page1

Pages

Showing posts with label life. Show all posts
Showing posts with label life. Show all posts

Wednesday, March 28, 2012

ಬದುಕು ಎಂಬ ಮಾಯೆ

ಏನನ್ನೋ ಗೀಚುವುದರ ಬದಲು ಸುಮ್ಮನ್ನಿದ್ದು ಖಾಲಿ ಹಾಳೆಯ ಮರ್ಯಾದೆ ಉಳಿಸುವುದು ಮೇಲು ಎಂದೆನಿಸಿತ್ತು..ಹಾಗಾಗಿ ಕಳೆದ ಆರು ತಿಂಗಳಿನಿಂದ ಒಂದು ಅಕ್ಷರ ಕೂಡ ಹುಟ್ಟಲಿಲ್ಲ .. ಹುಟ್ಟಿದ್ದು ಈ ಬ್ಲಾಗ್ ಪುಟ ಸೇರಲಿಲ್ಲ...

ಅರ್ಥವಿಲ್ಲದ ವ್ಯರ್ಥಪ್ರಲಾಪದ ಮಾತುಗಳನ್ನು ಬರಿದೇ ಪೋಣಿಸುತ್ತಾ ಹೋದರೆ ನನ್ನೂರಿನಿಂದ ರಾಜಧಾನಿ ತಲುಪಬಹುದಿತ್ತು. ಅಲ್ಲಿಂದ ಮತ್ತೆ ವೆಬ್ ಪುಟ ಸೇರಿ ಎಲ್ಲೆಡೆ ಹರಡಬಹುದಿತ್ತು. ಆದರೆ, ಯಾಕೋ ಏನನ್ನೂ ಬರೆಯುವ ಮನಸ್ಥಿತಿ ನನ್ನಲಿರಲಿಲ್ಲ. ನನಗ್ಯಾವ ಕಾಯಿಲೆಯೂ ಬಂದಿರಲಿಲ್ಲ ಎಂದರೆ ಅದು ದೈಹಿಕ ಯಾತನೆಯ ಬಗ್ಗೆ ಮಾತ್ರ ಹೇಳಿದ್ದಂತಾಗುತ್ತದೆ.

ಮಾನಸಿಕವಾಗಿ ಕಳೆದ ಆರು ತಿಂಗಳಿನಲ್ಲಿ ಸಾಕಷ್ಟು ಜರ್ಝರಿತಗೊಂಡಿದ್ದೇನೆ. ಎಂದೂ ಅಳದ ಕೂಸಿನ ಕಣ್ಣಲ್ಲಿ ನಾಲ್ಕು ಹನಿ ಕಂಡ ಅಪ್ಪ ಕೂಡಾ ಕೊಂಚ ಗಾಬರಿಯಾಗಿದ್ದರು. ಆಪ್ತರ ಅಗಲಿಕೆಯ ನೋವಿನಲ್ಲಿದ್ದ ನಾನು.. ನಾನು ನಾನಾಗಿ ಮತ್ತೆ ರೂಪುಗೊಳ್ಳಲು ಎರಡು ಋತುಗಳೇ ಬೇಕಾಯಿತು..

ಏನಾಗಿತ್ತು ನನಗೆ? ನಾನ್ಯಾಕೆ ಎಲ್ಲವನ್ನು ತೊರೆದರೂ ಎಲ್ಲವನ್ನು ನನ್ನದೆಂಬಂತೆ ಆಡಿ ಅಪಹಾಸ್ಯಕ್ಕೀಡಾದೆ ಗೊತ್ತಿಲ್ಲ...

Saturday, March 14, 2009

ನೆಲೆ


ಇರುಳು ಕಳೆದು ಕೋಟಿ ಚುಕ್ಕಿಗಳ ಬೆಳಕಿನಿಂದ
ಮನೆ ಮನ ಬೆಳಗಿರಲು,
ಒಂಟಿತಾರೆ ದಿನಕರನ ಸಾಂಗತ್ಯವೇಕೆ?

ಬರಡು ಭೂಮಿಗೆ ನೀರುಣಿಸಿ ಸಕಲ ಚರಾಚರಕ್ಕೆ
ಜೀವಜಲವಾಗಿಹ ತುಂಗೆ ಇರಲು,
ತನ್ನೊಡಲಲ್ಲಿ ನೂರು ತುಂಗೆಯಯರನ್ನುಳ್ಳ
ಕಡಲ ಹಂಬಲವೇಕೆ?

ಗೋಳಿಮರದಿ ಕೂತ ಪುಟ್ಟ ಮಡಿವಾಳ ಹಕ್ಕಿಯ
ಇನಿದನಿ ಇಂಪಾಗಿರೆ,
ದೂರದೂರಿನ ಕೋಗಿಲೆಯ ಸ್ವರ ಆಲಿಸುವಾಸೆಯೇಕೆ?

ಮೈಮನಕೆ ಮುದ ನೀಡುವ ಪ್ರೀತಿಯ ಗುಡಿಸಿರಲು
ಕಾಣದೂರ ಹಂಗಿನರಮನೆಯ ವೈಭೋಗವೇಕೆ?
ಒಡಲಾಳದಲ್ಲಿ ಆರದ ಜ್ಞಾನಜ್ವಾಲೆ ಆವರಿಸಲು
ಉಳಿದ ಕಾಮತೃಷೆಯೇಕೆ?

