page1

Pages

Tuesday, September 27, 2011

ರಮಣ ನಿನ್ನಿಂದ ಮನಸ್ಸು ಮೆದು ಹರಣ

ನಿಶಾಂತನ ಜೊತೆ ಪ್ರಶಾಂತವಾಗಿದ್ದ ಮನಸ್ಸಿನೊಳಗೆ ಕೊಂಚ ರಭಸವಾಗೇ ಎಂಟ್ರಿ ಕೊಟ್ಟಿದ್ದು ರಮಣ ಪ್ರಕಾಶ್. ಮುಂಬೈನಲ್ಲಿದ್ದ ಆತ ಪರಿಚಯವಾಗಿದ್ದು, ಆತನ ಪತ್ನಿ ರಚನಾ ಮೂಲಕ. ತೇಜಸ್ವಿ ಅವರ ಪುಸ್ತಕ ಅರಸುತ್ತಿದ್ದ ರಚನಾ ಆರ್ಕುಟ್ ನಲ್ಲಿ ಈ ಬಗ್ಗೆ ಹಾಕಿದ್ದ ಪೋಸ್ಟ್ ನೋಡಿ ನಾನು ಉತ್ತರಿಸಿದ್ದೆ ಬಂತು.

ರಚನಾ ಜೊತೆ ಗೆಳೆತನ ಬೆಳೆಯಿತು. ನಂತರ ರಚನಾ ರಮಣನ ಪರಿಚಯವಾಗಿ ಆತನಿಗೂ ಕಂಪ್ಯೂಟರ್ ನಲ್ಲಿ ಕನ್ನಡ, ತೇಜಸ್ವಿ ಪುಸ್ತಕ, ಕವಿ, ಕವನ ಬಗ್ಗೆ ಸಮಾನ ಆಸಕ್ತಿ ಇದ್ದ ಪರಿಣಾಮ ರಮಣ ಇಷ್ಟವಾದ. ನನ್ನ ಪತಿ ಕನ್ನಡ, ಕವನ, ಪುಸ್ತಕಗಳ ಹುಚ್ಚು ಬಿಡಿಸಿ ಎಂದು ಗೆಳೆತನದ ಕೊಂಡಿ ಹಾಕಿಕೊಟ್ಟ ಗೆಳತಿ ರಚನಾಳಿಗಿಂತ ತುಸು ಹೆಚ್ಚು ಆಪ್ತವಾಗಿ ರಮಣ ಹತ್ತಿರವಾಗಿದ್ದ.

ನಿಶಾಂತನಂತೆ ರಮಣ ಕೂಡಾ ಕವನಧಾರೆ ಹರಿಸುತ್ತಿದ್ದ. ನಿಶಾಂತನ ಕವನಗಳು ವಿರಹ ರಾಗ ಹಾಡಿದರೆ, ರಮಣನದ್ದು ಎಲ್ಲದರಲ್ಲೂ ಆಶಾಭಾವನೆ. ರಮಣ, ರಚನಾ ದಂಪತಿಗಳಿಗೆ ಇದ್ದ ಏಕೈಕ ಕೂಸು ಅಲ್ಲಮ. ಹೆಸರು ಸ್ವಲ್ಪ ವಿಚಿತ್ರ ಎನಿಸಿತ್ತು ಮೊದಲಬಾರಿ ಕೇಳಿದಾಗ ಆದರೆ, ಅಲ್ಲಮ ಚುರುಕಾದ ಹುಡುಗ, ಆದರೆ, ತಲೆಯಲ್ಲಿ ಎಲ್ಲಾ ಪುಟ್ಟ ಮಕ್ಕಳಂತೆ ಪ್ರಶ್ನೆಗಳ ಮೂಟೆಗಳನ್ನೇ ಹೊತ್ತಿರುತ್ತಿದ್ದ.

ಅಲ್ಲಮನನ್ನು ಕರೆದುಕೊಂಡು ರಮಣ ಒಮ್ಮೆ ನಮ್ಮೂರು, ನಮ್ಮ ಮನೆಗೂ ಬಂದಿದ್ದರು. ಕೋಮಲಾಳಿಗೆ ಅವರ ಊರಿನ ಕಡೆಯವರು ಎಂದು ತಿಳಿದು ವಿಶೇಷವಾಗಿ ಮಾತನಾಡಿಸುತ್ತಿದ್ದಳು. ನಾಗರಪಂಚಮಿ ಸಮಯದ ಅಣ್ಣ ತಂಗಿ ಮಾಡೆಲ್ ಥರಾ ಕಾಣುತ್ತಿದ್ದರು ಅವರಿಬ್ಬರು ನನಗೆ. ಅಲ್ಲಮನ ಓದುವ ಉತ್ಸಾಹ, ಆಟ ಆಡುವ ಹುಚ್ಚನ್ನು ನಾನಂತೂ ತೀರಿಸಲು ಸಾಧ್ಯವಿರಲಿಲ್ಲ. ಊರಿಗೆ ಬಂದಿದ್ದ ತಮ್ಮ ಕಿಟ್ಟಿಗೆ ಅವನನ್ನು ಒಪ್ಪಿಸಿ, ರಮಣನ ಜೊತೆ ಹರಟುತ್ತಿದ್ದೆ.

