿಂತು ಆಗಲೇ ನಾಲ್ಕೈದು ದಿನವಾಯ್ತು. ಆದರೆ ಈ ವಾರ ಅಂತಹ ಸಂಭ್ರಮವಿಲ್ಲ. ಮಧ್ಯದಲ್ಲಿ ಯುಗಾದಿ ಹಬ್ಬ , ಹೋಳಿಗೆ ಊಟ ಮೆದ್ದಿದ್ದು ಬಿಟ್ಟರೆ.

ಬಾಕಿಯಂತೆ ಏ.೫ ರಿಂದ ಏ ೧೨ ರ ವರೆಗೂ ಮನಸ್ಸಿಗೆ ಇಬ್ಬರನ್ನು ನೆನೆಯದೇ ಇರಲು ಸಾಧ್ಯವಾಗುವುದಿಲ್ಲ. ನೆಚ್ಚಿನ ಗುರು, ಮಾರ್ಗದರ್ಶಿ ತೇಜಸ್ವಿ , ನಾಡಿನ ಸಾಂಸ್ಕೃತಿಕ ಸಂಕೇತ ಡಾ. ರಾಜ್ ಕುಮಾರ್.

ತೇಜಸ್ವಿ ನಿರುತ್ತರದಲ್ಲಿ ಕವಿದ ಮೋಡ ಚದುರಿ ಮಳೆ ಸುರಿಸಿ, ಹರುಷವನ್ನು ಅರಿಸಿ ಸಾಗುತ್ತಿದೆ. ರಾಜ್ ನೆನಪಿನಲ್ಲಿ ಸ್ಮಾರಕ ಎಂಬ ನೆಪದಲ್ಲಿ ರಾಜ್ ಅವರ ಕನಸುಗಳು ಕಮರುತ್ತಿದೆ. ಈ ಇಬ್ಬರು ಸರಳ ಜೀವಿಗಳು ಇಂದಿನವರ ಜಂಜಾಟವನ್ನು ನೋಡುತ್ತಿದ್ದರೆ ಖಂಡಿತಾ ಖಾರವಾಗಿ ಪ್ರತಿಕ್ರಿಯಿಸುತ್ತಿದ್ದರು ಎನಿಸುತ್ತದೆ.

ಸ್ಮಾರಕ ನಿರ್ಮಾಣ, ಅರ್ಥವಿಲ್ಲದ ಆಚರಣೆಗೆ ತೇಜಸ್ವಿಯಂತೂ ವಿರೋಧಿಸುತ್ತಿದ್ದರು. ರಾಜ್ ಅವರು ಜೀವನದುದ್ದಕ್ಕೂ ಸರಳತೆಯನ್ನು ಮೈಗೂಡಿಕೊಂಡು ಬೆಳೆದವರು. ನಗರದಲ್ಲಿದ್ದರೂ ಸದಾ ಹಳ್ಳಿಮನೆಯ ವಾಸ್ತವ್ಯಕ್ಕಾಗಿ ಹಾತೊರೆಯುತ್ತಿದ್ದ ಜೀವ.

ತೇಜಸ್ವಿ ನಿಸರ್ಗದ ರಮಣೀಯತೆಗೆ ಸೋತು, ಪ್ರಕೃತಿಯ ಮಡಿಲಲ್ಲಿ ಸಾಧನೆ, ಸಂಶೋಧನೆ ಮಾಡುತ್ತಾ, ಮುಗ್ಧ ಜನರೊಡನೆ ಬೆರೆತು ಸಾರ್ಥಕ ಬದುಕು ಬಾಳಿದವರು. ಈ ಎರಡು ಚೇತನಗಳಲ್ಲಿ ನಾನು ಇಷ್ಟಪಡುವುದು ಸರಳತೆ ಹಾಗೂ ಜೀವನ ಪ್ರೀತಿ, ಉತ್ಸಾಹ.

ಇವರಿಬ್ಬರ ಚಿಂತನೆಗಳು ಸ್ಮಾರಕಕ್ಕೆ ಸೀಮಿತವಾಗದೇ ಅವರ ಸಾಧನೆ, ಜೀವನ ಪ್ರೀತಿ ಎಲ್ಲರಲ್ಲೂ ಆಸುಹೊಕ್ಕದರೆ ಎಷ್ಟು ಸುಂದರ. ಅದ್ಭುತ ಮಾಯಾಲೋಕದ ಕನಸು ಕಣ್ಮುಂದೆ ಕಾಣಿಸುತ್ತಿದೆ. ವಿರಮಿಸುತ್ತೇನೆ ಸದ್ಯಕ್ಕೆ.