ಮಲೆನಾಡಿನ ಮಗಳಾಗೆ ನಾ ಇರುವೆ, ನನ್ನ ಅಳಿವು ಉಳಿವು
ಗೆಲುವು ಸೋಲು, ನೋವು ನಲಿವಿಗೆ
ಪಂಚಭೂತಗಳೇ ಸಾಕ್ಷಿಯಾಗಿರಲಿ
ಎಲ್ಲಕ್ಕೂ ಅವುಗಳ ನೆರವಿರಲಿ, ನನ್ನಿ ಪರಿಸರ ತೊರೆಯುವ ಮುನ್ನ
ನನ್ನ ಈ ಆಕೃತಿ ಪ್ರಕೃತಿಯೊಂದಿಗೆ ಲೀನವಾಗಿರಲಿ

Thursday, April 3, 2008

ಮಳೆ ನಿಲ್ಲದೇ ಮನದಿ ನೂರಾರು ಲಹರಿ ಮೂಡಿಸಿದೆ ..

ಮುನಿಸು ತರವೇ ಮಳೆಯ ಮೇಲೆ?... ಮುಂದುವರೆದು..

ಮಳೆ ನಮ್ಮ ಬದುಕಿನ ಅವಿಭಾಜ್ಯ ಅಂಗ. ಮಳೆ ಬಗ್ಗೆ ನೂರಾರು ಕವಿಗಳು, ಸಾಹಿತಿಗಳು, ಸಾವಿರಾರು ಲೇಖನಗಳನ್ನು ಬರೆದಿರಬಹುದು.
ಆದರೆ ಕಲ್ಪನೆಯ ಚಿತ್ರಣವೆ ಬೇರೆ ವಾಸ್ತವದ ಅನುಭವವೇ ಬೇರೆ.

ಋತುಮಾನದ ಏರುಪೇರು ಜನರ ಜೀವನದಲ್ಲಿ ಅನೇಕ ತಿರುವುಗಳನ್ನು ತರುವುದನ್ನು ಕಂಡಿದ್ದೇನೆ. ಅಕಾಲಿಕ ಮಳೆಯಿಂದ ಮನೆಹಾನಿ, ಬೆಳೆಹಾನಿ ಮಾಮೂಲಾಗಿ ಹೋಗಿದೆ.

ಬೆಳೆದು ನಿಂತ ಫಸಲು ಭೂಮಿ ಪಾಲಾದಾಗ, ಒಬ್ಬ ತಂದೆಗೆ ಬೆಳೆದು ನಿಂತ ಮಗನನ್ನು ಕಳೆದುಕೊಂಡ ದುಃಖದಂತೆ ನಿರಂತರವಾದ ನೋವನ್ನು ನೀಡುತ್ತದೆ.

ಇದಕ್ಕೆ ಪರಿಹಾರ? ಸರ್ಕಾರ ಕೊಡುವ ಕನ್ನಡಿಯೊಳಗಿನ ಗಂಟನ್ನು ನೆಚ್ಚಿಕೊಂಡರೆ ಯಾವ ಪ್ರಯೋಜನವೂ ಆಗುವುದಿಲ್ಲ. ಬದಲಿಗೆ ಮನಬಂದಂತೆ ಬದಲಾಗುವ ಪ್ರಕೃತಿಗೆ ಹೊಂದಿಕೊಳ್ಳುವುದೇ ಸರಿ. ಬಿತ್ತನೆಯಿಂದ ಹಿಡಿದು ಫಸಲು ಬರುವ ತನಕ ಈಗಿನ ಋತುಮಾನಕ್ಕಿಂತ ಕೊಂಚ ಮುಂಚಿತವಾಗಿ ಎಲ್ಲಾ ಕೆಲಸವನ್ನು ಪ್ರಾರಂಭ ಮಾಡಿದರೆ ಒಳಿತೆನಿಸುತ್ತದೆ.

ನಮ್ಮ ಬೇಸಾಯ ಪದ್ಧತಿಯನ್ನು ಈ ತಿಕ್ಕಲು ಮಳೆಗೆ ಹೊಂದಿಸಿಕೊಂಡು ಅದರೊಡನೆ ಆಟವಾಡುವ ಆಸೆಯಾದರೂ, ಅಂದುಕೊಂಡಿದ್ದು ಘಟಿಸದಿರೆ, ಚಿಂತನೆಗೆ ಫಲವಿಲ್ಲ ಎಂಬ ಭಯ ಕಾಡುತ್ತದೆ.

ಆದರೆ ನಮ್ಮ ಹವಾಮಾನ ಇಲಾಖೆ ಕೊಂಚ ಶ್ರಮವಹಿಸಿ ಮಣ್ಣ ಮಕ್ಕಳಿಗೆ ಸರಿಯಾದ ಮುನ್ಸೂಚನೆ ನೀಡಿದರೆ ಸಾಕು. ರೇಡಿಯೊಗೆ ಕಿವಿ ಆನಿಸಿಕೊಂಡು ಹವಾಮಾನ ವರದಿ ಕೇಳುತ್ತಿದ್ದದ್ದು ನೆನಪಾಗುತ್ತದೆ.

