page1

Pages

Showing posts with label ಮಳೆ. Show all posts
Showing posts with label ಮಳೆ. Show all posts

Saturday, June 13, 2015

ಮತ್ತೆ ಮುಂಗಾರಿನ ಅಭಿಷೇಕಕ್ಕೆ ಕಾದಿದೆ ಮನವು | Mind Body Soul awaiting for Monsoon

ಈ ಸಲ ಯಾಕೋ ಎಂದಿಗಿಂತ ಹೆಚ್ಚು ಕಾಲ ಗ್ರೀಷ್ಮನ ಸಾಂಗತ್ಯದಲ್ಲೇ ಮೈಮರೆತ ನಮ್ಮ ಪ್ರಕೃತಿ ಕೊನೆಗೂ ಮುಂಗಾರಿನ ಅಭಿಷೇಕಕ್ಕೆ ಸಜ್ಜಾಗಿದ್ದಾಳೆ.

ಪ್ರತಿ ಸಾರಿಯಂತೆ ಈ ಸಲವೂ ಅಡಿಕೆ ಮರಕ್ಕೆ ಔಷಧ ಹಾಕಲು ಮರೆತವರು ಗಡಿಬಿಡಿಯಲ್ಲಿ ಮರ ಏರುತ್ತಿರುವ ದೃಶ್ಯ ಮನೆಗೆ ಹೋಗುವಾಗ ಕಣ್ಣಿಗೆ ಬಿತ್ತು. ಈ ಬಾರಿ ಮಳೆ ಪ್ರಮಾಣದ ಲೆಕ್ಕಾಚಾರ, ಖರ್ಚಿನ ಲೆಕ್ಕಾಚಾರ, ಅಡುಗೆ ಮನೆಯಲ್ಲಿ ಶೇಖರಿಸಿಟ್ಟ ಹಪ್ಪಳದ ವ್ಯಾಪಾರ, ನಿತ್ಯ ಪಾರಾಯಣ, ಆಗಾಗ ಪ್ರಸಂಗಗಳ ರಂಜನೀಯ ಕಾಲಕ್ಕೆ ಮುಂಗಾರು ನಾಂದಿ ಹಾಡುತ್ತಿದೆ.


ಅಪ್ಪ ಆಗಲೇ ತೋಟಕ್ಕೆ ಬೇಕಾದ ವ್ಯವಸ್ಥೆ ಮಾಡಿ ಮಳೆರಾಯನನ್ನು ಸ್ವಾಗತಿಸಲು ಸಿದ್ಧರಾಗಿದ್ದಾರೆ. ನಾನಂತೂ ಮುಂಗಾರಿನ ಮೊದಲ ಮಳೆಯ ಮಹಾ ಮಜ್ಜನಕ್ಕೆ ಸಜ್ಜಾಗಿದ್ದೇನೆ. ಈ ನಡುವೆ ಕಳೆದ ವಾರ ಮಳೆಯ ನಿರೀಕ್ಷೆಯಲ್ಲಿ ರಾಜಧಾನಿಯಿಂದ ಮನೆಗೆ ಬಂದಿದ್ದ ಕಿಟ್ಟನ ಆರ್ಭಟ ಮಾತ್ರ ಜೋರಾಗಿತ್ತು.

ಹುಟ್ಟಿದ್ದು, ಓದಿದ್ದು, ಬೆಳೆದಿದ್ದು ಇಲ್ಲೇ ಆದರೂ ಕಿಟ್ಟನ ಹಾವ ಭಾವ ವರಸೆ ಎಲ್ಲವೂ ಯಾವುದೇ ಪಟ್ಟಣದ ಪೋಕರಿಗಳಿಗೇನು ಕಡಿಮೆ ಏನಿಲ್ಲ. ಬೆಂಗಳೂರಲ್ಲಿ ಎಂಎನ್ ಸಿ ಕಂಪನಿಯಲ್ಲಿ ಕೆಲ್ಸ ಮಾಡುತ್ತಿರುವ ಧಿಮಾಕು ಬೇರೆ ಈ ನಡುವೆ ಹೆಚ್ಚಾಗಿ ಕಾಣುತ್ತಿತ್ತು.

ಊರಿಗೆ ಬಂದವನೇ ಇಲ್ಲಿನ ಬಿಸಿಲನ್ನು ಬೆಂಗಳೂರಿನ ದಿನ ನಿತ್ಯದ ಸಂಜೆ ಮಳೆಯನ್ನು ಶಪಿಸತೊಡಗಿದ. ಅದೇನು ಮರವೋ ಯಾರು ಯಾವ ಕಾಲದಲ್ಲಿ ನೆಟ್ಟರೋ ದಿನವೋ ಒಂದಲ್ಲ ಒಂದು ಕಡೆ ಉದುರಿ ಬೀಳುತ್ತಲೇ ಇರುತ್ತದೆ. ಬೈಕಲ್ಲಿ ಅಡ್ಡಾಡುವುದಿರಲಿ, ಆಫೀಸಿನಿಂದ ಮನೆಗೆ ವಾಪಸ್ ಬರೋಕೆ ಹೆದರಿಕೆ ಆಗುತ್ತೆ..ಇದರ ಜೊತೆಗೆ ಮಳೆ ಸ್ವಲ್ಪ ಜೋರಾದರೆ ಸಾಕು ರಸ್ತೆ ಹೊಂಡದ ತುಂಬಾ ನೀರು ನಿಲ್ಲುತ್ತೆ...ಒಟ್ಟಾರೆ, ಆಫೀಸ್ ಹತ್ತಿರನೇ ಮನೆ ಇದ್ದವರೇ ಲಕ್ಕಿ ಅಂದುಬಿಟ್ಟ.