ರಮಣನನ್ನು ಒಮ್ಮೆ ಮೇಲಿಂದ ಕೆಳಗೆ ನೋಡಿದೆ, ನಿಶಾಂತನ ರೂಪು ಇಲ್ಲದಿದ್ದರೂ, ಒಳ್ಳೆ ಹೇರ್ ಸ್ಟೈಲ್ ಇಲ್ಲದಿದ್ದರೂ ನಿಶಾಂತನಿಗಿಂತ ಹೆಚ್ಚು ವಾಚಾಳಿ. ತಗ್ಗಿ ಬಗ್ಗುವ ವ್ಯಕ್ತಿತ್ವ ಎನಿಸಿತು. ರಮಣನ ಫ್ಯಾಮೀಲಿ ಮ್ಯಾಟರ್‍ ಎಲ್ಲ ನನ್ನ ತಲೆಲಿತ್ತು. ಮೊದಲ ಭೇಟಿಯಲ್ಲಿ ಮಾತಿಗಿಂತ ಮೌನವೇ ಹೆಚ್ಚಾಗಿತ್ತು.

ಆದರೆ, ನಂತರ ಪಸರ್ನಲ್ ಮ್ಯಾಟರ್ ಎಲ್ಲಾ ವಿನಿಮಯವಾಗುತ್ತಿತ್ತು. ರಮಣ ಸ್ವಲ್ಪ ಜಾಸ್ತಿನೇ ಪೊಸೆಸಿವ್
ಅಂಥಾ ಅನ್ನಿಸತೊಡಗಿತು. ರಮಣನ ಜೊತೆ ಗೆಳೆತನದ ಬಗ್ಗೆ ನಿಶಾಂತನಿಗೆ ವಿವರವಾಗಿ ಹೇಳೋಕೆ ಆಗಿರಲಿಲ್ಲ. ಹೊಸ ಗೆಳೆಯರ ಬಗ್ಗೆ ಸ್ವಲ್ಪ ಹುಶಾರು ಎಂದಿದ್ದು ಮಾತ್ರ ಅರೆಕ್ಷಣ ಮಾತ್ರ ನೆನಪಿರುತ್ತಿತ್ತು.

ಹರಕೆಯ ಕುರಿಯಂತೆ ಎಲ್ಲರ ಸಮಸ್ಯೆ ಬಗೆಹರಿಸುವಂತೆ ಮುಂದೆ ನಿಲ್ಲುತ್ತಿದ್ದ ನಾನು ಅನೇಕ ಬಾರಿ ಬೆಸ್ತು ಬಿದ್ದಿದ್ದು ಇದೆ. ಅದು ಹುಟ್ಟಿನಿಂದ ಬಂದ ಸಮಸ್ಯೆ ಎಂದು ನಕ್ಕು ಸುಮ್ಮನಾಗುತ್ತಾನೆ ಅಷ್ಟೆ.

ರಮಣನ ಜೊತೆ ಚಾಟಿಂಗ್, ಮೆಸೇಜಿಂಗ್ ನಡೆದಿತ್ತು. ಉದ್ದುದ್ದಾ ಕವನಗಳನ್ನು ಕಳಿಸಿ ಕೊನೆಗೆ ಹೇಗಿದೆ ಡಿಯರ್ ಎಂದಾಗಲೆಲ್ಲಾ ಕಷ್ಟಪಟ್ಟು ಸಹಿಸಿಕೊಂಡಿದೆ. ಆದರೆ ಒಂದು ದಿನ ತೀರಾ ಹತ್ತಿರವಾಗಿ ಕೂತು ಹರಟುತ್ತಿದ್ದ ವೇಳೆ ಕೆನ್ನೆಗೆ ತುಟಿ ತಾಗಿಸಿ ಬಿಟ್ಟ.