ಅದು ಹಾಗಿರಲಿ, ಪರಿಸ್ಥಿತಿ ಹೀಗೆ ಮುಂದುವರೆದರೆ ನಮ್ಮ ಊರೆಂಬ ನಾಲ್ಕು ಮನೆಗಳ ಸಂಸಾರ ವರ್ಷಗಳು ಉರುಳುವುದರಲ್ಲಿ ಇಲ್ಲವಾಗಿ ಹರಿದು ಹಂಚಿಹೋಗುತ್ತದೆ. ಇದನ್ನೆಲ್ಲಾ ನೆನೆದಾಗ ನೋವಾಗುತ್ತದೆ.

ಹೊರಗಡೆಯಿಂದ ಅಪ್ಪ ಮನೆಗೆ ಬಂದು'ಇವತ್ತು ಕುಂಚೆಬೈಲು ಭಟ್ಟರ ಮನೆ ಆಕಳು ಮಳೆ ಹೊಡೆತಕ್ಕೆ ಸಿಕ್ಕಿತಂತೆ, ಗೌಡ್ರ ಆಳು ಲಕ್ಕ ಸಂಸಾರ ಸಮೇತ ಗುಳೆ ಹೊರಟಿದೆಯಂತೆ' ಎಂದೆಲ್ಲಾ ಹೇಳುವಾಗ ಮನದಿ ಮೂಡುವ ಮೊದಲ ಪ್ರಶ್ನೆ ನಮ್ಮ ಸರದಿ ಯಾವಾಗ? ನೆನೆದರೆ ಮೈ ಜುಂ ಎನ್ನುತ್ತದೆ.

ಚಿಕ್ಕಂದಿನಿಂದ ಆಡಿ ಬೆಳೆದ ಮನೆಯನ್ನು ತೊರೆಯುವುದೂ ಒಂದೇ. ಶಾಂತವಾದ ತುಂಗೆಯ ಪ್ರವಾಹಕ್ಕೆ ತಲೆ ಒಡ್ಡುವುದೂ ಒಂದೇ. ಇದನ್ನೆಲ್ಲಾ ನೋಡಿದರೆ ಕಣ್ಣಾಲಿಗಳು ತುಂಬಿ ಬರುತ್ತವೆ.

ಹೌದು, ಬೇಸಿಗೆ ಒಂದು ರೀತಿ ಸಂಭ್ರಮಕ್ಕೆ ನೂರಾರು ರೀತಿ ಹೇಳಿಕೆಗೆ, ಊಟದ ಮನೆಗಳಿಗೆ ತಿರುಗುವ ಕಾಲ. ಈಗಿನ್ನೂ ಶಿಶಿರ ಕಳೆದಿಲ್ಲ. ಸಂಭ್ರಮಕ್ಕೆ ತೆರೆ ಎಳೆದಂತೆ ಆಗಲೇ ಮಳೆರಾಯ ಮನೆಗೆ ಬಂದು ಕುಳಿತರೇ, ಬೇಡದ ಅತಿಥಿಯನ್ನು ಯಾರು ತಾನೇ ಶಪಿಸುವುದಿಲ್ಲ ಹೇಳಿ.

ಆದರೆ ದೂರದ ನಗರವಾಸಿಗಳು ಎಲ್ಲಾ ಸೌಲಭ್ಯಗಳಿದ್ದು, ಎಂದೋ ಸುರಿವ ಎರಡು ಮೂರು ದಿನಗಳ ಮಳೆಗೆ ಬೆಚ್ಚಿ ವರ್ಣಿಸುವ ರೀತಿ ಅಸಹನೀಯವೆನಿಸುತ್ತದೆ.(ಇತ್ತೀಚೆಗೆ ರಾಜಧಾನಿಯಿಂದ ಶಂಕರನ ಪಟಾಲಂ ಬಂದಿದ್ದಾಗ ಮಳೆಯನ್ನು ಅವರ ಜೀವನದ ವಿಲನ್ ರೀತಿಯಲ್ಲಿ ಚಿತ್ರಿಸುತ್ತಿದ್ದನ್ನು ಕಂಡು ಹೇಳಿದೆ ಅಷ್ಟೆ)

ಮಳೆಯಲ್ಲಿ ನೆಂದು, ತೊಯ್ದು ಕನಿಷ್ಠ ಅನುಭವವಿಲ್ಲದ ಜನ ಮಳೆಬಗ್ಗೆ ಉಪನ್ಯಾಸ ನೀಡುವಾಗ ರೇಜಿಗೆ ಎನಿಸುತ್ತದೆ. ಪ್ರಕೃತಿಯೊಡನೆ ಹೊಂದಾಣಿಕೆ ಮಾಡಿಕೊಂಡು ಬದುಕುವುದು ಬೇರೆ. ಪ್ರಕೃತಿಯ ವೈಪರೀತ್ಯ ಎದುರಿಸಿ ಅದನ್ನು ಮೆಟ್ಟಿ ನಿಲ್ಲುವುದು ಬೇರೆ.

ಈ ವಿಷಯದಲ್ಲಿ ನಾ.ಡಿಸೋಜರ ಪಾತ್ರಧಾರಿ ನಾಗಿ(ದ್ವೀಪ ಚಿತ್ರದಲ್ಲಿ) ಗುರುವೇ ಸರಿ. ಸಂಕಲ್ಪ ಸ್ಥಿರವಾಗಿದ್ದರೆ ಪ್ರಕೃತಿ ನಮ್ಮ ಕೈಹಿಡಿತದಲ್ಲಿರುತ್ತದೆ. ಪರಿಸರದೊಡನೆ ಬೆರೆತು ನಮ್ಮ ಆಣತಿಯಂತೆ ಅದನ್ನು ರೂಪಿಸಿಕೊಳ್ಳುವ ಜಾಣ್ಮೆ ಅರಿತರೇ ಬದುಕಲ್ಲಿ ಯಾವುದೂ ಅನಿಷ್ಟವಲ್ಲ, ಅಕಾಲಿಕ ಕಷ್ಟವಲ್ಲ.