ಮರಗಳು ಹಳೆಯವಾದರೂ ನಮ್ಮಲ್ಲಿನ ಮರಗಳಲ್ಲ, ಬ್ರಿಟಿಷರ ಕಾಲದ್ದು ಎಂದು ಹೇಳಿಕಂಡರೂ ಅವು ಮಾವು, ಹಲಸಲ್ಲ, ಬಣ್ಣ ಹೂಬಿಡುವ ಅಲಂಕಾರಿಕ ಮರಗಳಷ್ಟೇ. ಇನ್ನಾದರೂ ಗಟ್ಟಿ ಮರಗಳನ್ನು ಬೆಳೆಸುವ ಬಗ್ಗೆ ಬೆಂಗಳೂರಲ್ಲಿ ಪ್ರಜ್ಞೆ ಮೂಡಿಸಿತು.. ಅಲ್ವೋ ಆಫೀಸ್ ಗೂ ನಿನ್ನ್ ರೂಮಿಗೂ ಏನ್ ಮಹಾ ದೂರ ಇದೆ. ಹತ್ತು ಕಿ.ಮೀ ಇರಬಹುದು ಅಷ್ಟೇ ಅಲ್ವ ಅಂದೆ.

ಏನು ಹತ್ತು ಕಿ.ಮೀ ನೀನು ಬಂದು ಓಡಾಡು ಎರಡು ದಿನ ಗೊತ್ತಾಗ್ತು ಅಂದ.
ಅಯ್ಯೋ ಬೇಡ ಮಾರಾಯ.. ನಾ ಇದ್ರು ಹೋದ್ರು ಬದುಕಿದ್ರೂ ಇಲ್ಲೇ ಮಲೆನಾಡಿನ ಮೂಲೆ ನಾಗೆ ಎಂದು ಹೇಳಿದೆ.

ನೀನು ಬಿಡು, ಯಾವಾಗ್ಲು ಹೀಗೆ ಹೇಳ್ತಿಯಾ ನಾಳೆ ಮದ್ವೆ ಆದ್ಮೇಲೆ ನೋಡುವಾ ಎಂದು ಕಿಸಿದವನು ಸುಮ್ಮನಾದ. ಅಷ್ಟರಲ್ಲಿ ಅವನ ದೊಡ್ಡಪ್ಪ ಎದುರಿಗೆ ಬಂದಿದ್ರು..

ಯಾರದೋ ಮದ್ವೆ ಅಂದ್ರು

ಅದು ದೊಡ್ಡಪ್ಪ, ಸಸಿತೋಟ ಕಡೆ ಫ್ರೆಂಡ್ ಹೋಗುಕು ನಾಳೆ.. ನಾ ಬರ್ತಿನಿ ಎಂದು ತನ್ನ ಮನೆಗೆ ಹೊರಟ.

ಅಣ್ಣನಿಗೆ ಅವನು ಯಾರ ಮದ್ವೆ ಬಗ್ಗೆ ಹೇಳಿದ್ದು ಎಂಬುದು ತಿಳಿಯದಷ್ಟು ದಡ್ಡರಲ್ಲ. ಮಗಳ ಮದುವೆ ಮಾಡುವ ಇರಾದೆ ಇಲ್ಲದ್ದಷ್ಟು ನಿರ್ದಯಿ, ನಿರ್ಭಾವುಕ ವ್ಯಕ್ತಿ ಏನಲ್ಲ. ಮೂವತ್ತರ ಹರೆಯದ ಮಗಳನ್ನು ಈ ಮಳೆಕಾಡಿನ ಮನೆಯನ್ನು ಸಂಭಾಳಿಸಬಲ್ಲ ಹುಡುಗನಿಗಾಗಿ ನನಗರಿವಿಲ್ಲದ್ದಂತೆ ಹುಡುಕಿದ್ದು ಉಂಟು.

ಆದರೆ, ನನಗೆ ಅಪ್ಪನ ಎಲ್ಲಾ ಚರ್ಯೆಗಳು ಬಹುಬೇಗ ತಿಳಿದು ಬಿಡುತ್ತಿತ್ತು. ಅಪ್ಪ ಹೇಳದಿದ್ದರೂ ಅವರ ಸುತ್ತಾಟ ಎಲ್ಲಿ ತನಕ ಸಾಗಿತ್ತು ಎಂಬುದನ್ನು ರಾಮಣ್ಣ ವರದಿ ಒಪ್ಪಿಸುತ್ತಿದ್ದ. ಆದರೆ, ಇದುವರೆವಿಗೂ ಸಂಬಂಧ ಕುದರಿಲ್ಲ, ನಾನು ಒಪ್ಪುವುದಿರಲಿ, ಅಣ್ಣನಿಗೆ ಇಷ್ಟವಾಗುತ್ತಿರಲಿಲ್ಲ.

ನಮಗಿಬ್ಬರಿಗೂ ನಮ್ಮನ್ನು ಇಷ್ಟಪಡುವವರಿಗಿಂತ ನಮ್ಮ ಪರಿಸರವನ್ನು ಪ್ರೀತಿಸುವ ಜನ ಬೇಕೆನಿಸಿ ವರ್ಷಗಳೇ ಕಳೆದಿವೆ. ಮನೆ, ತೋಟ, ಅಣ್ಣ ನೋಡಿಕೊಳ್ಳುವ ವೃದ್ಧಾಶ್ರಮ, ಶಾಲೆ, ನದಿ, ಆಗಾಗ ಪೇಟೆ ಕಡೆ ಸುತ್ತಾಟ, ಪ್ರತಿದಿನವೂ ಹೊಸ ನೋಟ, ಬದುಕಿಗೆ ಇಷ್ಟು ಸಾಕು ಬೇರೆ ಯಾವ ಕಾಮನೆಗಳು ಸುಳಿಯದಿರಲಿ.. ಮಳೆ ಸುರಿಯುವ ಹಾಗಿದೆ.. ಮುಂಗಾರಿನ ಅಭಿಷೇಕಕ್ಕೆ ಮೊದಲ ಮಜ್ಜನಕ್ಕೆ ನಾ ಹೊರಡಬೇಕಿದೆ..ಅದಕ್ಕೂ ಮೊದಲು ಬೆಚ್ಚಗಿನ ಕಾಫಿ ಹೀರಬೇಕಿದೆ...ಸದ್ಯಕ್ಕೆ ಅಲ್ಪ ವಿರಾಮ..

