page1

Pages

Saturday, April 11, 2009

ಮತ್ತದೇ ಬೇಸರ, ಅದೇ ಹುರುಪು


"ಮಲೆಸೀಮೆಯಲ್ಲಿ ಈ ಪಾಟಿ ಬಿಸಿಲು ಕಂಡಿದ್ದೇ ಇಲ್ಲಾ ಭಟ್ಟರೇ, ಎಲ್ಲಿಗಾದ್ರೂ ಹೊಗುವ ಬಂದ್ರೆ ರಣಬಿಸಿಲು ನೆತ್ತಿ ಸುಡುತ್ತೆ ?" , ಮನೆ ಮುಂದಿನ ಚಿಟ್ಟೆಯಲ್ಲಿ ವಿರಮಿಸಿದ್ದ ಮೇಗಿನ ಗದ್ದೆ ರಾಮಣ್ಣ, ಅಣ್ಣ (ಅಪ್ಪಯ್ಯ)ನ ಜೊತೆ ಹರಟುತ್ತಿದ್ದ.

ಅವನ ಮಾತಿಗೆ ಗೌಣುಹಾಕುತ್ತಾ ನನ್ನೆಡೆ ತಿರುಗಿದರು. ಅದು ರಾಮನಿಗೆ ಕಾಫಿ ಸಮಾರಾಧನೆ ಅಣಿ ಮಾಡು ಎನ್ನುವ ಸೂಚನೆ. ನಾನು ಒಳನಡೆದೆ.

ಇಬ್ಬರೂ ಮಟ ಮಟ ಮಧ್ಯಾಹ್ನ ಕಾಫಿ ಹೀರಿ ಮತ್ತೆ ಮಾತಲ್ಲೆ ಊಟ ಮುಗಿಸಿದ್ದರು. ರಾಮಣ್ಣನಿಗೆ ಬೇಸಿಗೆಯಲ್ಲಿ ಸಾಮಾನ್ಯವಾಗಿ ಓಡಾಟ ಹೆಚ್ಚು, ಅದೂ ಯುಗಾದಿ ನಂತರ ಸುಮಾರು ಶುಭ ಸಮಾರಂಭಗಳಿಗೆ ಹೇಳಿಕೆ ನೀಡುವುದು. ಚಪ್ಪರ ಹಾಕುವುದು, ಮಂಟಪ ಮಾಡುವುದರಿಂದ ಹಿಡಿದು ಎಲ್ಲಾ ಕೆಲ್ಸಗಳಲ್ಲಿ ವ್ಯಸ್ತನಾಗಿರುತ್ತಿದ್ದ.

ಹೀಗೆ ಸದಾ ಚಟುವಟಿಕೆಯ ಜೀವಿ ರಾಮಣ್ಣನಿಗೂ ಬಿಸಿಲಿನ ಝಳ ಈ ಬಾರಿ ಚುರುಕು ಮುಟ್ಟಿಸಿದ್ದಂತೂ ನಿಜ. ಚಿಕ್ಕಂದಿನಿಂದ ಆತನನ್ನು ನಾವೆಲ್ಲಾ ರಾಮಣ್ಣ ಅಂತೆಲೆ ಕರೆಯೋದು.

ಆದ್ರೆ ಆತನಿಗೆ ಏನಿಲ್ಲಾ ಅಂದ್ರೂ 45-50 ರ ಪ್ರಾಯ ಇರಬಹುದು ಅಥವಾ ಅದಕ್ಕಿಂತ ಹೆಚ್ಚಿರಬಹುದು. ಆದ್ರೆ ಆತನ ಚುರುಕುತನ ನಮ್ಮ ವಯಸ್ಸಿನವರಿಗೂ ಇಲ್ಲ. ಎಣ್ಣೆಗಂಪು ಬಣ್ಣದ ರಾಮಪ್ಪನ ಆಸ್ತಿ ಎಂದೂ ಮಾಸದ ಮುಗ್ಧ ನಗು.

ಎರಡು ಕಿವಿಗೂ ಒಂಟಿ ಧರಿಸಿ, ಸದಾ ಅದೇ ಮಾಸಿದ ಬಿಳಿ ಅಂಗಿ ಮೊಳಕಾಲಿಗಿಂತ ಮೇಲೆ ಉಟ್ಟ ಕಚ್ಚೆ ಪಂಚೆ. ಕೈಲಿ ಎಂದಿನಂತೆ ಕರಿ ಬಣ್ಣದ ಛತ್ರಿ. ಹೊಗೆಸೊಪ್ಪು ಹೊಸೆಯುತ್ತಾ ಗೊಟಡಿಕೆ ಮೆಲ್ಲುತ್ತಾ ಶೃಂಗೇರಿ, ಮೂಡಿಗೆರೆ, ಕೊಪ್ಪ, ಬಾಳೆಹೊನ್ನೂರು, ಶಿವಮೊಗ್ಗ.... ಸೀಮೆಯ ವಕ್ತಾರನಂತೆ ಸದಾ ಓಡಾಡುವ ಇವನನ್ನು ನೋಡದವರೆ ವಿರಳ.