ಮತ್ತೊಮ್ಮೆ ಮಳೆ ಬಂದಾಗ ಮನಸೋ ಇಚ್ಛೆ ನೆನೆದು ನೋಡಿ ಅದರ ಮಜಾನೇ ಬೇರೆ, ಆಗ ತಿಳಿಯುತ್ತೆ ಅದರ ಗಮ್ಮತ್ತು. (ಜ್ವರ ಬಂತೆಂದು ಬೈಯಬೇಡಿ ಮತ್ತೆ) ನಾನಂತೂ ಪೆನ್ನು ಕೆಳಗಿಟ್ಟು ಅಂಗಳಕ್ಕೆ ಇಳಿಯುತ್ತಿದ್ದೇನೆ. ಮಳೆ ನಿಲ್ಲುವವರೆಗೂ ನಿರಂತರ ಮೋಜಿನಾಟ.....

ಮುನಿಸು ತರವೇ ಮಳೆಯ ಮೇಲೆ?

"ಮಳೆ ಎಂದರೆ ಹಾಗೆ. ಮನಸ್ಸಿನಲ್ಲಿ ನೂರಾರು ಭಾವನೆಗಳ ಲಹರಿಯನ್ನು ತರುತ್ತದೆ. ಬಹುದಿನ ಕಾಲ ನನ್ನ ಬರವಣಿಗೆಗೆ ಬ್ರೇಕ್ ಹಾಕಿದ್ದು, ಪುನಃ ಬರೆಯಲು ಪ್ರೇರಣೆ ನೀಡುತ್ತಿರುವುದು ಈ ಮಳೆಯೇ"

"ಥೂ ಅನಿಷ್ಟ.. ಎಲ್ಲೇ ಹೋದರೂ ಹಾಳಾದ್ದು.. ಇದು ನನ್ನ ಬಿಡೋ ಹಾಗೆ ಕಾಣೋದಿಲ್ಲ. ಏನು ಪಿರಿಪಿರಿಯಪ್ಪಾ ಇದರದ್ದು" ಎಂದು ಬೆನ್ನಿಗಂಟಿದ್ದ ಮಕ್ಕಳನ್ನು ಗದುರುವಂತೆ ಗದರುತ್ತಾ ಕೊಡೆ ಮಡಚಿ ಒಳ ಬಂದ ನಂತರವೂ ಅವನ ಮಾತು ಮುಂದುವರೆದಿತ್ತು. ಇಲ್ಲದವರಿಗೆ ಅಭಾವ ವೈರಾಗ್ಯ, ಇದು ಒಂಥರಾ ಅಗಾಧ ವೈರಾಗ್ಯ" ಎನ್ನುತ್ತಾ ತಲೆ ಕೊಡವುತ್ತಾ ಅಜ್ಜನ ರೀತಿ ಕೂತ.

ಹೊಸಬರೂ ಯಾರೋ ಬಂದ್ರು ಈ ಮಳೇಲಿ ಎಂದುಕೊಳ್ಳುತ್ತಾ ನಾನು ಪಡಸಾಲೆಗೆ ಬಂದು ನೋಡಿದೆ. ಶಂಕರನ ಸ್ಥಿತಿ ಕಂಡು ನಗುತ್ತಾ ಹೇಳಿದೆ

'ಏನು ಇವತ್ತು ರಾಯರು ತುಂಬಾನೇ ಬೇಜಾರಲ್ಲಿರುವಂತಿದೆ" ಏನಾಯ್ತಪ್ಪ ಅಂತದ್ದು..

"ಬೇಜಾರಂತೆ ಬೇಜಾರು, ಬೆಂಗ್ಳೂರು ಬಿಟ್ಟಾಗ ಶುರುವಾಗಿದ್ದು. ಇಲ್ಲಿಗೆ ಬಂದು ಎರಡು ದಿನ ಆಯ್ತು ಇನ್ನು ನಿಂತಿಲ್ಲ. ನಿಲ್ಲೋ ಹಾಂಗೂ ಕಾಣಲ್ಲ ಬಿಡು. ನಾನು ಎಷ್ಟು ಮಳೆ ನೋಡಿಲ್ಲ. ಇದು ಯಾಕೋ ಸರಿಯಿಲ್ಲ. ಅಪ್ಪಯ್ಯ ಹೇಳ್ತಿದ್ದ ಈ ಅಕಾಲದ ಮಳೆ ನಮ್ಮನ್ನು ಹಾಳು ಮಾಡೋಕೆ ಬಂದಂತಿದೆ ಅಂತಾ"

ಅವನ ಧಾಟಿ ನೋಡಿದರೆ ೮೦ರ ಹರೆಯದ ನಮ್ಮಜ್ಜ ಮೈ ಮೇಲೆ ಬಂದಂತೆ ಕಾಣುತ್ತಿತ್ತು. ಅವನ ಬೆಂಗ್ಳೂರಿನ ಗೆಳೆಯರು ಮಳೆಯ ಬಗ್ಗೆ ದೂರುವ ಮಾತನ್ನು ಎಂದೂ ಆಡುತ್ತಿದ್ದ. ಆಗೆಲ್ಲಾ ಸುಮ್ಮನಿದ್ದೆ ಇವತ್ತು ಅವನನ್ನು ಕಿಚಾಯಿಸಲು ನಿರ್ಧರಿಸಿ ಹೇಳಿದೆ.