Sunday, March 31, 2013

ಮಳೆ ಮೇಲೆ ಮುನಿಸು












ವಾರದಿಂದ ಕಾದಿದ್ದೆ ಬಂತು ಗುಡುಗು ಇಲ್ಲ... ಗಾಳಿಯೂ... ನಾವಿರೋದು ಮಲೆನಾಡೋ ಬಯಲು ಸೀಮೆಯೋ ಎಂಬ ಶಂಕೆ ಬಂದು ಬಿಟ್ಟಿತ್ತು.

ವಾರಾಂತ್ಯದಲ್ಲಿ ಮೋಜಿನಲ್ಲಿ ವ್ಯಸ್ತನಾಗಿದ್ದ ನನ್ನ ತಮ್ಮ ಕಿಟ್ಟಿ ಕರೆ ಮಾಡಿ ಬೆಂಗಳೂರಿನಲ್ಲಿ 'ಮಸ್ತ್ ಮಳೆ ಸುರೀತಿದೆ ಕಣೆ..ಬಸ್ ಹತ್ತಿ ಬಂದು ಬಿಡು ಬೆಳಗ್ಗೆ ಒಳಗೆ ನಿಂಗೂ ಸಿಗಬಹುದು ಲಕ್ ಇದ್ರೆ' ಎಂದು ಹೇಳಿ ಫೋನ್ ಕುಕ್ಕಿದ.. ಇಲ್ಲ ನಾನೇ ಫೋನ್ ಕುಕ್ಕಿದೆ


ತಕ್ಷಣವೇ ಮನೆ ಹೊರಗೆ ಬಂದು ಹುಣ್ಣಿಮೆ ಮುಗಿಸಿದ ಚಂದಿರ ಹುಡುಕತೊಡಗಿದೆ. ತಾರೆಗಳು, ಮೋಡ ಘರ್ಜನೆ,ವಾಯುದೇವನ ಆಹ್ಲಾದಕರ ಆಹ್ವಾನ ಹೂಂ ಏನು ಇಲ್ಲ....

ಅಲ್ಲೇ ಚಿಟ್ಟೆ ಮೇಲೆ ಕುಂತಿದ್ದ ಅಣ್ಣ 'ನನ್ನ ಬಾಧೆ  ಕಂಡು ಒಳಗೊಳಗೆ ನಗುತ್ತಾ ಎಂಥಾಯ್ತೆ ಪುಟ್ಟಿ ಯಾರ ಮೇಲೆ ಮುನಿಸು' ಎಂದರು.

ಅವರಿಗೂ ಗೊತ್ತು ಆ ಸಮಯಕ್ಕೆ ನನ್ನ ಮುನಿಸು ಮಳೆ ಮೇಲೆ ಇತ್ತು ಎಂದು. ಅವರ ಕಡೆಗೆ ಒಮ್ಮೆ ನೋಡಿ ಒಳಗೆ ನಡೆದೆ. ಮಲೆನಾಡಿಗೆ ಬರದೆ ಬೆಂಗಳೂರಿನ ಜನಕ್ಕೆ ತಂಪು ನೀಡಲು ಹೋಗಿರುವ ಮಳೆರಾಯನ ಮೇಲೆ ಸಿಟ್ಟಾಗದೆ ಇರಲು ಸಾಧ್ಯವೇ?

ಈ ಬಾರಿ ಬೇಸಿಗೆಯಲ್ಲಿ ಊಟದ ಮನೆಗಳು ಇದ್ದದ್ದೇ ಕಮ್ಮಿ. ನಮ್ಮ ಪೈಕಿ ಎಲ್ಲಾ ಊರು ಬಿಟ್ಟು ಬೆಂಗಳೂರು ಸೇರಿದ್ದರೋ ಏನೋ ಇಲ್ಲಿ ಉಳಿದಿರುವುದು ನಾವೇ ಒಂದು ನಾಲ್ಕು ಮನೆಯವರು ಅನ್ಸೋಕೆ ಶುರುವಾಗಿದ್ದು...

ಈ ಕಾಟದ ಜೊತೆಗೆ  ಮಳೆರಾಯ ಕೂಡಾ  ನಮ್ಮ ಕಡೆ ತಲೆ ಹಾಕಿ ಮಲಗಿಲ್ಲದಿರುವುದು ನನ್ನ ಬೇಸರ ಇನ್ನಷ್ಟು ಹೆಚ್ಚಿಸಿತ್ತು. ಮಳೆಯಂತೆ ನನ್ನನ್ನು ಕಾಡುವ ಇನ್ನೊಂದು ವಿಷ್ಯ ಇದೆಯೋ ಇಲ್ಲವೋ ಗೊತ್ತಿಲ್ಲ.

ಆದರೆ, ಸದಾ ಬಯಸುವ ಅತಿಥಿ ಬಾರದ ಸಮಯಕ್ಕೂ ಸರಿ.. ನಿರೀಕ್ಷಿತ ಸಮಯಕ್ಕಾದರೂ ಸರಿ ಬರದಿದ್ದರೆ ಸಿಟ್ಟು ಬಾರದೆ ಇರುತ್ತದೆಯೇ?