ಸಹಕಾರ ಸಾರಿಗೆ, ನಿಸ್ಮಿತಾ, ಮಲ್ಲಿಕಾರ್ಜುನ, ಕೆಕೆಬಿ, ತುಂಗಭದ್ರಾ. ಅವಿಭಜಿತ ಶಂಕರ್ ಟ್ರಾನ್ಸ್ ಪೋರ್ಟ್ ಹೀಗೆ ಎಲ್ಲಾ ವಾಹನದಲ್ಲೂ ಡ್ರೈವರ್ ಪಕ್ಕದ ಬದಿ ಸೀಟು ಖಾಯಂ.

ಸಾಮಾನ್ಯವಾಗಿ ರಾಮಣ್ಣ ಬಸ್ ಸ್ಪಾಪ್ ಗಳಲ್ಲಿ ನಿಂತು, ಬಸ್ ಕಾಯ್ದು ಹತ್ತುತ್ತಿದ್ದದ್ದೆ ಕಮ್ಮಿ. ಮೊದಮೊದಲೆಲ್ಲಾ ಇವನು ಕೈ ಒಡ್ಡಿದ ಕಡೆಯೆಲ್ಲಾ ಬಸ್ ನಿಲ್ಲಿಸುತ್ತಿದ್ದ ಡ್ರೈವರ್ ಗಳು, ಬರಬರುತ್ತಾ ಇವನ ಕಡೆ ಉದಾಸೀನರಾಗುತ್ತಾ ಬಸ್ ಹಾಗೆ ಹೊಡೆದುಕೊಂಡು ಹೋಗತೊಡಗಿದರು.

ಆದ್ರೆ ಇವ ಬಿಡಬೇಕಲ್ಲ. ತಿಂಗಳ ಕೆಳಗೆ ಜೈಪುರದಿಂದ ಮುಂದೆ ಕಲ್ಕೆರೆಗೂ ಮುನ್ನ ಸಾಮಾನ್ಯವಾಗಿ ಕೈ ಒಡ್ಡಿ ಬಸ್ ನಿಲ್ಲಿಸುತ್ತಿದ್ದ ರಾಮಣ್ಣ, ಮುಷ್ಟಿಯಲ್ಲಿ ಕಲ್ಲು ಹಿಡಿದು ಗಣ ಬಂದ ಹಾಗೆ ಆಡುತ್ತಾ ಬಸ್ ಗೆ ಅಡ್ಡವಾಗಿ ನಿಂತ್ತಿದ್ದನಂತೆ. ಡ್ರೈವರ್ ಬ್ರೇಕ್ ಒತ್ತಿದ್ದ ರಭಸಕ್ಕೆ ಹಲವರ ಮುಸುಡಿ, ಕಿವಿ ಮೂಗುಗಳು ಜಖಂ ಆಗಿದ್ದಂತೂ ಸತ್ಯ.

ಆಮೇಲೆ ಏನೂ ಅರಿಯದವನಂತೆ ಮೆಲ್ಲಗೆ ಬಸ್ ಏರಿ ತನ್ನ ಸೀಟಿನಲ್ಲಿ ಕೂತ ರಾಮಣ್ಣನಿಗೆ ಕಂಡೆಕ್ಟರ್ ಬೈಗುಳ ಪುಷ್ಪವೃಷ್ಟಿಯಂತೆ ಅನಿಸಿ, ಎಂದಿನ ಪೆಕರು ನಗೆ ನಕ್ಕನಂತೆ. ಕಡೆಗೆ ಕಂಡೆಕ್ಟರ್ ಹಣೆ ಬಡಿದುಕೊಂಡು ಹೋದನಂತೆ.

