ಇರುಳು ಕಳೆದು ಕೋಟಿ ಚುಕ್ಕಿಗಳ ಬೆಳಕಿನಿಂದ ಮನೆ ಮನ ಬೆಳಗಿರಲು, ಒಂಟಿತಾರೆ ದಿನಕರನ ಸಾಂಗತ್ಯವೇಕೆ?
ಬರಡು ಭೂಮಿಗೆ ನೀರುಣಿಸಿ ಸಕಲ ಚರಾಚರಕ್ಕೆ ಜೀವಜಲವಾಗಿಹ ತುಂಗೆ ಇರಲು, ತನ್ನೊಡಲಲ್ಲಿ ನೂರು ತುಂಗೆಯಯರನ್ನುಳ್ಳ ಕಡಲ ಹಂಬಲವೇಕೆ?
ಗೋಳಿಮರದಿ ಕೂತ ಪುಟ್ಟ ಮಡಿವಾಳ ಹಕ್ಕಿಯ ಇನಿದನಿ ಇಂಪಾಗಿರೆ, ದೂರದೂರಿನ ಕೋಗಿಲೆಯ ಸ್ವರ ಆಲಿಸುವಾಸೆಯೇಕೆ?
ಮೈಮನಕೆ ಮುದ ನೀಡುವ ಪ್ರೀತಿಯ ಗುಡಿಸಿರಲು ಕಾಣದೂರ ಹಂಗಿನರಮನೆಯ ವೈಭೋಗವೇಕೆ? ಒಡಲಾಳದಲ್ಲಿ ಆರದ ಜ್ಞಾನಜ್ವಾಲೆ ಆವರಿಸಲು ಉಳಿದ ಕಾಮತೃಷೆಯೇಕೆ?
ಮಲೆನಾಡಿನ ಮಗಳಾಗೆ ನಾ ಇರುವೆ, ನನ್ನ ಅಳಿವು ಉಳಿವು ಗೆಲುವು ಸೋಲು, ನೋವು ನಲಿವಿಗೆ ಪಂಚಭೂತಗಳೇ ಸಾಕ್ಷಿಯಾಗಿರಲಿ ಎಲ್ಲಕ್ಕೂ ಅವುಗಳ ನೆರವಿರಲಿ, ನನ್ನಿ ಪರಿಸರ ತೊರೆಯುವ ಮುನ್ನ ನನ್ನ ಈ ಆಕೃತಿ ಪ್ರಕೃತಿಯೊಂದಿಗೆ ಲೀನವಾಗಿರಲಿ
ರಾಜು ಸಾವಿನ ಸುದ್ದಿ ಸುಳ್ಳಾಗಲಿ ಎಂದು ತಾಯಿ ಶಾರದೆಯ ಫೋಟೊ ನೋಡುತ್ತಾ ಬಹುಶಃ ಶನಿವಾರ ನಾನು ಕರೆ ಮಾಡಿದಾಗ ಎಲ್ಲರ ಬಾಯಲ್ಲೂ ಬರುತ್ತಿದ್ದದ್ದು ಒಂದೇ ವಾಕ್ಯ. "ಛೇ ಸಾವು ಬರಬಾರದಿತ್ತು. ಇದು ಸಾಯುವ ವಯಸ್ಸಲ್ಲ". ಬೆಂಗಳೂರಿನ ಮಿತ್ರರು ರಾಜು ಸಾವಿನ ಬಗ್ಗೆ ಹೇಳುತ್ತಿದ್ದರೆ, ಇತ್ತ ಕಣ್ಣಾಲಿಗಳು ತುಂಬಿ ಬಂದಿತ್ತು.