"ಅಕಾಲದ ಮಳೆ ನಿಜ ಆದರೆ ಹಾಳು ಮಾಡೋಕೆ ಅನ್ನೊದ್ದನ್ನಾ ನಾ ಒಪ್ಪಲ್ಲಬಿಡು" ಎಂದೆ..

ನನ್ನ ಉತ್ತರದಿಂದ ಸಂತುಷ್ಟಗೊಳ್ಳದೆ ಮುಂದುವರೆಸಿದ...

'ನೀನು ಬಿಡಕ್ಕ, ಯಾವಾಗಲೂ ಮಳೆ ಪರನೇ ದ್ವೀಪ ಫಿಲ್ಮಂ ನಲ್ಲಿನ ನಾಗಿ ಇದ್ದಂಗೆ, ಸದ್ಯಕ್ಕೆ ನಮ್ಮೂರಿಗೆ ನದಿ ಅಷ್ಟು ಹತ್ರಿಲ್ಲ ಪುಣ್ಯಕ್ಕೆ. ಕಡೆಗೆ ಎಲ್ಲಾ ನಮ್ಮ ಭೂತನಾಥನ ದಯೆ ಅನ್ನೋಕು ಯಾರಿಲ್ಲ ಎಂದು ಬದಲಿಗೆ' ನನ್ನೇ ಗೇಲಿ ಮಾಡತೊಡಗಿದ.

'ಹಾಂಗಲ್ಲ ನಾ ಹೇಳೋದು ಇಲ್ಲಿ ಕೇಳು ಮಳೆ ಬರುತ್ತೆ. ಹೋಗುತ್ತೆ. ಅದನ್ನು ಈಗ ಬಾ ಆಗ ಬಾ ಅಂತಾ ಹೇಳಿಕೆ ಕೊಟ್ಟು ಕರೀಲಿಕ್ಕೆ ಬರುತ್ತಾ ಹೇಳು. ಬಂದಾಗ ಅನುಭವಿಸಬೇಕು. ಎಲ್ಲಾ ಸರ್ತಿ ಮಳೆಯಿಂದ ಶುಭಾನೇ ಆಗುತ್ತೆ ಅಂದ್ರೆ ಹೇಗೆ, ಅಶುಭನೂ ಆಗುತ್ತೆ. ಅದಕ್ಕೆ ತಯಾರಿರಬೇಕು ಜೀವ. ಕಷ್ಟ, ಸಾವು ನೋವು ಹೇಗೆ ಹೇಳಿಕೇಳಿ ಬರೋದಿಲ್ಲ್ವೋ ಹಾಗೆ. ಅವು ಬರೋ ಸಮಯಕ್ಕೆ ನಾವು ತಯಾರಿರಬೇಕು ಅಷ್ಟೆ. ಎಷ್ಟು ಚೆಂದ ಉಂಟು ಮಳೆ. ಅದರ ರುಚಿನಾ ಆಸ್ವಾದಿಸಬೇಕು' ಅಂದೆ. ಜೋರಾಗಿ ನಗಾಡುತ್ತಾ...

'ಹಹ್ಹಹ್ಹಹ್ಹ. ರುಚಿ ಏನು ಬಂತು ಅಮಟೇ ಕಾಯಿ ತೊಟ್ಟು....ಮಳೆಯಿಂದ ಎಷ್ಟು ಊಟದ ಮನೆ ತಪ್ಪೋತು ಗೊತ್ತಾ' ಎಂದು ಮುಖ ಸಪ್ಪಗೆ ಮಾಡಿಕೊಂಡ.

ಹೋ.. ಹಾಗೇಳು ಮತ್ತೆ. ಛೆ ಪಾಪಾ. ಸರಿ ರುಚಿ ರುಚಿಯಾಗಿ ನಿಂಗೆ ಬೇಕಾದ್ದು ಮಾಡಿ ನಿನ್ನ ಹೊಟ್ಟೇನೇನೋ ತಂಪಾಗಿಸಬಹುದಪ್ಪಾ. ಆದ್ರೆ ನಿನ್ನ ಕಣ್ಣು ತಂಪಾಗಿಸೋಕೆ ಇಲ್ಲಿ ಯಾರನ್ನು ಕರೆತರೋದು ಗೊತ್ತಾಗುತ್ತಿಲ್ಲಪ್ಪ' ಎಂದು ನಕ್ಕೆ.

ಹೇ.. ನೀನೊಂದು... ಯಾವಾಗಲೂ ಕುಶಾಲು ನಿಂಗೆ.. ನಿಂಗೆ ಹಿರಿಯಪ್ಪ ರಚಿತ ಅಂತಾ ಹೆಸರಿಡೋ ಬದಲು ಕುಶಾಲಿ ಅಂಥಾ ಹೆಸರಿಡಬೇಕಿತ್ತು. ನಿಂಗೆ ಬೇಜಾರೇ ಆಗೋದಿಲ್ಲ ಕಾಣ್ದದೆ.