ಸದಾ ಕಾಡುವ ಅತಿಥಿ ನೀ ಬರದಿದ್ದರೆ ನಮಗೇನು ಗತಿ
ನಮ್ಮ ಪರಿಸ್ಥಿತಿ ಮೇಲೆ ನಿನಗೆ ಮುನಿಸೋ, ನಗೆಯೋ
ನಮಗಂತೂ ನಿನ್ನ ಕಾಣದೆ ವರ್ಷವಾದಂಥ ಅನುಭವ

ಒಪ್ಪಿಕೊಂಡಿರುವೆ ನನ್ನ ಪರಾಭವ ಆಲಂಗಿಸು ಬಾ
ನನ್ನ ಜನುಮದ ಗೆಳೆಯನೇ ನಿನ್ನ ಒಡಲಾಳದ
ಆರ್ದ್ರತೆಯಿಂದ ತೋಯಿಸು ನನ್ನ ಮನದ ದುಗುಡವ
ಮಣ್ಣ ಮಕ್ಕಳ ಕಾಯುವ ಸಖ ನೀನಿಲ್ಲದೆ ನಮಗೆಲ್ಲಿ ನೆಲೆ

ದೂರದ ಊರಿಗೆ ನೀ ಹೋಗಿರುವುದು ಚುಟುಕು ಪ್ರಯಾಣ
ಎಂದೇ ನಾ ಭಾವಿಸಿರುವೆ, ನಿರೀಕ್ಷೆಯ ಹುಸಿ ಮಾಡಬೇಡ
ಮುಂದಿನ ಹುಣ್ಣಿಮೆಯ ಮೊದಲು ಮನೆಯ ಹಿಂದಿನ ಹೊಂಡ
ತುಂಬಿಸು ಮತ್ತೊಮ್ಮೆ ಅಲ್ಲಿ ನಿನ್ನ ನೆನದು ಹೋಕುಳಿ ಆಡುವೆ

ನಿನ್ನ ಸ್ವಾಗತಿಸಲು ಭಜಂತ್ರಿ ಹಿಡಿದು ನಾನೇ ಮುಂದೆ ನಿಲ್ಲುವೆ
ನೀ ಸಮಯಕ್ಕೆ ಸರಿಯಾಗಿ ಕಾಣಿಸದಿದ್ದರೆ ಮನೆಯ ಮುಂದಿನ
ತುಂಗೆಯ ಒಡಲಲ್ಲಿ ಮಲಗಿ ಎಂದಿನಂತೆ ನಿನ್ನ ನೆನದು ಸುರಿಸುವೆ
ನಾಲ್ಕು ಹನಿ ಮತ್ತೊಮ್ಮೆ ನೀ ಬರುವ ಹಾದಿಯ ಕಾಣುತ್ತಾ...

Thursday, April 3, 2008

ಮಳೆ ನಿಲ್ಲದೇ ಮನದಿ ನೂರಾರು ಲಹರಿ ಮೂಡಿಸಿದೆ ..

ಮುನಿಸು ತರವೇ ಮಳೆಯ ಮೇಲೆ?... ಮುಂದುವರೆದು..

ಮಳೆ ನಮ್ಮ ಬದುಕಿನ ಅವಿಭಾಜ್ಯ ಅಂಗ. ಮಳೆ ಬಗ್ಗೆ ನೂರಾರು ಕವಿಗಳು, ಸಾಹಿತಿಗಳು, ಸಾವಿರಾರು ಲೇಖನಗಳನ್ನು ಬರೆದಿರಬಹುದು.
ಆದರೆ ಕಲ್ಪನೆಯ ಚಿತ್ರಣವೆ ಬೇರೆ ವಾಸ್ತವದ ಅನುಭವವೇ ಬೇರೆ.

ಋತುಮಾನದ ಏರುಪೇರು ಜನರ ಜೀವನದಲ್ಲಿ ಅನೇಕ ತಿರುವುಗಳನ್ನು ತರುವುದನ್ನು ಕಂಡಿದ್ದೇನೆ. ಅಕಾಲಿಕ ಮಳೆಯಿಂದ ಮನೆಹಾನಿ, ಬೆಳೆಹಾನಿ ಮಾಮೂಲಾಗಿ ಹೋಗಿದೆ.

ಬೆಳೆದು ನಿಂತ ಫಸಲು ಭೂಮಿ ಪಾಲಾದಾಗ, ಒಬ್ಬ ತಂದೆಗೆ ಬೆಳೆದು ನಿಂತ ಮಗನನ್ನು ಕಳೆದುಕೊಂಡ ದುಃಖದಂತೆ ನಿರಂತರವಾದ ನೋವನ್ನು ನೀಡುತ್ತದೆ.

ಇದಕ್ಕೆ ಪರಿಹಾರ? ಸರ್ಕಾರ ಕೊಡುವ ಕನ್ನಡಿಯೊಳಗಿನ ಗಂಟನ್ನು ನೆಚ್ಚಿಕೊಂಡರೆ ಯಾವ ಪ್ರಯೋಜನವೂ ಆಗುವುದಿಲ್ಲ. ಬದಲಿಗೆ ಮನಬಂದಂತೆ ಬದಲಾಗುವ ಪ್ರಕೃತಿಗೆ ಹೊಂದಿಕೊಳ್ಳುವುದೇ ಸರಿ. ಬಿತ್ತನೆಯಿಂದ ಹಿಡಿದು ಫಸಲು ಬರುವ ತನಕ ಈಗಿನ ಋತುಮಾನಕ್ಕಿಂತ ಕೊಂಚ ಮುಂಚಿತವಾಗಿ ಎಲ್ಲಾ ಕೆಲಸವನ್ನು ಪ್ರಾರಂಭ ಮಾಡಿದರೆ ಒಳಿತೆನಿಸುತ್ತದೆ.

ನಮ್ಮ ಬೇಸಾಯ ಪದ್ಧತಿಯನ್ನು ಈ ತಿಕ್ಕಲು ಮಳೆಗೆ ಹೊಂದಿಸಿಕೊಂಡು ಅದರೊಡನೆ ಆಟವಾಡುವ ಆಸೆಯಾದರೂ, ಅಂದುಕೊಂಡಿದ್ದು ಘಟಿಸದಿರೆ, ಚಿಂತನೆಗೆ ಫಲವಿಲ್ಲ ಎಂಬ ಭಯ ಕಾಡುತ್ತದೆ.