Thursday, April 3, 2008

ಮಳೆ ನಿಲ್ಲದೇ ಮನದಿ ನೂರಾರು ಲಹರಿ ಮೂಡಿಸಿದೆ ..

ಮುನಿಸು ತರವೇ ಮಳೆಯ ಮೇಲೆ?... ಮುಂದುವರೆದು..

ಮಳೆ ನಮ್ಮ ಬದುಕಿನ ಅವಿಭಾಜ್ಯ ಅಂಗ. ಮಳೆ ಬಗ್ಗೆ ನೂರಾರು ಕವಿಗಳು, ಸಾಹಿತಿಗಳು, ಸಾವಿರಾರು ಲೇಖನಗಳನ್ನು ಬರೆದಿರಬಹುದು.
ಆದರೆ ಕಲ್ಪನೆಯ ಚಿತ್ರಣವೆ ಬೇರೆ ವಾಸ್ತವದ ಅನುಭವವೇ ಬೇರೆ.

ಋತುಮಾನದ ಏರುಪೇರು ಜನರ ಜೀವನದಲ್ಲಿ ಅನೇಕ ತಿರುವುಗಳನ್ನು ತರುವುದನ್ನು ಕಂಡಿದ್ದೇನೆ. ಅಕಾಲಿಕ ಮಳೆಯಿಂದ ಮನೆಹಾನಿ, ಬೆಳೆಹಾನಿ ಮಾಮೂಲಾಗಿ ಹೋಗಿದೆ.

ಬೆಳೆದು ನಿಂತ ಫಸಲು ಭೂಮಿ ಪಾಲಾದಾಗ, ಒಬ್ಬ ತಂದೆಗೆ ಬೆಳೆದು ನಿಂತ ಮಗನನ್ನು ಕಳೆದುಕೊಂಡ ದುಃಖದಂತೆ ನಿರಂತರವಾದ ನೋವನ್ನು ನೀಡುತ್ತದೆ.

ಇದಕ್ಕೆ ಪರಿಹಾರ? ಸರ್ಕಾರ ಕೊಡುವ ಕನ್ನಡಿಯೊಳಗಿನ ಗಂಟನ್ನು ನೆಚ್ಚಿಕೊಂಡರೆ ಯಾವ ಪ್ರಯೋಜನವೂ ಆಗುವುದಿಲ್ಲ. ಬದಲಿಗೆ ಮನಬಂದಂತೆ ಬದಲಾಗುವ ಪ್ರಕೃತಿಗೆ ಹೊಂದಿಕೊಳ್ಳುವುದೇ ಸರಿ. ಬಿತ್ತನೆಯಿಂದ ಹಿಡಿದು ಫಸಲು ಬರುವ ತನಕ ಈಗಿನ ಋತುಮಾನಕ್ಕಿಂತ ಕೊಂಚ ಮುಂಚಿತವಾಗಿ ಎಲ್ಲಾ ಕೆಲಸವನ್ನು ಪ್ರಾರಂಭ ಮಾಡಿದರೆ ಒಳಿತೆನಿಸುತ್ತದೆ.

ನಮ್ಮ ಬೇಸಾಯ ಪದ್ಧತಿಯನ್ನು ಈ ತಿಕ್ಕಲು ಮಳೆಗೆ ಹೊಂದಿಸಿಕೊಂಡು ಅದರೊಡನೆ ಆಟವಾಡುವ ಆಸೆಯಾದರೂ, ಅಂದುಕೊಂಡಿದ್ದು ಘಟಿಸದಿರೆ, ಚಿಂತನೆಗೆ ಫಲವಿಲ್ಲ ಎಂಬ ಭಯ ಕಾಡುತ್ತದೆ.