ರಾಜು ಅನಂತ ಸ್ವಾಮಿ s/o ಮೈಸೂರು ಅನಂತಸ್ವಾಮಿ(ದೊರೈ) ನನ್ನ ಗೆಳೆಯನಲ್ಲ, ಬಂಧುವಲ್ಲ, ನೆಂಟನಲ್ಲ, ಕನಿಷ್ಠ ಆತನನ್ನು ನೋಡಿರುವುದು ಒಂದೆರಡು ಬಾರಿ ಅಷ್ಟೇ. ಆದರೆ ಅವನ ಹಾಡಂತೆ 'ನೀ ನನ್ ಹಟ್ಟಿಗೆ ಬೆಳಕಾಗಿದ್ದೆ ರಾಜು. . .' ನಿತ್ಯ ತಂದೆ ಮಕ್ಕಳ ಗಾನಸುಧೆ ತುಂಗೆಯಂತೆ ನಮ್ಮ ಮನೆ ಮನದಲ್ಲಿ ಹರಿಯುತ್ತಿತ್ತು. ಆತನ ಕಂಠಸಿರಿ ಆತನನ್ನು ನನ್ನ ಆಪ್ತೇಷ್ಟರ ಸಾಲಿಗೆ ಸೇರಿಸಿತ್ತು. ಅದೆಷ್ಟೋ ಬಾರಿ ಮನನೊಂದಾಗ ರಾಜು ದನಿ ಕೇಳಿ ಸ್ವಯಂ ಸಾಂತ್ವನ ಹೇಳಿಕೊಂಡಿದ್ದು ಇದೆ.
ರಾಜು ಸಾವಿಗೆ ಕುಡಿತ ಒಂದು ಕಾರಣ ಅಷ್ಟೇ. ಆದರೆ ಇದು ಸ್ವಯಂಕೃತವೋ, ಸಹವಾಸ ದೋಷವೊ, ದುರ್ವಿಧಿಯೋ ಒಟ್ಟಿನಲ್ಲಿ ಆತನ ಸಾವು ಇಡೀ ಸಂಗೀತ ಲೋಕದ ದುರಂತಗಳಲ್ಲಿ ಒಂದು. ನನ್ನಂತಹ ಸಾಧಾರಣ ಅಭಿಮಾನಿಗಳಿಂದ ಹಿಡಿದು, ಆತನಿಂದ ಸಂಗೀತದ ಓನಾಮ ಕಲಿತ ಎಲ್ಲರ ಪಾಲಿಗೆ ಗುರುವಾಗಿ, ಹಸನ್ಮುಖಿ ಗೆಳೆಯನಾಗಿ ರಾಜು ಸದಾ ಸ್ಮರಣೀಯ.
ಇಂದಿಗೂ ನಮ್ಮಡೆಯಲ್ಲಿ ಅತ್ರಿ ಸಾವಿನ ಸೂತಕ ಕಳೆದಿಲ್ಲ. ಆಗಲೇ ರಾಜು ಅಗಲಿಕೆ ಆಘಾತಕಾರಿಯಾಗಿದೆ. ಅದರಲ್ಲೂ ರಾಜು ಅವರ ತಾಯಿ, ಅಜ್ಜಿ ಈ ಆಘಾತವನ್ನು ಹೇಗೆ ಸಹಿಸುತ್ತಿದ್ದಾರೆ ಎಂದು ನೆನೆದರೆ ದೇವರ ಮೇಲೆ ಮುನಿಸಾಗುತ್ತದೆ.
ರಾಜು ಬೆಳೆಸಿದ ಶಿಷ್ಯಂದಿರಲ್ಲಿ ಆತನ ಪ್ರತಿಭೆಯನ್ನು ಕಾಣುವ ಪ್ರಯತ್ನ ಪಡಬಹುದಾದರೂ, ಅನಂತಸ್ವಾಮಿ, ರಾಜು ಪರಂಪರೆ ಪೂರ್ಣವಾಗಿ ಇತಿಹಾಸದ ಪುಟ ಸೇರಲಿದೆ ಎಂಬ ಅರಗದ ಸತ್ಯ ಸದಾ ಕಾಡುತ್ತಿರುತ್ತದೆ. ಸಾವೇ ನೀನೇಷ್ಟು ಘೋರ...ನಿನಗಿದೋ ನನ್ನ ಧಿಕ್ಕಾರ...