ಆದರೆ ನಮ್ಮ ಹವಾಮಾನ ಇಲಾಖೆ ಕೊಂಚ ಶ್ರಮವಹಿಸಿ ಮಣ್ಣ ಮಕ್ಕಳಿಗೆ ಸರಿಯಾದ ಮುನ್ಸೂಚನೆ ನೀಡಿದರೆ ಸಾಕು. ರೇಡಿಯೊಗೆ ಕಿವಿ ಆನಿಸಿಕೊಂಡು ಹವಾಮಾನ ವರದಿ ಕೇಳುತ್ತಿದ್ದದ್ದು ನೆನಪಾಗುತ್ತದೆ.

ಅದು ಹಾಗಿರಲಿ, ಪರಿಸ್ಥಿತಿ ಹೀಗೆ ಮುಂದುವರೆದರೆ ನಮ್ಮ ಊರೆಂಬ ನಾಲ್ಕು ಮನೆಗಳ ಸಂಸಾರ ವರ್ಷಗಳು ಉರುಳುವುದರಲ್ಲಿ ಇಲ್ಲವಾಗಿ ಹರಿದು ಹಂಚಿಹೋಗುತ್ತದೆ. ಇದನ್ನೆಲ್ಲಾ ನೆನೆದಾಗ ನೋವಾಗುತ್ತದೆ.

ಹೊರಗಡೆಯಿಂದ ಅಪ್ಪ ಮನೆಗೆ ಬಂದು'ಇವತ್ತು ಕುಂಚೆಬೈಲು ಭಟ್ಟರ ಮನೆ ಆಕಳು ಮಳೆ ಹೊಡೆತಕ್ಕೆ ಸಿಕ್ಕಿತಂತೆ, ಗೌಡ್ರ ಆಳು ಲಕ್ಕ ಸಂಸಾರ ಸಮೇತ ಗುಳೆ ಹೊರಟಿದೆಯಂತೆ' ಎಂದೆಲ್ಲಾ ಹೇಳುವಾಗ ಮನದಿ ಮೂಡುವ ಮೊದಲ ಪ್ರಶ್ನೆ ನಮ್ಮ ಸರದಿ ಯಾವಾಗ? ನೆನೆದರೆ ಮೈ ಜುಂ ಎನ್ನುತ್ತದೆ.

ಚಿಕ್ಕಂದಿನಿಂದ ಆಡಿ ಬೆಳೆದ ಮನೆಯನ್ನು ತೊರೆಯುವುದೂ ಒಂದೇ. ಶಾಂತವಾದ ತುಂಗೆಯ ಪ್ರವಾಹಕ್ಕೆ ತಲೆ ಒಡ್ಡುವುದೂ ಒಂದೇ. ಇದನ್ನೆಲ್ಲಾ ನೋಡಿದರೆ ಕಣ್ಣಾಲಿಗಳು ತುಂಬಿ ಬರುತ್ತವೆ.

ಹೌದು, ಬೇಸಿಗೆ ಒಂದು ರೀತಿ ಸಂಭ್ರಮಕ್ಕೆ ನೂರಾರು ರೀತಿ ಹೇಳಿಕೆಗೆ, ಊಟದ ಮನೆಗಳಿಗೆ ತಿರುಗುವ ಕಾಲ. ಈಗಿನ್ನೂ ಶಿಶಿರ ಕಳೆದಿಲ್ಲ. ಸಂಭ್ರಮಕ್ಕೆ ತೆರೆ ಎಳೆದಂತೆ ಆಗಲೇ ಮಳೆರಾಯ ಮನೆಗೆ ಬಂದು ಕುಳಿತರೇ, ಬೇಡದ ಅತಿಥಿಯನ್ನು ಯಾರು ತಾನೇ ಶಪಿಸುವುದಿಲ್ಲ ಹೇಳಿ.

ಆದರೆ ದೂರದ ನಗರವಾಸಿಗಳು ಎಲ್ಲಾ ಸೌಲಭ್ಯಗಳಿದ್ದು, ಎಂದೋ ಸುರಿವ ಎರಡು ಮೂರು ದಿನಗಳ ಮಳೆಗೆ ಬೆಚ್ಚಿ ವರ್ಣಿಸುವ ರೀತಿ ಅಸಹನೀಯವೆನಿಸುತ್ತದೆ.(ಇತ್ತೀಚೆಗೆ ರಾಜಧಾನಿಯಿಂದ ಶಂಕರನ ಪಟಾಲಂ ಬಂದಿದ್ದಾಗ ಮಳೆಯನ್ನು ಅವರ ಜೀವನದ ವಿಲನ್ ರೀತಿಯಲ್ಲಿ ಚಿತ್ರಿಸುತ್ತಿದ್ದನ್ನು ಕಂಡು ಹೇಳಿದೆ ಅಷ್ಟೆ)

ಮಳೆಯಲ್ಲಿ ನೆಂದು, ತೊಯ್ದು ಕನಿಷ್ಠ ಅನುಭವವಿಲ್ಲದ ಜನ ಮಳೆಬಗ್ಗೆ ಉಪನ್ಯಾಸ ನೀಡುವಾಗ ರೇಜಿಗೆ ಎನಿಸುತ್ತದೆ. ಪ್ರಕೃತಿಯೊಡನೆ ಹೊಂದಾಣಿಕೆ ಮಾಡಿಕೊಂಡು ಬದುಕುವುದು ಬೇರೆ. ಪ್ರಕೃತಿಯ ವೈಪರೀತ್ಯ ಎದುರಿಸಿ ಅದನ್ನು ಮೆಟ್ಟಿ ನಿಲ್ಲುವುದು ಬೇರೆ.