ಆದರೆ ನಮ್ಮ ಹವಾಮಾನ ಇಲಾಖೆ ಕೊಂಚ ಶ್ರಮವಹಿಸಿ ಮಣ್ಣ ಮಕ್ಕಳಿಗೆ ಸರಿಯಾದ ಮುನ್ಸೂಚನೆ ನೀಡಿದರೆ ಸಾಕು. ರೇಡಿಯೊಗೆ ಕಿವಿ ಆನಿಸಿಕೊಂಡು ಹವಾಮಾನ ವರದಿ ಕೇಳುತ್ತಿದ್ದದ್ದು ನೆನಪಾಗುತ್ತದೆ.

ಅದು ಹಾಗಿರಲಿ, ಪರಿಸ್ಥಿತಿ ಹೀಗೆ ಮುಂದುವರೆದರೆ ನಮ್ಮ ಊರೆಂಬ ನಾಲ್ಕು ಮನೆಗಳ ಸಂಸಾರ ವರ್ಷಗಳು ಉರುಳುವುದರಲ್ಲಿ ಇಲ್ಲವಾಗಿ ಹರಿದು ಹಂಚಿಹೋಗುತ್ತದೆ. ಇದನ್ನೆಲ್ಲಾ ನೆನೆದಾಗ ನೋವಾಗುತ್ತದೆ.

ಹೊರಗಡೆಯಿಂದ ಅಪ್ಪ ಮನೆಗೆ ಬಂದು'ಇವತ್ತು ಕುಂಚೆಬೈಲು ಭಟ್ಟರ ಮನೆ ಆಕಳು ಮಳೆ ಹೊಡೆತಕ್ಕೆ ಸಿಕ್ಕಿತಂತೆ, ಗೌಡ್ರ ಆಳು ಲಕ್ಕ ಸಂಸಾರ ಸಮೇತ ಗುಳೆ ಹೊರಟಿದೆಯಂತೆ' ಎಂದೆಲ್ಲಾ ಹೇಳುವಾಗ ಮನದಿ ಮೂಡುವ ಮೊದಲ ಪ್ರಶ್ನೆ ನಮ್ಮ ಸರದಿ ಯಾವಾಗ? ನೆನೆದರೆ ಮೈ ಜುಂ ಎನ್ನುತ್ತದೆ.

ಚಿಕ್ಕಂದಿನಿಂದ ಆಡಿ ಬೆಳೆದ ಮನೆಯನ್ನು ತೊರೆಯುವುದೂ ಒಂದೇ. ಶಾಂತವಾದ ತುಂಗೆಯ ಪ್ರವಾಹಕ್ಕೆ ತಲೆ ಒಡ್ಡುವುದೂ ಒಂದೇ. ಇದನ್ನೆಲ್ಲಾ ನೋಡಿದರೆ ಕಣ್ಣಾಲಿಗಳು ತುಂಬಿ ಬರುತ್ತವೆ.

ಹೌದು, ಬೇಸಿಗೆ ಒಂದು ರೀತಿ ಸಂಭ್ರಮಕ್ಕೆ ನೂರಾರು ರೀತಿ ಹೇಳಿಕೆಗೆ, ಊಟದ ಮನೆಗಳಿಗೆ ತಿರುಗುವ ಕಾಲ. ಈಗಿನ್ನೂ ಶಿಶಿರ ಕಳೆದಿಲ್ಲ. ಸಂಭ್ರಮಕ್ಕೆ ತೆರೆ ಎಳೆದಂತೆ ಆಗಲೇ ಮಳೆರಾಯ ಮನೆಗೆ ಬಂದು ಕುಳಿತರೇ, ಬೇಡದ ಅತಿಥಿಯನ್ನು ಯಾರು ತಾನೇ ಶಪಿಸುವುದಿಲ್ಲ ಹೇಳಿ.

ಆದರೆ ದೂರದ ನಗರವಾಸಿಗಳು ಎಲ್ಲಾ ಸೌಲಭ್ಯಗಳಿದ್ದು, ಎಂದೋ ಸುರಿವ ಎರಡು ಮೂರು ದಿನಗಳ ಮಳೆಗೆ ಬೆಚ್ಚಿ ವರ್ಣಿಸುವ ರೀತಿ ಅಸಹನೀಯವೆನಿಸುತ್ತದೆ.(ಇತ್ತೀಚೆಗೆ ರಾಜಧಾನಿಯಿಂದ ಶಂಕರನ ಪಟಾಲಂ ಬಂದಿದ್ದಾಗ ಮಳೆಯನ್ನು ಅವರ ಜೀವನದ ವಿಲನ್ ರೀತಿಯಲ್ಲಿ ಚಿತ್ರಿಸುತ್ತಿದ್ದನ್ನು ಕಂಡು ಹೇಳಿದೆ ಅಷ್ಟೆ)