ಹ್ಞು...ಕಣಪ್ಪಾ ಹೆಸರು ಬದಲಿಸಿಬಿಡುವಾ ಬಿಡು..ತಡಿ ಬಂದೆ ಎಂದೇಳಿ ಒಳಹೋಗಿ...ಬಿಸಿಬಿಸಿ ಕಾಫಿ ತಂದು ಅವನ ಕೈಗಿತ್ತೆ.

ಹ್ಞಾ.. ಹೇಳೋದು ಮರೆತೆ ಮೊನ್ನೆ ಪೇಟೆಗೆ ಹೋಗಿದ್ದಾಗ.. ಮೇಗಿನ ಗದ್ದೆ ರಮೇಶ ಸಿಕ್ಕಿದ್ದ. ನಿನ್ನ ಗಳಸ್ಯ ಕಂಠಸ್ಯ...

'ಹೌದಾ..ಏನಂದಾ'

'ಅವನ ಜತೆ ಅವನ ತಂಗಿ ಸುರಜಾ ಇದ್ದಳು. ಊರಿಗೆ ಇವತ್ತೆ ಬಂದಿದ್ದು..ಮಳೆಯಿಂದ ಎಲ್ಲಿಗೂ ಕಾಲು ಬೆಳಸಲಿಲ್ಲ ಅಂಥಾ ಪೇಚಾಡುತ್ತಿದ್ದಳು ಪಾಪಾ

'ಹೌದಾ...ಏನಂದ್ಳು 'ಎಂದವನು ನಾಲಿಗೆ ಕಚ್ಚಿಕೊಂಡ...ಕುಡಿಯುತ್ತಿದ್ದ ಕಾಫಿ ಅನ್ನು ಚೆಲ್ಲಿಕೊಳ್ಳುತ್ತಾ...

ನನ್ನ ನಗು ಹೆಚ್ಚಾಯಿತು..

'ಸರಿ ಮಾರಾಯ್ತಿ ಇಲ್ಲೆ ಇದ್ದರೇ ಕಿಚಾಯಿಸ್ತಾನೇ ಇರುತ್ತೀಯಾ. ನಾನು ತೋಟಕ್ಕೆ ಕಡೆ ಹೋಗ್ತೀನಿ. ಹಿರಿಯಪ್ಪ ಸಿಗಬಹುದು ಅಲ್ಲಿ ಎಂದು ಎದ್ದು ನಿಂತ. ಕುಡಿದ ಕಾಫಿ ಲೋಟ ಬದಿಗಿಟ್ಟು.ಅಂಗಳಕ್ಕೆ ಜಿಗಿದ ನಡೆದ.

ಅವನು ಕೊಡೆ ಬಿಡಿಸಿ ಅಂಗಳಕ್ಕೆ ಹಾರಿದ ಅವನಿಗೆ ಹಳ್ಳದ ನೀರು ಹೆಚ್ಚಾಗಿದೆಯಂತೆ.. ಹುಷಾರು ಎನ್ನುತ್ತಾ...ಅವನು ನಡೆದ ಹಾದಿ ನೋಡುತ್ತಾ ನೆನಪಿನಾಳಕ್ಕೆ ಇಳಿದೆ......

ಮುಂದುವರೆದು.....ಮಳೆ ನಿಲ್ಲದೇ ಮನದಿ ನೂರಾರು ಲಹರಿ ಮೂಡಿಸಿದೆ ..

Sunday, February 17, 2008

ಬರವಣಿಗೆ ಅನಿವಾರ್ಯ ಕರ್ಮ

ಬರವಣಿಗೆ ಅನಿವಾರ್ಯ ಕರ್ಮ ಎನಿಸಿದ ಮೇಲೆ, ಬರೆದ ಅಕ್ಷರಗಳು ಮನತಣಿಸ ಹೋದರೆ ಸುಮ್ಮನೆ ಅದನ್ನು ಹೊರಗೆಡವುದರಲ್ಲಿ ಯಾವುದೇ ತೃಪ್ತಿ ಇರದು. ಯಾಕೊ ಮನಸ್ಸು ಒಮ್ಮೊಮ್ಮೆ ಖಾಲಿ ಖಾಲಿ ಎನಿಸಿಬಿಡುತ್ತದೆ.

ಯಾವ ವಿಷಯವೂ ರುಚಿಸದಂತೆ, ಎಲ್ಲದರಲ್ಲೂ ನಿರಾಸಕ್ತ ಭಾವ ಮೂಡಿದಂತೆ, ಏನನ್ನೊ ಹುಡುಕುತ್ತಾ, ಮತ್ತೇನನ್ನೊ ಪಡೆಯುತ್ತಾ, ನಡುವೆ ಇನ್ನೇನ್ನನೊ ಕಳೆದುಕೊಳ್ಳುವ ಈ ಜೀವನ ಎಂಬ ವಿಸ್ಮಯ ಪರಿಕ್ರಮಕ್ಕೆ ಸಾಷ್ಟಾಂಗ ನಮಸ್ಕಾರ ಹೇಳಬೇಕೆನಿಸುತ್ತದೆ.