ಈ ವಿಷಯದಲ್ಲಿ ನಾ.ಡಿಸೋಜರ ಪಾತ್ರಧಾರಿ ನಾಗಿ(ದ್ವೀಪ ಚಿತ್ರದಲ್ಲಿ) ಗುರುವೇ ಸರಿ. ಸಂಕಲ್ಪ ಸ್ಥಿರವಾಗಿದ್ದರೆ ಪ್ರಕೃತಿ ನಮ್ಮ ಕೈಹಿಡಿತದಲ್ಲಿರುತ್ತದೆ. ಪರಿಸರದೊಡನೆ ಬೆರೆತು ನಮ್ಮ ಆಣತಿಯಂತೆ ಅದನ್ನು ರೂಪಿಸಿಕೊಳ್ಳುವ ಜಾಣ್ಮೆ ಅರಿತರೇ ಬದುಕಲ್ಲಿ ಯಾವುದೂ ಅನಿಷ್ಟವಲ್ಲ, ಅಕಾಲಿಕ ಕಷ್ಟವಲ್ಲ.

ಮತ್ತೊಮ್ಮೆ ಮಳೆ ಬಂದಾಗ ಮನಸೋ ಇಚ್ಛೆ ನೆನೆದು ನೋಡಿ ಅದರ ಮಜಾನೇ ಬೇರೆ, ಆಗ ತಿಳಿಯುತ್ತೆ ಅದರ ಗಮ್ಮತ್ತು. (ಜ್ವರ ಬಂತೆಂದು ಬೈಯಬೇಡಿ ಮತ್ತೆ) ನಾನಂತೂ ಪೆನ್ನು ಕೆಳಗಿಟ್ಟು ಅಂಗಳಕ್ಕೆ ಇಳಿಯುತ್ತಿದ್ದೇನೆ. ಮಳೆ ನಿಲ್ಲುವವರೆಗೂ ನಿರಂತರ ಮೋಜಿನಾಟ.....

ಮುನಿಸು ತರವೇ ಮಳೆಯ ಮೇಲೆ?

"ಮಳೆ ಎಂದರೆ ಹಾಗೆ. ಮನಸ್ಸಿನಲ್ಲಿ ನೂರಾರು ಭಾವನೆಗಳ ಲಹರಿಯನ್ನು ತರುತ್ತದೆ. ಬಹುದಿನ ಕಾಲ ನನ್ನ ಬರವಣಿಗೆಗೆ ಬ್ರೇಕ್ ಹಾಕಿದ್ದು, ಪುನಃ ಬರೆಯಲು ಪ್ರೇರಣೆ ನೀಡುತ್ತಿರುವುದು ಈ ಮಳೆಯೇ"

"ಥೂ ಅನಿಷ್ಟ.. ಎಲ್ಲೇ ಹೋದರೂ ಹಾಳಾದ್ದು.. ಇದು ನನ್ನ ಬಿಡೋ ಹಾಗೆ ಕಾಣೋದಿಲ್ಲ. ಏನು ಪಿರಿಪಿರಿಯಪ್ಪಾ ಇದರದ್ದು" ಎಂದು ಬೆನ್ನಿಗಂಟಿದ್ದ ಮಕ್ಕಳನ್ನು ಗದುರುವಂತೆ ಗದರುತ್ತಾ ಕೊಡೆ ಮಡಚಿ ಒಳ ಬಂದ ನಂತರವೂ ಅವನ ಮಾತು ಮುಂದುವರೆದಿತ್ತು. ಇಲ್ಲದವರಿಗೆ ಅಭಾವ ವೈರಾಗ್ಯ, ಇದು ಒಂಥರಾ ಅಗಾಧ ವೈರಾಗ್ಯ" ಎನ್ನುತ್ತಾ ತಲೆ ಕೊಡವುತ್ತಾ ಅಜ್ಜನ ರೀತಿ ಕೂತ.

ಹೊಸಬರೂ ಯಾರೋ ಬಂದ್ರು ಈ ಮಳೇಲಿ ಎಂದುಕೊಳ್ಳುತ್ತಾ ನಾನು ಪಡಸಾಲೆಗೆ ಬಂದು ನೋಡಿದೆ. ಶಂಕರನ ಸ್ಥಿತಿ ಕಂಡು ನಗುತ್ತಾ ಹೇಳಿದೆ

'ಏನು ಇವತ್ತು ರಾಯರು ತುಂಬಾನೇ ಬೇಜಾರಲ್ಲಿರುವಂತಿದೆ" ಏನಾಯ್ತಪ್ಪ ಅಂತದ್ದು..

"ಬೇಜಾರಂತೆ ಬೇಜಾರು, ಬೆಂಗ್ಳೂರು ಬಿಟ್ಟಾಗ ಶುರುವಾಗಿದ್ದು. ಇಲ್ಲಿಗೆ ಬಂದು ಎರಡು ದಿನ ಆಯ್ತು ಇನ್ನು ನಿಂತಿಲ್ಲ. ನಿಲ್ಲೋ ಹಾಂಗೂ ಕಾಣಲ್ಲ ಬಿಡು. ನಾನು ಎಷ್ಟು ಮಳೆ ನೋಡಿಲ್ಲ. ಇದು ಯಾಕೋ ಸರಿಯಿಲ್ಲ. ಅಪ್ಪಯ್ಯ ಹೇಳ್ತಿದ್ದ ಈ ಅಕಾಲದ ಮಳೆ ನಮ್ಮನ್ನು ಹಾಳು ಮಾಡೋಕೆ ಬಂದಂತಿದೆ ಅಂತಾ"

ಅವನ ಧಾಟಿ ನೋಡಿದರೆ ೮೦ರ ಹರೆಯದ ನಮ್ಮಜ್ಜ ಮೈ ಮೇಲೆ ಬಂದಂತೆ ಕಾಣುತ್ತಿತ್ತು. ಅವನ ಬೆಂಗ್ಳೂರಿನ ಗೆಳೆಯರು ಮಳೆಯ ಬಗ್ಗೆ ದೂರುವ ಮಾತನ್ನು ಎಂದೂ ಆಡುತ್ತಿದ್ದ. ಆಗೆಲ್ಲಾ ಸುಮ್ಮನಿದ್ದೆ ಇವತ್ತು ಅವನನ್ನು ಕಿಚಾಯಿಸಲು ನಿರ್ಧರಿಸಿ ಹೇಳಿದೆ.