ಜೀವನವಾಗಿದೆ ಈಗ ಗಲೀಜಾದ ಕಾಗದ ಉರಿಸಲಾರರು ಯಾರು ಇದನು ಯಾರು ಬರೆಯಲಾರರು ಯಾರು ಇದರ ಮೇಲೆ ಈ ರೀತಿಯ ಬದುಕು ನಂದಾಗಿದೆ ಸತಾಯಿಸುವವರಿಲ್ಲ, ಓಲೈಸುವವರಿಲ್ಲ ನನ್ನ ******************** ಅರಿಯದಂತೆ ಆಗಿಹೋದ ನೀ ಮನಕೆ
ಮೇಘಗಳ ನಡುವಲ್ಲಿ ನಸುಳಿ ಬಂದ ಸೌದಾಮಿನಿ ಕಣ್ಣಹನಿಗಳೆರಡು ಉದುರುವ ಅಂತರದಲ್ಲಿ ಬೀಸಿದ ಪ್ರಾಣವಾಯುವಿನ ತೆರದಿ ಸುಳಿ ಸುಳಿದಾಡಿ,ಮನಕೆ ಮುದ ನೀಡಿ ನಲಿದಾಡಿ ಮತ್ತೆ ಮತ್ತೆ ನೆನಪ ರಾಶಿ ಹೊತ್ತು ತರುವ ತಂಗಾಳಿ ನೀ
ಅರಿಯದಂತೆ ಆಗಿಹೋದ ನೀ ಮನಕೆ
ಕಾಯುವುದು ತರವೇ ನಿನಗೆ ನಾನು, ಎಂದಿನಂತೆ ಬಾರದೇ ಹೋಗುವೆ ನೀನು
ಅರಿಯದಂತೆ ಆಗಿಹೋದ ನೀ ಮನಕೆ ಪ್ರಶ್ನಾತೀತವಾಗಿ ಉಳಿದೆ ನನಗೆ ********* ನನ್ನ ಇನಿಯ ತೊರೆದನು ನನ್ನ ಕೆಲ ಕ್ಷಣ ದೂರಾಗಿ ಸನಿಹವಾದ ಎಂದಿತು ಮನ ಅವನ ನೆನೆಯದೇ ಇರದ ಕ್ಷಣವೂ ಕ್ಷಣವಲ್ಲ ಹೃದಯದಿ ನೆಲೆಸಿಹ ಅವನು ನನಗೆ ಕ್ಷಣಿಕವಲ್ಲ
ಮೋಜಿನ ಮಳೆ ನಿಂತು ಆಗಲೇ ನಾಲ್ಕೈದು ದಿನವಾಯ್ತು. ಆದರೆ ಈ ವಾರ ಅಂತಹ ಸಂಭ್ರಮವಿಲ್ಲ. ಮಧ್ಯದಲ್ಲಿ ಯುಗಾದಿ ಹಬ್ಬ , ಹೋಳಿಗೆ ಊಟ ಮೆದ್ದಿದ್ದು ಬಿಟ್ಟರೆ.
ಬಾಕಿಯಂತೆ ಏ.೫ ರಿಂದ ಏ ೧೨ ರ ವರೆಗೂ ಮನಸ್ಸಿಗೆ ಇಬ್ಬರನ್ನು ನೆನೆಯದೇ ಇರಲು ಸಾಧ್ಯವಾಗುವುದಿಲ್ಲ. ನೆಚ್ಚಿನ ಗುರು, ಮಾರ್ಗದರ್ಶಿ ತೇಜಸ್ವಿ , ನಾಡಿನ ಸಾಂಸ್ಕೃತಿಕ ಸಂಕೇತ ಡಾ. ರಾಜ್ ಕುಮಾರ್.
ತೇಜಸ್ವಿ ನಿರುತ್ತರದಲ್ಲಿ ಕವಿದ ಮೋಡ ಚದುರಿ ಮಳೆ ಸುರಿಸಿ, ಹರುಷವನ್ನು ಅರಿಸಿ ಸಾಗುತ್ತಿದೆ. ರಾಜ್ ನೆನಪಿನಲ್ಲಿ ಸ್ಮಾರಕ ಎಂಬ ನೆಪದಲ್ಲಿ ರಾಜ್ ಅವರ ಕನಸುಗಳು ಕಮರುತ್ತಿದೆ. ಈ ಇಬ್ಬರು ಸರಳ ಜೀವಿಗಳು ಇಂದಿನವರ ಜಂಜಾಟವನ್ನು ನೋಡುತ್ತಿದ್ದರೆ ಖಂಡಿತಾ ಖಾರವಾಗಿ ಪ್ರತಿಕ್ರಿಯಿಸುತ್ತಿದ್ದರು ಎನಿಸುತ್ತದೆ.