ಮಳೆಯಲ್ಲಿ ನೆಂದು, ತೊಯ್ದು ಕನಿಷ್ಠ ಅನುಭವವಿಲ್ಲದ ಜನ ಮಳೆಬಗ್ಗೆ ಉಪನ್ಯಾಸ ನೀಡುವಾಗ ರೇಜಿಗೆ ಎನಿಸುತ್ತದೆ. ಪ್ರಕೃತಿಯೊಡನೆ ಹೊಂದಾಣಿಕೆ ಮಾಡಿಕೊಂಡು ಬದುಕುವುದು ಬೇರೆ. ಪ್ರಕೃತಿಯ ವೈಪರೀತ್ಯ ಎದುರಿಸಿ ಅದನ್ನು ಮೆಟ್ಟಿ ನಿಲ್ಲುವುದು ಬೇರೆ.

ಈ ವಿಷಯದಲ್ಲಿ ನಾ.ಡಿಸೋಜರ ಪಾತ್ರಧಾರಿ ನಾಗಿ(ದ್ವೀಪ ಚಿತ್ರದಲ್ಲಿ) ಗುರುವೇ ಸರಿ. ಸಂಕಲ್ಪ ಸ್ಥಿರವಾಗಿದ್ದರೆ ಪ್ರಕೃತಿ ನಮ್ಮ ಕೈಹಿಡಿತದಲ್ಲಿರುತ್ತದೆ. ಪರಿಸರದೊಡನೆ ಬೆರೆತು ನಮ್ಮ ಆಣತಿಯಂತೆ ಅದನ್ನು ರೂಪಿಸಿಕೊಳ್ಳುವ ಜಾಣ್ಮೆ ಅರಿತರೇ ಬದುಕಲ್ಲಿ ಯಾವುದೂ ಅನಿಷ್ಟವಲ್ಲ, ಅಕಾಲಿಕ ಕಷ್ಟವಲ್ಲ.

ಮತ್ತೊಮ್ಮೆ ಮಳೆ ಬಂದಾಗ ಮನಸೋ ಇಚ್ಛೆ ನೆನೆದು ನೋಡಿ ಅದರ ಮಜಾನೇ ಬೇರೆ, ಆಗ ತಿಳಿಯುತ್ತೆ ಅದರ ಗಮ್ಮತ್ತು. (ಜ್ವರ ಬಂತೆಂದು ಬೈಯಬೇಡಿ ಮತ್ತೆ) ನಾನಂತೂ ಪೆನ್ನು ಕೆಳಗಿಟ್ಟು ಅಂಗಳಕ್ಕೆ ಇಳಿಯುತ್ತಿದ್ದೇನೆ. ಮಳೆ ನಿಲ್ಲುವವರೆಗೂ ನಿರಂತರ ಮೋಜಿನಾಟ.....

ಮುನಿಸು ತರವೇ ಮಳೆಯ ಮೇಲೆ?

"ಮಳೆ ಎಂದರೆ ಹಾಗೆ. ಮನಸ್ಸಿನಲ್ಲಿ ನೂರಾರು ಭಾವನೆಗಳ ಲಹರಿಯನ್ನು ತರುತ್ತದೆ. ಬಹುದಿನ ಕಾಲ ನನ್ನ ಬರವಣಿಗೆಗೆ ಬ್ರೇಕ್ ಹಾಕಿದ್ದು, ಪುನಃ ಬರೆಯಲು ಪ್ರೇರಣೆ ನೀಡುತ್ತಿರುವುದು ಈ ಮಳೆಯೇ"