"ಅಕಾಲದ ಮಳೆ ನಿಜ ಆದರೆ ಹಾಳು ಮಾಡೋಕೆ ಅನ್ನೊದ್ದನ್ನಾ ನಾ ಒಪ್ಪಲ್ಲಬಿಡು" ಎಂದೆ..

ನನ್ನ ಉತ್ತರದಿಂದ ಸಂತುಷ್ಟಗೊಳ್ಳದೆ ಮುಂದುವರೆಸಿದ...

'ನೀನು ಬಿಡಕ್ಕ, ಯಾವಾಗಲೂ ಮಳೆ ಪರನೇ ದ್ವೀಪ ಫಿಲ್ಮಂ ನಲ್ಲಿನ ನಾಗಿ ಇದ್ದಂಗೆ, ಸದ್ಯಕ್ಕೆ ನಮ್ಮೂರಿಗೆ ನದಿ ಅಷ್ಟು ಹತ್ರಿಲ್ಲ ಪುಣ್ಯಕ್ಕೆ. ಕಡೆಗೆ ಎಲ್ಲಾ ನಮ್ಮ ಭೂತನಾಥನ ದಯೆ ಅನ್ನೋಕು ಯಾರಿಲ್ಲ ಎಂದು ಬದಲಿಗೆ' ನನ್ನೇ ಗೇಲಿ ಮಾಡತೊಡಗಿದ.

'ಹಾಂಗಲ್ಲ ನಾ ಹೇಳೋದು ಇಲ್ಲಿ ಕೇಳು ಮಳೆ ಬರುತ್ತೆ. ಹೋಗುತ್ತೆ. ಅದನ್ನು ಈಗ ಬಾ ಆಗ ಬಾ ಅಂತಾ ಹೇಳಿಕೆ ಕೊಟ್ಟು ಕರೀಲಿಕ್ಕೆ ಬರುತ್ತಾ ಹೇಳು. ಬಂದಾಗ ಅನುಭವಿಸಬೇಕು. ಎಲ್ಲಾ ಸರ್ತಿ ಮಳೆಯಿಂದ ಶುಭಾನೇ ಆಗುತ್ತೆ ಅಂದ್ರೆ ಹೇಗೆ, ಅಶುಭನೂ ಆಗುತ್ತೆ. ಅದಕ್ಕೆ ತಯಾರಿರಬೇಕು ಜೀವ. ಕಷ್ಟ, ಸಾವು ನೋವು ಹೇಗೆ ಹೇಳಿಕೇಳಿ ಬರೋದಿಲ್ಲ್ವೋ ಹಾಗೆ. ಅವು ಬರೋ ಸಮಯಕ್ಕೆ ನಾವು ತಯಾರಿರಬೇಕು ಅಷ್ಟೆ. ಎಷ್ಟು ಚೆಂದ ಉಂಟು ಮಳೆ. ಅದರ ರುಚಿನಾ ಆಸ್ವಾದಿಸಬೇಕು' ಅಂದೆ. ಜೋರಾಗಿ ನಗಾಡುತ್ತಾ...

'ಹಹ್ಹಹ್ಹಹ್ಹ. ರುಚಿ ಏನು ಬಂತು ಅಮಟೇ ಕಾಯಿ ತೊಟ್ಟು....ಮಳೆಯಿಂದ ಎಷ್ಟು ಊಟದ ಮನೆ ತಪ್ಪೋತು ಗೊತ್ತಾ' ಎಂದು ಮುಖ ಸಪ್ಪಗೆ ಮಾಡಿಕೊಂಡ.

ಹೋ.. ಹಾಗೇಳು ಮತ್ತೆ. ಛೆ ಪಾಪಾ. ಸರಿ ರುಚಿ ರುಚಿಯಾಗಿ ನಿಂಗೆ ಬೇಕಾದ್ದು ಮಾಡಿ ನಿನ್ನ ಹೊಟ್ಟೇನೇನೋ ತಂಪಾಗಿಸಬಹುದಪ್ಪಾ. ಆದ್ರೆ ನಿನ್ನ ಕಣ್ಣು ತಂಪಾಗಿಸೋಕೆ ಇಲ್ಲಿ ಯಾರನ್ನು ಕರೆತರೋದು ಗೊತ್ತಾಗುತ್ತಿಲ್ಲಪ್ಪ' ಎಂದು ನಕ್ಕೆ.

ಹೇ.. ನೀನೊಂದು... ಯಾವಾಗಲೂ ಕುಶಾಲು ನಿಂಗೆ.. ನಿಂಗೆ ಹಿರಿಯಪ್ಪ ರಚಿತ ಅಂತಾ ಹೆಸರಿಡೋ ಬದಲು ಕುಶಾಲಿ ಅಂಥಾ ಹೆಸರಿಡಬೇಕಿತ್ತು. ನಿಂಗೆ ಬೇಜಾರೇ ಆಗೋದಿಲ್ಲ ಕಾಣ್ದದೆ.

ಹ್ಞು...ಕಣಪ್ಪಾ ಹೆಸರು ಬದಲಿಸಿಬಿಡುವಾ ಬಿಡು..ತಡಿ ಬಂದೆ ಎಂದೇಳಿ ಒಳಹೋಗಿ...ಬಿಸಿಬಿಸಿ ಕಾಫಿ ತಂದು ಅವನ ಕೈಗಿತ್ತೆ.

ಹ್ಞಾ.. ಹೇಳೋದು ಮರೆತೆ ಮೊನ್ನೆ ಪೇಟೆಗೆ ಹೋಗಿದ್ದಾಗ.. ಮೇಗಿನ ಗದ್ದೆ ರಮೇಶ ಸಿಕ್ಕಿದ್ದ. ನಿನ್ನ ಗಳಸ್ಯ ಕಂಠಸ್ಯ...