ಈ ಬಗ್ಗೆ ಅಣ್ಣ ಪ್ರಶ್ನಿಸಿ ಯಾಕೋ ರಾಮ ಹೀಗೆಲ್ಲಾ ಮಾಡಿದೆಯಂತೆ ಅಂದ್ರೆ, "ಅಯ್ಯೋ ಬಿಡಿ ಭಟ್ಟರೆ, ಹುಡುಗು ಮುಂಡೇವು. ಅವಕ್ಕೆನೂ ಗೊತ್ತು. ಅವರಪ್ಪನ ಕಾಲದಿಂದ ನಾನು ಬಸ್ ನಲ್ಲಿ ಓಡಾಡಿದ ಸರ್ವೀಸ್ ಇದೆ ನಂಗೆ. ಒಂಚೂರು ಮರ್ಯಾದೆ ಕೊಟ್ಟು ಅಭ್ಯಾಸ ಇಲ್ಲ ಈಗೀನಾ ಮುಂಡೆವಕ್ಕೆ" ಅನ್ನೋದೆ.

ರಾಮಣ್ಣನ್ನಂತವರು ನಮ್ಮ ಸೀಮೆಯಲ್ಲಿ ಹುಡುಕಿದರೆ ನೂರು ಮಂದಿ ಸಿಗುತ್ತಾರೆ. ಆದ್ರೆ ಇತ್ತೀಚೆಗೆ ರಾಮಣ್ಣನಂಥಹ ಟಿಪಿಕಲ್ ಮಲೆನಾಡಿನ ಜೀವಿಗಳ ಬಗ್ಗೆ ಒಂದಷ್ಟು ಹೆಚ್ಚಿನ ಆಸ್ಥೆ ಮೂಡಿತ್ತು.

ಅದಕ್ಕೆ ಕಾರಣ ಇಷ್ಟೆ. ತೇಜಸ್ವಿ ಅವರ ಕಣ್ಮರೆಯ ವಿಷಾದ ರಾಗ, ಮತ್ತೆ ಇಂಥಹ ಜನ ನೋಡಿ ಮೂಡುವ ಹುರುಪು. ಕಾಲ ಎಲ್ಲವನ್ನೂ ಮರೆಸುತ್ತದೆ ಅನ್ನೋ ಮಾತನ್ನು ಕಾಲ ಎಲ್ಲವನ್ನು ಜೀವಂತ ಇರಿಸುತ್ತದೆ. ಹೀಗಲ್ಲಾದಿದ್ದರೆ ಹಾಗೆ ಎಂದು ತಿದ್ದುಕೊಳ್ಳೋದು ವಾಸಿ ಅನಿಸುತ್ತದೆ.

ತೇಜಸ್ವಿ ಮರೆತರೆ ನಮ್ಮನ್ನು ನಾವು ಮರೆತಂತೆ
ಅಕ್ಕಾ ಎಷ್ಟು ಚೆಂದಿತ್ತು ಗೊತ್ತಾ? ಮೇಷ್ಟ್ರು ಮೊದಲು ಹೇಳಿದಾಗ ನಾವು ಎಲ್ಲೋ ಇಲ್ಲಿ ಮನೆ ಹತ್ರಾ ಇರೋ ಕಾಡು ತರಾನೇ ಏನೋ ತೋರಿಸಿ ಕಳಿಸ್ತಾರೆ ಅಂತಾ ಮಾಡಿದ್ವಿ. ತೇಜಸ್ವಿ ಅಜ್ಜ ಓಡಾಡಿದ ಕಾಡಂತೆ ಕಣೆ. ಹೋಗ್ ನಿಂಗೆ ಪುಣ್ಯ ಇಲ್ಲ ಹೀಗೆ ಸಾಗಿತ್ತು ಪುಟ್ಟ ಪೋರಿಯ ಮಾತಿನ ಝರಿ..

ತೇಜಸ್ವಿ ಅವರ ನೆನಪಿನಲ್ಲಿ ಏ.5 ರಂದು ನಡೆದ ಚಾರಣ ಕಾರ್ಯಕ್ರಮಕ್ಕೆ ಹೋಗಿ ಬಂದ ಮೇಲೆ ವರ್ಷಿಣಿಯ ಸಂಭ್ರಮಕ್ಕೆ ಎಣೆಯಿಲ್ಲ. ಬರೀ ಮನೆ ಸುತ್ತಣ ಕಾಡಿನಲ್ಲಿ ನಮ್ಮ ಜೊತೆ ಅಲೆಯುತ್ತಾ ಇದ್ದ ಹುಡುಗಿಗೆ ಒಮ್ಮೇಲೆ ಹೊಸದಾದ ಸಿರಿ ಕಂಡ ಅನುಭವ.