"ಥೂ ಅನಿಷ್ಟ.. ಎಲ್ಲೇ ಹೋದರೂ ಹಾಳಾದ್ದು.. ಇದು ನನ್ನ ಬಿಡೋ ಹಾಗೆ ಕಾಣೋದಿಲ್ಲ. ಏನು ಪಿರಿಪಿರಿಯಪ್ಪಾ ಇದರದ್ದು" ಎಂದು ಬೆನ್ನಿಗಂಟಿದ್ದ ಮಕ್ಕಳನ್ನು ಗದುರುವಂತೆ ಗದರುತ್ತಾ ಕೊಡೆ ಮಡಚಿ ಒಳ ಬಂದ ನಂತರವೂ ಅವನ ಮಾತು ಮುಂದುವರೆದಿತ್ತು. ಇಲ್ಲದವರಿಗೆ ಅಭಾವ ವೈರಾಗ್ಯ, ಇದು ಒಂಥರಾ ಅಗಾಧ ವೈರಾಗ್ಯ" ಎನ್ನುತ್ತಾ ತಲೆ ಕೊಡವುತ್ತಾ ಅಜ್ಜನ ರೀತಿ ಕೂತ.

ಹೊಸಬರೂ ಯಾರೋ ಬಂದ್ರು ಈ ಮಳೇಲಿ ಎಂದುಕೊಳ್ಳುತ್ತಾ ನಾನು ಪಡಸಾಲೆಗೆ ಬಂದು ನೋಡಿದೆ. ಶಂಕರನ ಸ್ಥಿತಿ ಕಂಡು ನಗುತ್ತಾ ಹೇಳಿದೆ

'ಏನು ಇವತ್ತು ರಾಯರು ತುಂಬಾನೇ ಬೇಜಾರಲ್ಲಿರುವಂತಿದೆ" ಏನಾಯ್ತಪ್ಪ ಅಂತದ್ದು..

"ಬೇಜಾರಂತೆ ಬೇಜಾರು, ಬೆಂಗ್ಳೂರು ಬಿಟ್ಟಾಗ ಶುರುವಾಗಿದ್ದು. ಇಲ್ಲಿಗೆ ಬಂದು ಎರಡು ದಿನ ಆಯ್ತು ಇನ್ನು ನಿಂತಿಲ್ಲ. ನಿಲ್ಲೋ ಹಾಂಗೂ ಕಾಣಲ್ಲ ಬಿಡು. ನಾನು ಎಷ್ಟು ಮಳೆ ನೋಡಿಲ್ಲ. ಇದು ಯಾಕೋ ಸರಿಯಿಲ್ಲ. ಅಪ್ಪಯ್ಯ ಹೇಳ್ತಿದ್ದ ಈ ಅಕಾಲದ ಮಳೆ ನಮ್ಮನ್ನು ಹಾಳು ಮಾಡೋಕೆ ಬಂದಂತಿದೆ ಅಂತಾ"

ಅವನ ಧಾಟಿ ನೋಡಿದರೆ ೮೦ರ ಹರೆಯದ ನಮ್ಮಜ್ಜ ಮೈ ಮೇಲೆ ಬಂದಂತೆ ಕಾಣುತ್ತಿತ್ತು. ಅವನ ಬೆಂಗ್ಳೂರಿನ ಗೆಳೆಯರು ಮಳೆಯ ಬಗ್ಗೆ ದೂರುವ ಮಾತನ್ನು ಎಂದೂ ಆಡುತ್ತಿದ್ದ. ಆಗೆಲ್ಲಾ ಸುಮ್ಮನಿದ್ದೆ ಇವತ್ತು ಅವನನ್ನು ಕಿಚಾಯಿಸಲು ನಿರ್ಧರಿಸಿ ಹೇಳಿದೆ.

"ಅಕಾಲದ ಮಳೆ ನಿಜ ಆದರೆ ಹಾಳು ಮಾಡೋಕೆ ಅನ್ನೊದ್ದನ್ನಾ ನಾ ಒಪ್ಪಲ್ಲಬಿಡು" ಎಂದೆ..

ನನ್ನ ಉತ್ತರದಿಂದ ಸಂತುಷ್ಟಗೊಳ್ಳದೆ ಮುಂದುವರೆಸಿದ...

'ನೀನು ಬಿಡಕ್ಕ, ಯಾವಾಗಲೂ ಮಳೆ ಪರನೇ ದ್ವೀಪ ಫಿಲ್ಮಂ ನಲ್ಲಿನ ನಾಗಿ ಇದ್ದಂಗೆ, ಸದ್ಯಕ್ಕೆ ನಮ್ಮೂರಿಗೆ ನದಿ ಅಷ್ಟು ಹತ್ರಿಲ್ಲ ಪುಣ್ಯಕ್ಕೆ. ಕಡೆಗೆ ಎಲ್ಲಾ ನಮ್ಮ ಭೂತನಾಥನ ದಯೆ ಅನ್ನೋಕು ಯಾರಿಲ್ಲ ಎಂದು ಬದಲಿಗೆ' ನನ್ನೇ ಗೇಲಿ ಮಾಡತೊಡಗಿದ.