ಬರವಣಿಗೆಗೆ(ಬರೆಯೋದಕ್ಕೆ) ಒಂದು ನೆಪ ಬೇಕೇ? ಎಷ್ಟೊ ಸಾರಿ ನನಗೆ ನಾನೇ ಕೇಳಿಕೊಂಡ ಪ್ರಶ್ನೆ. ಹಾಗಂತ ಅನಿಸಿದ್ದೆಲ್ಲದ್ದಕ್ಕೆ ಅಕ್ಷರ ರೂಪನೀಡುತ್ತಾ ಹೋದರೆ, ಮಿತಿಯಿರದ ಪುಟಗಳ ಲೆಕ್ಕಾಚಾರದಲ್ಲಿ ಕಳೆದುಹೋಗುವ ಭಯ ಕಾಡುತ್ತದೆ. ಹೌದು ಮನುಷ್ಯನಿಗೆ ಭಯ ಯಾಕಾದರೂ ಕಾಡುತ್ತದೆ.

ಏನಾದರೂ ತಪ್ಪು ಮಾಡಿದಾಗ, ತಪ್ಪು ಮಾಡೋದು ಯಾವಾಗ ಮನಸ್ಸಿನಲ್ಲಿ ಕೆಟ್ಟ ಅಲೋಚನೆ ಉಂಟಾದಾಗ. ಒಂದು ಸಿದ್ಧಾಂತದ ಪ್ರಕಾರ 'ಮನಸ್ಸಿನಲ್ಲಿ ಉಂಟಾಗುವ ಕೆಟ್ಟ ಅಲೋಚನೆಗಳಿಗೆ ಮೂಲ ಕಾರಣವೇ ಭಯ ಅಂತೆ' . ಭಯ ಅಥವಾ ಯಾವುದೇ ಫೋಬಿಯಾ ಬಗ್ಗೆ ವಿಸ್ತಾರವಾಗಿ ಬರೆದು ನಿಮಗೆ ಭಯ ಹುಟ್ಟಿಸುವುದಿಲ್ಲ ಬಿಡಿ.

ಮನಸ್ಸಿನಲ್ಲಿ ಬರುವ ಕಲ್ಪನೆ, ಕನಸಾಗಿ, ಕನಸು ಪದಗಳಾಗಿ, ಪದಗಳು ಪ್ಯಾರಗಳಾಗಿ ದೊಡ್ಡ ಲೇಖನವಾಗಿ ಸಾವಿರಾರು ಜನ ಓದಿ, ಅದರಿಂದ ಎಲ್ಲರ ತಲೆಯಲ್ಲೂ ಉಂಟಾಗುವ ಅಥವಾ ಬರುವ ನಾನಾ ಆಲೋಚನೆಗಳ ಜಾಲದೊಳಗೆ ಬಂಧಿತಳಾದ ಮೇಲೆ ಬರೆಯದೇ ಸುಮ್ಮನೆ ಕೂತರೆ ನಾನಾ ಓದುಗರ ವಿಭಿನ್ನ ಆಲೋಚನಾ ಕ್ರಮಕ್ಕೆ ಧಕ್ಕೆ ಉಂಟು ಮಾಡಿದಂತೆಯೇ ಸೈ.

ಎಲ್ಲಾ ಓದುಗರ ಸ್ತರಕ್ಕೆ ಮುಟ್ಟಲಾಗದಿದ್ದರೂ 'ಇವರು ಇಂದು ನೋಡಿದ್ದಾರೆ ಈ ಲೇಖನನಾ', 'ಅವರು ಏನೋ ನಾಲ್ಕು ಸಾಲು ಬರೆದಿದ್ದಾರೆ ಇದರ ಬಗ್ಗೆ' ಅನ್ನೊ ಸಣ್ಣ ಖುಷಿ, ಉತ್ಸಾಹವೇ ಮುಂದಿನ ಪ್ರತಿ ಲೇಖನಕ್ಕೆ ನಾಂದಿ ಹಾಡುತ್ತದೆ ಎನ್ನುವುದು ಸುಳ್ಳಲ್ಲ.

ಹಾಗೆ ನೋಡಿದರೆ ನಮ್ಮ ಪ್ರತಿಯೊಂದು ಕ್ರಿಯೆಯ ಫಲಿತಾಂಶ ಅಡಕವಾಗಿರುವುದು ಅದರ ಹಿಂದಿನ ಪ್ರೇರಕ ಶಕ್ತಿಯಿಂದ, ಉತ್ಸಾಹದಿಂದ. ಉತ್ಸಾಹ/ಲವಲವಿಕೆ ಇದ್ದರೆ ಶ್ರದ್ಧೆ ಮೂಡುತ್ತದೆ. ಶ್ರದ್ಧೆ ಬಂದರೆ ಜ್ಞಾನ ಸಿಗುತ್ತದೆ. ಒಮ್ಮೆ ಜ್ಞಾನಿಯಾದ ಮೇಲೆ ಅವನಿಗೆ ಕರ್ಮದ ಯಾವುದೇ ಬಂಧನವಿರುವುದಿಲ್ಲ.

ಹಾಗಂತ ಪಡೆದ ಜ್ಞಾನವನ್ನು ಹಂಚದೆ ಹೋದರೆ, ಅದು ತಪ್ಪಾಗುತ್ತದೆ. ಒಟ್ಟಿನಲ್ಲಿ ಸೂಕ್ಷ್ಮವಾಗಿ, ಸ್ಥೂಲವಾಗಿ ಹೇಳಬೇಕೆಂದರೆ, ತಿಳಿದಿದ್ದನ್ನು ತಿಳಿಯದವರಿಗೆ ತಿಳಿ ಹೇಳೋ ಕಾಯಕನಾ ಜೀವನ ಪರ್ಯಂತ ಮುಂದುವರೆಸುವುದರಲ್ಲೇ ಇದೆ ನಿಜವಾದ ಆನಂದ.