ಸ್ಮಾರಕ ನಿರ್ಮಾಣ, ಅರ್ಥವಿಲ್ಲದ ಆಚರಣೆಗೆ ತೇಜಸ್ವಿಯಂತೂ ವಿರೋಧಿಸುತ್ತಿದ್ದರು. ರಾಜ್ ಅವರು ಜೀವನದುದ್ದಕ್ಕೂ ಸರಳತೆಯನ್ನು ಮೈಗೂಡಿಕೊಂಡು ಬೆಳೆದವರು. ನಗರದಲ್ಲಿದ್ದರೂ ಸದಾ ಹಳ್ಳಿಮನೆಯ ವಾಸ್ತವ್ಯಕ್ಕಾಗಿ ಹಾತೊರೆಯುತ್ತಿದ್ದ ಜೀವ.
ತೇಜಸ್ವಿ ನಿಸರ್ಗದ ರಮಣೀಯತೆಗೆ ಸೋತು, ಪ್ರಕೃತಿಯ ಮಡಿಲಲ್ಲಿ ಸಾಧನೆ, ಸಂಶೋಧನೆ ಮಾಡುತ್ತಾ, ಮುಗ್ಧ ಜನರೊಡನೆ ಬೆರೆತು ಸಾರ್ಥಕ ಬದುಕು ಬಾಳಿದವರು. ಈ ಎರಡು ಚೇತನಗಳಲ್ಲಿ ನಾನು ಇಷ್ಟಪಡುವುದು ಸರಳತೆ ಹಾಗೂ ಜೀವನ ಪ್ರೀತಿ, ಉತ್ಸಾಹ.
ಇವರಿಬ್ಬರ ಚಿಂತನೆಗಳು ಸ್ಮಾರಕಕ್ಕೆ ಸೀಮಿತವಾಗದೇ ಅವರ ಸಾಧನೆ, ಜೀವನ ಪ್ರೀತಿ ಎಲ್ಲರಲ್ಲೂ ಆಸುಹೊಕ್ಕದರೆ ಎಷ್ಟು ಸುಂದರ. ಅದ್ಭುತ ಮಾಯಾಲೋಕದ ಕನಸು ಕಣ್ಮುಂದೆ ಕಾಣಿಸುತ್ತಿದೆ. ವಿರಮಿಸುತ್ತೇನೆ ಸದ್ಯಕ್ಕೆ.
ಮಳೆ ನಮ್ಮ ಬದುಕಿನ ಅವಿಭಾಜ್ಯ ಅಂಗ. ಮಳೆ ಬಗ್ಗೆ ನೂರಾರು ಕವಿಗಳು, ಸಾಹಿತಿಗಳು, ಸಾವಿರಾರು ಲೇಖನಗಳನ್ನು ಬರೆದಿರಬಹುದು. ಆದರೆ ಕಲ್ಪನೆಯ ಚಿತ್ರಣವೆ ಬೇರೆ ವಾಸ್ತವದ ಅನುಭವವೇ ಬೇರೆ.
ಋತುಮಾನದ ಏರುಪೇರು ಜನರ ಜೀವನದಲ್ಲಿ ಅನೇಕ ತಿರುವುಗಳನ್ನು ತರುವುದನ್ನು ಕಂಡಿದ್ದೇನೆ. ಅಕಾಲಿಕ ಮಳೆಯಿಂದ ಮನೆಹಾನಿ, ಬೆಳೆಹಾನಿ ಮಾಮೂಲಾಗಿ ಹೋಗಿದೆ.
ಬೆಳೆದು ನಿಂತ ಫಸಲು ಭೂಮಿ ಪಾಲಾದಾಗ, ಒಬ್ಬ ತಂದೆಗೆ ಬೆಳೆದು ನಿಂತ ಮಗನನ್ನು ಕಳೆದುಕೊಂಡ ದುಃಖದಂತೆ ನಿರಂತರವಾದ ನೋವನ್ನು ನೀಡುತ್ತದೆ.
ಇದಕ್ಕೆ ಪರಿಹಾರ? ಸರ್ಕಾರ ಕೊಡುವ ಕನ್ನಡಿಯೊಳಗಿನ ಗಂಟನ್ನು ನೆಚ್ಚಿಕೊಂಡರೆ ಯಾವ ಪ್ರಯೋಜನವೂ ಆಗುವುದಿಲ್ಲ. ಬದಲಿಗೆ ಮನಬಂದಂತೆ ಬದಲಾಗುವ ಪ್ರಕೃತಿಗೆ ಹೊಂದಿಕೊಳ್ಳುವುದೇ ಸರಿ. ಬಿತ್ತನೆಯಿಂದ ಹಿಡಿದು ಫಸಲು ಬರುವ ತನಕ ಈಗಿನ ಋತುಮಾನಕ್ಕಿಂತ ಕೊಂಚ ಮುಂಚಿತವಾಗಿ ಎಲ್ಲಾ ಕೆಲಸವನ್ನು ಪ್ರಾರಂಭ ಮಾಡಿದರೆ ಒಳಿತೆನಿಸುತ್ತದೆ.