ಮಾರ್ಡ್ರನ್ ಲೈಫ್ ಸ್ಟೈಲ್ ನ ಒಳಹೊರಗೂ ತಿಳಿದಿದ್ದ ರಮಣನಿಗೂ ಇದು ಸಹಜವಾಗಿತ್ತು. ಆದ್ರೆ ನನಗೆ ಒಂದು ಕ್ಷಣ ಏನೂ ತೋಚದಂತಾಯಿತು. ಕೆಲವೊಮ್ಮೆ ನಾನ್ ವೆಜ್ ಜೋಕ್ಸ್ ಹದ್ದು ಮೀರದಂತೆ ಸಂಭಾಷಣೆ ಮಧ್ಯೆ ಸುಳಿಯುತ್ತಿತ್ತು.

ನಾನಾದರೋ ರಮಣನನ್ನು ಬಿಟ್ಟರೆ ಬೇರೆ ಆಪ್ತ ಗೆಳೆಯರಿಲ್ಲ ಎಂಬಂತೆ ಆಡುತ್ತಿದ್ದೆ. ಇದು ಕೆಲವೊಮ್ಮೆ ನನ್ನ ಕಸಿನ್ಸ್ ಗಳಿಗೂ ಇರುಸು ಮುರುಸು ತರಿಸಿತ್ತು. ರಮಣನ ಜೊತೆ ಆಗಾಗ ಕಿತ್ತಾಟ ನಡೆಯುತ್ತಿತ್ತು.

ರಮಣ ಎಲ್ಲವನ್ನೂ ಎಕ್ಸ್ ಪ್ರೆಸಿವ್ ಆಗಿರಬೇಕು ಎಂದು ಬಯಸುತ್ತಿದ್ದ. ತುಂಬಾ ಪೊಸೆಸಿವ್ ಆಗಿರುತ್ತಿದ್ದ. ಅದರೆ, ಸ್ನೇಹಿತರೆಂದರೆ ಪ್ರೊಟೆಕ್ಟಿವ್ ಆಗಿ ಹೆಲ್ಪ್ ಫುಲ್ ಆಗಿರುತ್ತಿದ್ದ. ಆದರೆ, ಯಾವುದೇ ಸರ್ಕಲ್ ಗೆ ಒಳಪಡದೆ ಇದ್ದ ನಾನು ನನಗೆ ತಿಳಿಯದಂತೆ ರಮಣನ ಗೆಳೆತನದ ಸರ್ಕಲ್ ನಲ್ಲಿ ಸೇರಿ ಹೊರ ಬರಲಾರದೆ ಒದ್ದಾಡುತ್ತಿದೆ.

ಕೊನೆಗೂ ರಮಣನ ಅತಿಯಾದ ಗೆಳೆತನದಿಂದ ಮುಕ್ತಿ ಪಡೆವ ಮಾರ್ಗ ಸಿಕ್ಕಿಬಿಟ್ಟಿತ್ತು. ದೂರದ ಊರಿಗೆ ಪ್ರವಾಸಕ್ಕೆಂದು ಹೋದ ನಾನು ಕೊನೆಗೆ ಅಲ್ಲೇ ನೆಲೆಗೊಳ್ಳುವಂತಾಯಿತು. ಈ ನಡುವೆ ರಮಣನ ಜೊತೆ ಸಂಪರ್ಕವನ್ನು ನಿಧಾನವಾಗಿ ಕಡಿದುಕೊಳ್ಳುತ್ತಾ ಬಂದೆ.

ಆದರೆ, ಫ್ರೆಂಡ್ ಶಿಪ್ ಬ್ರೇಕ್ ಮಾಡಿಕೊಳ್ಳಲಿಲ್ಲ. ಯಾವ ಮನುಷ್ಯನಾದರೂ ದ್ವೇಷ ಕಟ್ಟಿಕೊಳ್ಳಬೇಡ. ಯಾರಿಗೊತ್ತು ಯಾರು ಯಾವಾಗ ಬೇಕಾಗುತ್ತಾರೋ ಗೊತ್ತಿರುವುದಿಲ್ಲ ಎಂಬ ಆಪ್ತರೊಬ್ಬರ ಮಾತಿಗೆ ಬೆಲೆಕೊಟ್ಟು ಎಲ್ಲರೊಡನೆ ಸ್ನೇಹ ಉಳಿಸಿಕೊಂಡು ಸಾಗಿಸುತ್ತಿದ್ದೇನೆ ಜೀವನ.... ಸದಾ ಮಳೆ ಸುರಿವ ನಾಡಿನಲ್ಲಿ...