ಹ್ಞು...ಇಷ್ಟೆಲ್ಲಾ ಪೀಠಿಕೆ ಯಾಕಾದರೂ ಬರೆದೆ ಎಂದು ಒಮ್ಮೆ ಅವಲೋಕಿಸಿದಾಗ ಕಾಣುವುದು ಒಂದೇ. ಬ್ಲಾಗ್ ಅಂಥಾ ಒಂದು ಸೃಷ್ಟಿ ಮಾಡೋದು ಮುಖ್ಯ ಅಲ್ಲ ಅದನ್ನು ಸಾಕಿ ಸಲುಹುವುದು ಕೂಡ ಅಷ್ಟೇ ಮುಖ್ಯ ಅಂತಾ. ಸಹೃದಯ ಮಿತ್ರರ ಆಣತಿಯಂತೆ ಉಪವಾಸ ಮುಗಿಸಿ ಮತ್ತೆ ಅಕ್ಷರದೊಡನೆ ಕಾದಾಟಕ್ಕೆ ಸಿದ್ಧಳಾಗುತ್ತಿದ್ದೇನೆ. ಸ್ವಲ್ಪ ಬಿಡುವು ಕೊಡಿ..........(ಅರೆ..ಬಿಡುವು ಯಾರನ್ನು ಕೇಳುತ್ತಿದ್ದೇನೆ..ಯಾವುದರಿಂದ ಅಂಥಾ ಒಮ್ಮೆ ನಗು ಬಂತು.. ಕ್ಷಮಿಸಿ)

ಸುಮ್ಮನೆ ಕಾಲಹರಣಕ್ಕೆಂದು ಗೀಚಿದ ಸಂಚಾರ ವಾಣಿಯಲ್ಲಿ ಕಂಡ ನಾಲ್ಕಾರು ಎಸ್ಸೆಎಂಎಸ್ ಸಂದೇಶಗಳ ಕನ್ನಡೀಕರಣ ಸಾಲುಗಳು ನೀಡುತ್ತಿರುವೆ. ಕ್ಷಮಿಸಿ ಇವು ಯಾವುದು ಸ್ವಂತದಲ್ಲ. ಗೆಳೆಯ ಕಳಿಸಿದ ಪರಭಾಷೆಯ ಸಂದೇಶದ ಕನ್ನಡರೂಪ ಅಷ್ಟೇ.

ನನ್ನ ಇನಿಯ ತೊರೆದನು ನನ್ನ ಕೆಲ ಕ್ಷಣ
ದೂರಾಗಿ ಸನಿಹವಾದ ಎಂದಿತು ಮನ
ಅವನ ನೆನೆಯದೇ ಇರದ ಕ್ಷಣವೂ ಕ್ಷಣವಲ್ಲ
ಹೃದಯದಿ ನೆಲೆಸಿಹ ಅವನು ನನಗೆ ಕ್ಷಣಿಕವಲ್ಲ
*********
ವಿರಕ್ತನಾಗಿ ಈ ಬದುಕಿನಿಂದ ನಾನು ಮುಕ್ತಿಹೊಂದಿದ ಮೇಲೆ
ನನಗೆ ಸಂದೇಶ ಕಳುಹಿಸದೆ ಈಗ ನೀನು ಉಳಿಸುತ್ತಿರುವ ಹಣದಿಂದ
ನನಗಾಗಿ ಶ್ವೇತ ಪುಷ್ಪಗಳ ಖರೀದಿಸಿ ಅರ್ಪಿಸು ಗೆಳೆಯ
*********
ನೆನ್ನೆಯ ತಪ್ಪುಗಳ ನಡುವೆ, ನಾಳೆಯ ಭರವಸೆಗಳ ನಡುವೆ
ಅವಕಾಶಗಳ ಮೂಟೆ ಹೊತ್ತು ಇಂದು ನಿಮ್ಮ ಮುಂದಿದೆ
ಈ ಅವಕಾಶವ ಜೀವನದಲ್ಲಿ ಸರಿಯಾಗಿ ಉಪಯೋಗಿಸಿಕೊಳ್ಳಿ.
*********
ಬರೆದೆ ನಿನ್ನ ಹೆಸರ ಮರಳ ಮೇಲೆ
ನೀರಿನ ಅಲೆ ಬಂದು ಕೊಚ್ಚಿ ಹೋಯ್ತು
ಬರೆದೆ ನಿನ್ನ ಹೆಸರ ಗಾಳಿಯ ಮೇಲೆ
ಬಿರುಗಾಳಿ ಬಂದು ತೂರಿ ಹೋಯ್ತು
ಕಡೆಗೆ ನಿನ್ನ ಹೆಸರ ಬರೆದೆ ನನ್ನ ಹೃದಯದಿ
ಪಾಪಿ! ನಿನ್ನ ಹೆಸರ ಬರೆದಿದ್ದಿದ್ದೆ ತಡ ಹೃದಯಬಡಿತ ನಿಂತೊಯ್ತು.
***********