ನಮ್ಮ ಬೇಸಾಯ ಪದ್ಧತಿಯನ್ನು ಈ ತಿಕ್ಕಲು ಮಳೆಗೆ ಹೊಂದಿಸಿಕೊಂಡು ಅದರೊಡನೆ ಆಟವಾಡುವ ಆಸೆಯಾದರೂ, ಅಂದುಕೊಂಡಿದ್ದು ಘಟಿಸದಿರೆ, ಚಿಂತನೆಗೆ ಫಲವಿಲ್ಲ ಎಂಬ ಭಯ ಕಾಡುತ್ತದೆ.
ಆದರೆ ನಮ್ಮ ಹವಾಮಾನ ಇಲಾಖೆ ಕೊಂಚ ಶ್ರಮವಹಿಸಿ ಮಣ್ಣ ಮಕ್ಕಳಿಗೆ ಸರಿಯಾದ ಮುನ್ಸೂಚನೆ ನೀಡಿದರೆ ಸಾಕು. ರೇಡಿಯೊಗೆ ಕಿವಿ ಆನಿಸಿಕೊಂಡು ಹವಾಮಾನ ವರದಿ ಕೇಳುತ್ತಿದ್ದದ್ದು ನೆನಪಾಗುತ್ತದೆ.
ಅದು ಹಾಗಿರಲಿ, ಪರಿಸ್ಥಿತಿ ಹೀಗೆ ಮುಂದುವರೆದರೆ ನಮ್ಮ ಊರೆಂಬ ನಾಲ್ಕು ಮನೆಗಳ ಸಂಸಾರ ವರ್ಷಗಳು ಉರುಳುವುದರಲ್ಲಿ ಇಲ್ಲವಾಗಿ ಹರಿದು ಹಂಚಿಹೋಗುತ್ತದೆ. ಇದನ್ನೆಲ್ಲಾ ನೆನೆದಾಗ ನೋವಾಗುತ್ತದೆ.
ಹೊರಗಡೆಯಿಂದ ಅಪ್ಪ ಮನೆಗೆ ಬಂದು'ಇವತ್ತು ಕುಂಚೆಬೈಲು ಭಟ್ಟರ ಮನೆ ಆಕಳು ಮಳೆ ಹೊಡೆತಕ್ಕೆ ಸಿಕ್ಕಿತಂತೆ, ಗೌಡ್ರ ಆಳು ಲಕ್ಕ ಸಂಸಾರ ಸಮೇತ ಗುಳೆ ಹೊರಟಿದೆಯಂತೆ' ಎಂದೆಲ್ಲಾ ಹೇಳುವಾಗ ಮನದಿ ಮೂಡುವ ಮೊದಲ ಪ್ರಶ್ನೆ ನಮ್ಮ ಸರದಿ ಯಾವಾಗ? ನೆನೆದರೆ ಮೈ ಜುಂ ಎನ್ನುತ್ತದೆ.
ಚಿಕ್ಕಂದಿನಿಂದ ಆಡಿ ಬೆಳೆದ ಮನೆಯನ್ನು ತೊರೆಯುವುದೂ ಒಂದೇ. ಶಾಂತವಾದ ತುಂಗೆಯ ಪ್ರವಾಹಕ್ಕೆ ತಲೆ ಒಡ್ಡುವುದೂ ಒಂದೇ. ಇದನ್ನೆಲ್ಲಾ ನೋಡಿದರೆ ಕಣ್ಣಾಲಿಗಳು ತುಂಬಿ ಬರುತ್ತವೆ.