'ಹಾಂಗಲ್ಲ ನಾ ಹೇಳೋದು ಇಲ್ಲಿ ಕೇಳು ಮಳೆ ಬರುತ್ತೆ. ಹೋಗುತ್ತೆ. ಅದನ್ನು ಈಗ ಬಾ ಆಗ ಬಾ ಅಂತಾ ಹೇಳಿಕೆ ಕೊಟ್ಟು ಕರೀಲಿಕ್ಕೆ ಬರುತ್ತಾ ಹೇಳು. ಬಂದಾಗ ಅನುಭವಿಸಬೇಕು. ಎಲ್ಲಾ ಸರ್ತಿ ಮಳೆಯಿಂದ ಶುಭಾನೇ ಆಗುತ್ತೆ ಅಂದ್ರೆ ಹೇಗೆ, ಅಶುಭನೂ ಆಗುತ್ತೆ. ಅದಕ್ಕೆ ತಯಾರಿರಬೇಕು ಜೀವ. ಕಷ್ಟ, ಸಾವು ನೋವು ಹೇಗೆ ಹೇಳಿಕೇಳಿ ಬರೋದಿಲ್ಲ್ವೋ ಹಾಗೆ. ಅವು ಬರೋ ಸಮಯಕ್ಕೆ ನಾವು ತಯಾರಿರಬೇಕು ಅಷ್ಟೆ. ಎಷ್ಟು ಚೆಂದ ಉಂಟು ಮಳೆ. ಅದರ ರುಚಿನಾ ಆಸ್ವಾದಿಸಬೇಕು' ಅಂದೆ. ಜೋರಾಗಿ ನಗಾಡುತ್ತಾ...

'ಹಹ್ಹಹ್ಹಹ್ಹ. ರುಚಿ ಏನು ಬಂತು ಅಮಟೇ ಕಾಯಿ ತೊಟ್ಟು....ಮಳೆಯಿಂದ ಎಷ್ಟು ಊಟದ ಮನೆ ತಪ್ಪೋತು ಗೊತ್ತಾ' ಎಂದು ಮುಖ ಸಪ್ಪಗೆ ಮಾಡಿಕೊಂಡ.

ಹೋ.. ಹಾಗೇಳು ಮತ್ತೆ. ಛೆ ಪಾಪಾ. ಸರಿ ರುಚಿ ರುಚಿಯಾಗಿ ನಿಂಗೆ ಬೇಕಾದ್ದು ಮಾಡಿ ನಿನ್ನ ಹೊಟ್ಟೇನೇನೋ ತಂಪಾಗಿಸಬಹುದಪ್ಪಾ. ಆದ್ರೆ ನಿನ್ನ ಕಣ್ಣು ತಂಪಾಗಿಸೋಕೆ ಇಲ್ಲಿ ಯಾರನ್ನು ಕರೆತರೋದು ಗೊತ್ತಾಗುತ್ತಿಲ್ಲಪ್ಪ' ಎಂದು ನಕ್ಕೆ.

ಹೇ.. ನೀನೊಂದು... ಯಾವಾಗಲೂ ಕುಶಾಲು ನಿಂಗೆ.. ನಿಂಗೆ ಹಿರಿಯಪ್ಪ ರಚಿತ ಅಂತಾ ಹೆಸರಿಡೋ ಬದಲು ಕುಶಾಲಿ ಅಂಥಾ ಹೆಸರಿಡಬೇಕಿತ್ತು. ನಿಂಗೆ ಬೇಜಾರೇ ಆಗೋದಿಲ್ಲ ಕಾಣ್ದದೆ.

ಹ್ಞು...ಕಣಪ್ಪಾ ಹೆಸರು ಬದಲಿಸಿಬಿಡುವಾ ಬಿಡು..ತಡಿ ಬಂದೆ ಎಂದೇಳಿ ಒಳಹೋಗಿ...ಬಿಸಿಬಿಸಿ ಕಾಫಿ ತಂದು ಅವನ ಕೈಗಿತ್ತೆ.

