page1

Pages

Showing posts with label sad. Show all posts
Showing posts with label sad. Show all posts

Saturday, April 14, 2007

ಎಲ್ಲಿ ಹೋದೆ ನನ್ನ ಗುರುವೇ, ಓ ನನ್ನ ತೇಜಸ್ವಿ


ಎಲ್ಲಿ ಹೋದೆ ನನ್ನ ಗುರುವೇ ....

ಮೂಡಿಗೆರೆಯ ನೀನೇಕೆ ತೊರೆದೆ
ಮಲೆನಾಡನು ಬಿಟ್ಟು ನೀ ಹೇಗಿರುವೆ
ಮಲೆನಾಡಿನ ಮಾಯಾವಿ ನಿನ್ನಂತೋರೊ ಬಲು ವಿರಳ
ಅದು ಹೇಗಿದ್ದೆ ನೀನಷ್ಟು ಸರಳ
ರಸಋಷಿಯ ಪುತ್ರನೆ.. . .

ನಮಗೆ ಜೀವರಸವ ನೀಡಿದವನೆ
ವನರಾಶಿಯ ರಹಸ್ಯ ಬೇಧಿಸಿದ ಚಿದಂಬರನೆ
ಮರ್ಮಕ್ಕೆ ತಾಕುವಂತೆ ಕುಟುಕುತ್ತಿದ್ದ ಕರ್ವಾಲೋವೆ
ಕಿವಿ ನಿನ್ನ ಹುಡುಕುತ್ತಿದೆ....

ಕರಿಯಣ್ಣ ಮಾಡಿದ ಬಿರಿಯಾನಿ ಆರುತ್ತಿದೆ ಬೇಗ ಬಾ...
ಮುಸ್ಸಂಜೆಯಲ್ಲಿ ಕಿರುಗೂರಿಗೆ ಹೋಗೋಣ ಬಾ
ಖುದ್ದೂಸ್ಸನ ಎಕ್ಸ್ ಪ್ರೆಸ್ ಹತ್ತಿ ಜುಗಾರಿ ಕ್ರಾಸ್ ನಲ್ಲಿ ಇಳಿಯೋಣ
ನೀನಿರದೆ ಅಬಚೂರು ಚೂರಾಗಿದೆ ..

ಅಣ್ಣನ ನೆನಪು ಹೇಳು ಬಾ.. ಮಂದಣ್ಣ ಕಾದು ಕುಂತವ್ನೆ
ನಿನಗಾಗಿ ತಬರ ಕಾದಿದ್ದಾನೆ, ಕುಬಿ ಇಯಾಲ ಬಂದಿದ್ದಾರೆ
ಇನ್ನೇಕೆ ತಡ.... ಬಾ ನನ್ನ ಗುರುವೇ

ಹಕ್ಕಿಗಳ ಗಾಯನ, ಕಾನನದ ಮೌನ ನಿನ್ನೊಂದಿಗೆ ಲೀನವಾಗಿದೆ.
ತೇಜಸ್ವಿ ನಿನ್ನ ಮಾಯಾಲೋಕದಲ್ಲಿ ಸುತ್ತುವೆ ಅನವರತ
ಜಗವಿರುವವರೆಗೂ, ಹಸಿರಿರುವವರೆಗೂ ನೆನಪಲ್ಲಿ ನೀ ಉಳಿಯುವೆ ಶಾಶ್ವತ

ನಿಗೂಢ ಮನುಷ್ಯ ನಿನ್ನಿಂದ ಸಹಜ ಕೃಷಿಯ ಕಲಿಯುವ ಆಸೆ
ನಿನ್ನ ಪರಿಸರದ ಹಕ್ಕಿಗಳ ಕಥೆ ಕೇಳುವಾಸೆ
ಮರಳಿ ಬಾ... ನನ್ನ ಗುರುವೇ

ಪೂರ್ಣಚಂದ್ರ ನಿನಗಾಗಿ ಮೂಡಿಗೆರೆ ಕಾದಿದೆ
ನಿನ್ನೊಡಲಿಲ್ಲದಿದ್ದರೂ ನಿನ್ನ ಉಸಿರು ಹಸಿರಾಗಿದೆ
ನಿನ್ನ ಮಾತು ಕತೆಯಾಗಿ,ನಿನ್ನ ನೋಟ ಚಿತ್ರವಾಗಿ
ಯೋಚನೆ ಮನದ ಮಾತಾಗಿ, ಹಳ್ಳಿಗರ ನುಡಿಯಾಗಿ
ನಿನ್ನ ಅಲೆದಾಟ ಉತ್ಸುಕತೆಯಾಗಿ
ನಿನ್ನ ಸಹಜತೆ ಸರಳತೆ ನಮ್ಮೆಲ್ಲರ ನರ ನಾಡಿಯ ಕಣಕಣದಲ್ಲಿ
ಉಳಿಯುವುದು ನಿಶ್ಚಿತ.
ಪೂರ್ಣಚಂದ್ರನಂತೆ ತೇಜಸ್ವಿಯಾಗಿ ಎಲ್ಲಕ್ಕಿಂತ ಮೇಲಾಗಿ
ನನ್ನ ಮಾನಸ ಗುರುವಾಗಿ ನೀ ಇರುವೆ ಶಾಶ್ವತ

-ಪ್ರೀತಿ,ನೋವು , ವಿಷಾದ, ಅಗಲಿಕೆ, ನಿರಾಸೆ, ಭಾವನೆಗಳ ಮಹಾಪೂರದೊಂದಿಗೆ
ನಿರಚಿತ