ಹೌದು, ಬೇಸಿಗೆ ಒಂದು ರೀತಿ ಸಂಭ್ರಮಕ್ಕೆ ನೂರಾರು ರೀತಿ ಹೇಳಿಕೆಗೆ, ಊಟದ ಮನೆಗಳಿಗೆ ತಿರುಗುವ ಕಾಲ. ಈಗಿನ್ನೂ ಶಿಶಿರ ಕಳೆದಿಲ್ಲ. ಸಂಭ್ರಮಕ್ಕೆ ತೆರೆ ಎಳೆದಂತೆ ಆಗಲೇ ಮಳೆರಾಯ ಮನೆಗೆ ಬಂದು ಕುಳಿತರೇ, ಬೇಡದ ಅತಿಥಿಯನ್ನು ಯಾರು ತಾನೇ ಶಪಿಸುವುದಿಲ್ಲ ಹೇಳಿ.
ಆದರೆ ದೂರದ ನಗರವಾಸಿಗಳು ಎಲ್ಲಾ ಸೌಲಭ್ಯಗಳಿದ್ದು, ಎಂದೋ ಸುರಿವ ಎರಡು ಮೂರು ದಿನಗಳ ಮಳೆಗೆ ಬೆಚ್ಚಿ ವರ್ಣಿಸುವ ರೀತಿ ಅಸಹನೀಯವೆನಿಸುತ್ತದೆ.(ಇತ್ತೀಚೆಗೆ ರಾಜಧಾನಿಯಿಂದ ಶಂಕರನ ಪಟಾಲಂ ಬಂದಿದ್ದಾಗ ಮಳೆಯನ್ನು ಅವರ ಜೀವನದ ವಿಲನ್ ರೀತಿಯಲ್ಲಿ ಚಿತ್ರಿಸುತ್ತಿದ್ದನ್ನು ಕಂಡು ಹೇಳಿದೆ ಅಷ್ಟೆ)
ಮಳೆಯಲ್ಲಿ ನೆಂದು, ತೊಯ್ದು ಕನಿಷ್ಠ ಅನುಭವವಿಲ್ಲದ ಜನ ಮಳೆಬಗ್ಗೆ ಉಪನ್ಯಾಸ ನೀಡುವಾಗ ರೇಜಿಗೆ ಎನಿಸುತ್ತದೆ. ಪ್ರಕೃತಿಯೊಡನೆ ಹೊಂದಾಣಿಕೆ ಮಾಡಿಕೊಂಡು ಬದುಕುವುದು ಬೇರೆ. ಪ್ರಕೃತಿಯ ವೈಪರೀತ್ಯ ಎದುರಿಸಿ ಅದನ್ನು ಮೆಟ್ಟಿ ನಿಲ್ಲುವುದು ಬೇರೆ.
ಈ ವಿಷಯದಲ್ಲಿ ನಾ.ಡಿಸೋಜರ ಪಾತ್ರಧಾರಿ ನಾಗಿ(ದ್ವೀಪ ಚಿತ್ರದಲ್ಲಿ) ಗುರುವೇ ಸರಿ. ಸಂಕಲ್ಪ ಸ್ಥಿರವಾಗಿದ್ದರೆ ಪ್ರಕೃತಿ ನಮ್ಮ ಕೈಹಿಡಿತದಲ್ಲಿರುತ್ತದೆ. ಪರಿಸರದೊಡನೆ ಬೆರೆತು ನಮ್ಮ ಆಣತಿಯಂತೆ ಅದನ್ನು ರೂಪಿಸಿಕೊಳ್ಳುವ ಜಾಣ್ಮೆ ಅರಿತರೇ ಬದುಕಲ್ಲಿ ಯಾವುದೂ ಅನಿಷ್ಟವಲ್ಲ, ಅಕಾಲಿಕ ಕಷ್ಟವಲ್ಲ.
ಮತ್ತೊಮ್ಮೆ ಮಳೆ ಬಂದಾಗ ಮನಸೋ ಇಚ್ಛೆ ನೆನೆದು ನೋಡಿ ಅದರ ಮಜಾನೇ ಬೇರೆ, ಆಗ ತಿಳಿಯುತ್ತೆ ಅದರ ಗಮ್ಮತ್ತು. (ಜ್ವರ ಬಂತೆಂದು ಬೈಯಬೇಡಿ ಮತ್ತೆ) ನಾನಂತೂ ಪೆನ್ನು ಕೆಳಗಿಟ್ಟು ಅಂಗಳಕ್ಕೆ ಇಳಿಯುತ್ತಿದ್ದೇನೆ. ಮಳೆ ನಿಲ್ಲುವವರೆಗೂ ನಿರಂತರ ಮೋಜಿನಾಟ.....