ಹ್ಞಾ.. ಹೇಳೋದು ಮರೆತೆ ಮೊನ್ನೆ ಪೇಟೆಗೆ ಹೋಗಿದ್ದಾಗ.. ಮೇಗಿನ ಗದ್ದೆ ರಮೇಶ ಸಿಕ್ಕಿದ್ದ. ನಿನ್ನ ಗಳಸ್ಯ ಕಂಠಸ್ಯ...

'ಹೌದಾ..ಏನಂದಾ'

'ಅವನ ಜತೆ ಅವನ ತಂಗಿ ಸುರಜಾ ಇದ್ದಳು. ಊರಿಗೆ ಇವತ್ತೆ ಬಂದಿದ್ದು..ಮಳೆಯಿಂದ ಎಲ್ಲಿಗೂ ಕಾಲು ಬೆಳಸಲಿಲ್ಲ ಅಂಥಾ ಪೇಚಾಡುತ್ತಿದ್ದಳು ಪಾಪಾ

'ಹೌದಾ...ಏನಂದ್ಳು 'ಎಂದವನು ನಾಲಿಗೆ ಕಚ್ಚಿಕೊಂಡ...ಕುಡಿಯುತ್ತಿದ್ದ ಕಾಫಿ ಅನ್ನು ಚೆಲ್ಲಿಕೊಳ್ಳುತ್ತಾ...

ನನ್ನ ನಗು ಹೆಚ್ಚಾಯಿತು..

'ಸರಿ ಮಾರಾಯ್ತಿ ಇಲ್ಲೆ ಇದ್ದರೇ ಕಿಚಾಯಿಸ್ತಾನೇ ಇರುತ್ತೀಯಾ. ನಾನು ತೋಟಕ್ಕೆ ಕಡೆ ಹೋಗ್ತೀನಿ. ಹಿರಿಯಪ್ಪ ಸಿಗಬಹುದು ಅಲ್ಲಿ ಎಂದು ಎದ್ದು ನಿಂತ. ಕುಡಿದ ಕಾಫಿ ಲೋಟ ಬದಿಗಿಟ್ಟು.ಅಂಗಳಕ್ಕೆ ಜಿಗಿದ ನಡೆದ.

ಅವನು ಕೊಡೆ ಬಿಡಿಸಿ ಅಂಗಳಕ್ಕೆ ಹಾರಿದ ಅವನಿಗೆ ಹಳ್ಳದ ನೀರು ಹೆಚ್ಚಾಗಿದೆಯಂತೆ.. ಹುಷಾರು ಎನ್ನುತ್ತಾ...ಅವನು ನಡೆದ ಹಾದಿ ನೋಡುತ್ತಾ ನೆನಪಿನಾಳಕ್ಕೆ ಇಳಿದೆ......

ಮುಂದುವರೆದು.....ಮಳೆ ನಿಲ್ಲದೇ ಮನದಿ ನೂರಾರು ಲಹರಿ ಮೂಡಿಸಿದೆ ..

Saturday, April 14, 2007

ಎಲ್ಲಿ ಹೋದೆ ನನ್ನ ಗುರುವೇ, ಓ ನನ್ನ ತೇಜಸ್ವಿ


ಎಲ್ಲಿ ಹೋದೆ ನನ್ನ ಗುರುವೇ ....

ಮೂಡಿಗೆರೆಯ ನೀನೇಕೆ ತೊರೆದೆ
ಮಲೆನಾಡನು ಬಿಟ್ಟು ನೀ ಹೇಗಿರುವೆ
ಮಲೆನಾಡಿನ ಮಾಯಾವಿ ನಿನ್ನಂತೋರೊ ಬಲು ವಿರಳ
ಅದು ಹೇಗಿದ್ದೆ ನೀನಷ್ಟು ಸರಳ
ರಸಋಷಿಯ ಪುತ್ರನೆ.. . .

ನಮಗೆ ಜೀವರಸವ ನೀಡಿದವನೆ
ವನರಾಶಿಯ ರಹಸ್ಯ ಬೇಧಿಸಿದ ಚಿದಂಬರನೆ
ಮರ್ಮಕ್ಕೆ ತಾಕುವಂತೆ ಕುಟುಕುತ್ತಿದ್ದ ಕರ್ವಾಲೋವೆ
ಕಿವಿ ನಿನ್ನ ಹುಡುಕುತ್ತಿದೆ....