'ಹೌದಾ..ಏನಂದಾ'

'ಅವನ ಜತೆ ಅವನ ತಂಗಿ ಸುರಜಾ ಇದ್ದಳು. ಊರಿಗೆ ಇವತ್ತೆ ಬಂದಿದ್ದು..ಮಳೆಯಿಂದ ಎಲ್ಲಿಗೂ ಕಾಲು ಬೆಳಸಲಿಲ್ಲ ಅಂಥಾ ಪೇಚಾಡುತ್ತಿದ್ದಳು ಪಾಪಾ

'ಹೌದಾ...ಏನಂದ್ಳು 'ಎಂದವನು ನಾಲಿಗೆ ಕಚ್ಚಿಕೊಂಡ...ಕುಡಿಯುತ್ತಿದ್ದ ಕಾಫಿ ಅನ್ನು ಚೆಲ್ಲಿಕೊಳ್ಳುತ್ತಾ...

ನನ್ನ ನಗು ಹೆಚ್ಚಾಯಿತು..

'ಸರಿ ಮಾರಾಯ್ತಿ ಇಲ್ಲೆ ಇದ್ದರೇ ಕಿಚಾಯಿಸ್ತಾನೇ ಇರುತ್ತೀಯಾ. ನಾನು ತೋಟಕ್ಕೆ ಕಡೆ ಹೋಗ್ತೀನಿ. ಹಿರಿಯಪ್ಪ ಸಿಗಬಹುದು ಅಲ್ಲಿ ಎಂದು ಎದ್ದು ನಿಂತ. ಕುಡಿದ ಕಾಫಿ ಲೋಟ ಬದಿಗಿಟ್ಟು.ಅಂಗಳಕ್ಕೆ ಜಿಗಿದ ನಡೆದ.

ಅವನು ಕೊಡೆ ಬಿಡಿಸಿ ಅಂಗಳಕ್ಕೆ ಹಾರಿದ ಅವನಿಗೆ ಹಳ್ಳದ ನೀರು ಹೆಚ್ಚಾಗಿದೆಯಂತೆ.. ಹುಷಾರು ಎನ್ನುತ್ತಾ...ಅವನು ನಡೆದ ಹಾದಿ ನೋಡುತ್ತಾ ನೆನಪಿನಾಳಕ್ಕೆ ಇಳಿದೆ......

ಮುಂದುವರೆದು.....ಮಳೆ ನಿಲ್ಲದೇ ಮನದಿ ನೂರಾರು ಲಹರಿ ಮೂಡಿಸಿದೆ ..

Sunday, May 27, 2007

ಮತ್ತೆ ಬಿತ್ತು ಮಳೆ.. ಕನಸಿನೊಡನೆ

ಮಳೆಯಲ್ಲಿ ನೆಂದ ಮನಸು
ಮೂಡಿಸಿತು ಕನಸನು
ತುಂತುರು ಹನಿಗಳ ಮಳೆ
ಸವಿಗನಸಿನ ಮಾಲೆ ಹೆಣೆದಿತ್ತು
ಸ್ವಪ್ನದ ಹೊಳೆ ಹರಿಸಿ ನನ್ನ ತೇಲಿಸಿತ್ತು.
ನೆಂದರೂ ಮನ ನಡುಕವಿಲ್ಲ
ಲಹರಿಯಂತೆ ಕನಸ ಅಲೆಯಿದ್ದರೂ
ಸವಿನೆನಪ ದೋಣಿ ದಿಕ್ಕು ತಪ್ಪಿಲ್ಲ

ಬದಲಾಗದೆ ದಿಕ್ಕು ಮನಕೆ ಮೂಡಿತು ಬೇಸರ
ನೆತ್ತಿಯನ್ನು ಸುಡುತ್ತಿದ್ದ ಆಗ ನೇಸರ
ದೂರದಿ ಕಂಡ ನೆಲೆ ಮರೀಚಿಕೆಯಾಯ್ತು
ಕನಸ ಕಂಡ ಮನಸ್ಸು ಯಾನ ನಿಲ್ಲಿಸಿತು
ಆದರೆ ತುಂತುರು ಹನಿಗಳ ಮಳೆ
ನಿಲ್ಲದೆ ಸುರಿಯುತ್ತಿತ್ತು....

Friday, April 13, 2007

ಮಳೆ ನಿಲ್ಲದೇ

ಸುರಿಯುತ್ತಿದೆ ಮಳೆ ಇಲ್ಲಿ
ಗುಡುಗು ಮಿಂಚಿನ ತಾಳದ ಜೊತೆಗೆ
ತೊಯ್ಯುತ್ತಿದೆ ಮನವು ನೋವು ನಲಿವಿನ ಈಚೆಗೆ
ಯಾರ ಬೇಡಿಕೆಗೋ ಬೇಡದ ಮಳೆ ಸುರಿಯುತ್ತಿದೆ
ವೈಶಾಖದ ದಿನದಿ ಆಷಾಢವ ನೆನಪಿಸುತ್ತಿದೆ
ಸೋನೆ ಮಳೆ ಹೋಗಿ ಚಂಡಿ ಹಿಡಿದಂತೆ ಆಡುತ್ತಿದೆ,

ಸುರಿವ ಮಳೇ ಹರಿದಿರುವ ಕಣ್ಣೀರ ಮರೆಮಾಚಿದೆ
ಮೌನದಿ ಸುಳಿದ ಯಾವುದೊ ಸವಿನೆನಪು ಮತ್ತೆ ನಗೆ ತರಿಸಿದೆ
ವಿಷಾದದ ನಗೆಯ ಹಿಂದೆ ನೋವಿನ ಛಾಯೆ
ಹನಿ ಹನಿ ಧರೆಗಿಳಿದು ಮೂಡಿಸಿದೆ ಎನೋ ಮಾಯೆ
ನೋವು ನಲಿವಿನ ವರ್ಷಧಾರೆ ಹನಿ ಹನಿಯಾಗಿ ಕವನವಾಗಿದೆ
ಸುರಿಯುತ್ತಿದ್ದ ಮಳೆ ನಿಂತಿದೆ ಇಲ್ಲಿ