ಕರಿಯಣ್ಣ ಮಾಡಿದ ಬಿರಿಯಾನಿ ಆರುತ್ತಿದೆ ಬೇಗ ಬಾ...
ಮುಸ್ಸಂಜೆಯಲ್ಲಿ ಕಿರುಗೂರಿಗೆ ಹೋಗೋಣ ಬಾ
ಖುದ್ದೂಸ್ಸನ ಎಕ್ಸ್ ಪ್ರೆಸ್ ಹತ್ತಿ ಜುಗಾರಿ ಕ್ರಾಸ್ ನಲ್ಲಿ ಇಳಿಯೋಣ
ನೀನಿರದೆ ಅಬಚೂರು ಚೂರಾಗಿದೆ ..

ಅಣ್ಣನ ನೆನಪು ಹೇಳು ಬಾ.. ಮಂದಣ್ಣ ಕಾದು ಕುಂತವ್ನೆ
ನಿನಗಾಗಿ ತಬರ ಕಾದಿದ್ದಾನೆ, ಕುಬಿ ಇಯಾಲ ಬಂದಿದ್ದಾರೆ
ಇನ್ನೇಕೆ ತಡ.... ಬಾ ನನ್ನ ಗುರುವೇ

ಹಕ್ಕಿಗಳ ಗಾಯನ, ಕಾನನದ ಮೌನ ನಿನ್ನೊಂದಿಗೆ ಲೀನವಾಗಿದೆ.
ತೇಜಸ್ವಿ ನಿನ್ನ ಮಾಯಾಲೋಕದಲ್ಲಿ ಸುತ್ತುವೆ ಅನವರತ
ಜಗವಿರುವವರೆಗೂ, ಹಸಿರಿರುವವರೆಗೂ ನೆನಪಲ್ಲಿ ನೀ ಉಳಿಯುವೆ ಶಾಶ್ವತ

ನಿಗೂಢ ಮನುಷ್ಯ ನಿನ್ನಿಂದ ಸಹಜ ಕೃಷಿಯ ಕಲಿಯುವ ಆಸೆ
ನಿನ್ನ ಪರಿಸರದ ಹಕ್ಕಿಗಳ ಕಥೆ ಕೇಳುವಾಸೆ
ಮರಳಿ ಬಾ... ನನ್ನ ಗುರುವೇ

ಪೂರ್ಣಚಂದ್ರ ನಿನಗಾಗಿ ಮೂಡಿಗೆರೆ ಕಾದಿದೆ
ನಿನ್ನೊಡಲಿಲ್ಲದಿದ್ದರೂ ನಿನ್ನ ಉಸಿರು ಹಸಿರಾಗಿದೆ
ನಿನ್ನ ಮಾತು ಕತೆಯಾಗಿ,ನಿನ್ನ ನೋಟ ಚಿತ್ರವಾಗಿ
ಯೋಚನೆ ಮನದ ಮಾತಾಗಿ, ಹಳ್ಳಿಗರ ನುಡಿಯಾಗಿ
ನಿನ್ನ ಅಲೆದಾಟ ಉತ್ಸುಕತೆಯಾಗಿ
ನಿನ್ನ ಸಹಜತೆ ಸರಳತೆ ನಮ್ಮೆಲ್ಲರ ನರ ನಾಡಿಯ ಕಣಕಣದಲ್ಲಿ
ಉಳಿಯುವುದು ನಿಶ್ಚಿತ.
ಪೂರ್ಣಚಂದ್ರನಂತೆ ತೇಜಸ್ವಿಯಾಗಿ ಎಲ್ಲಕ್ಕಿಂತ ಮೇಲಾಗಿ
ನನ್ನ ಮಾನಸ ಗುರುವಾಗಿ ನೀ ಇರುವೆ ಶಾಶ್ವತ

-ಪ್ರೀತಿ,ನೋವು , ವಿಷಾದ, ಅಗಲಿಕೆ, ನಿರಾಸೆ, ಭಾವನೆಗಳ ಮಹಾಪೂರದೊಂದಿಗೆ
ನಿರಚಿತ