ಮೂಡಿಗೆರೆಯ ವಿಸ್ಮಯಾ ಟ್ರಸ್ಟ್ ನ ಚಾರಣ ಕಾರ್ಯಕ್ರಮಕ್ಕೆ ಗೆಳತಿಯರೊಡನೆ ನನ್ನ ಚಿಕ್ಕನ ಮಗಳು ೧೦ ವರ್ಷದ ವರ್ಷಿಣಿ ಅಲ್ಲಲ್ಲ ವಾಕ್ ವರ್ಷಿಣಿ(ಮಾತಿನ ಮಳೆಗೆರೆಯುವವಳು ಅಹಹ್ಹಹಹಾ) ಕೂಡ ಹೋಗಿದ್ದಳು.

ಆರೋಗ್ಯ ಕೊಂಚ ಏರುಪೇರಾದ ಕಾರಣ ನೆಚ್ಚಿನ ಗುರು ತೇಜಸ್ವಿ ಅಲೆದಾಡಿದ ತಾಣಕ್ಕೆ ನಾನು ಹೋಗಲಾಗಲಿಲ್ಲ. ಆದರೆ, ವರ್ಷಿಣಿಯ ಮಾತು, ಸಂಭ್ರಮ ಆ ನೋವನ್ನು ಮರೆ ಮಾಡಿತು.

ಅಲ್ಲಿ ಪುಟ್ಟ ಪೋರಿ ಪ್ರಕೃತಿಯ ಮಡಿಲಿನಲ್ಲಿ ವಿಜ್ಞಾನಿಗಳು, ಪರಿಸರವನ್ನು ತಿಳಿದವರು, ತೇಜಸ್ವಿ ಒಡನಾಡಿಗಳ ಜೊತೆ ಏನೆಲ್ಲಾ ಕಲಿತಿರಬಹುದು. ಚಾರಣ ಮಾಡಿ, ದಿನ ನೋಡೊ ಗಿಡ ಮರ ಆದ್ರೂ ವೈಜ್ಞಾನಿಕ ದೃಷ್ಟಿಯಿಂದ ಅವುಗಳ ಬಗ್ಗೆ ಇನ್ನಷ್ಟು ತಿಳಿದಾಗ ಆಗುವ ಸಂತೋಷ ವರ್ಣಿಸಲು ಬರುವುದಿಲ್ಲ.

ಯಾರೂ ಬೇಡ ತೇಜಸ್ವಿ ಅವರ ಜೀವಂತ ಪಾತ್ರ ಬಿರಿಯಾನಿ ಕರಿಯಪ್ಪನನ್ನು ನೋಡಿದರೆ ಸಾಕು ತೇಜಸ್ವಿ ಬರೆದ ಕಥೆಗಳು ನಮಗರಿವಿಲ್ಲದಂತೆ ಕಣ್ಮುಂದೆ ಬಂದು ನಿಲ್ಲುತ್ತದೆ.

ತೇಜಸ್ವಿ ಅಗಲಿದ ನಂತರ ಅವರ ಬಗ್ಗೆ ಜನರಲ್ಲಿ ಮೂಡುತ್ತಿರುವ ಆಸಕ್ತಿ , ಆದರಗಳನ್ನು ಕಂಡರೆ ಖುಷಿಯಾಗುತ್ತದೆ. ಆದರೆ ಅದೇ ರೀತಿ ಒಂದಿಷ್ಟು ಭಯ ಕೂಡ ಆಗುತ್ತದೆ. ಯಾವ ನಿರ್ಜೀವ ಶಕ್ತಿಗೂ ನಿಲುಕದಂತಿದ್ದವರು ತೇಜಸ್ವಿ.

ಆದರೆ ಎಲ್ಲಿ ನಮ್ಮ ಜನ ತೇಜಸ್ವಿ ಎಂಬ ಬ್ರಾಂಡ್ ನೇಮ್ ಇಟ್ಟುಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೋ ಎಂಬ ಅಳುಕು ಮನದ ಮೂಲೆಯಲ್ಲಿ ಕೊರೆಯುತ್ತಿದೆ.

ಏನೇ ಆದರೂ ಪ್ರಕೃತಿಯಲ್ಲಿ ಸತ್ವವಿರುವುದಷ್ಟೇ ಉಳಿಯುವುದು. ಸರಳ ಜೀವಿಗೆ ಅಭಿಮಾನದ ಕಾಮನಬಿಲ್ಲು ಸುತ್ತಿ ಬೆಟ್ಟ ಮೇಲೆ ಕೂರಿಸಿ ಉತ್ಸವ ಮಾಡುವುದು ಅನಗತ್ಯ. ನಾವಂತೂ ನಿತ್ಯ ಕಾಯಕದಲ್ಲೇ ಮೂಡಿಗೆರೆ ಸಂತನನ್ನು ಕಾಣುತ್ತೇವೆ.
ಚಿತ್ರಗಳ ಕೃಪೆ: ದಟ್ಸ್ ಕನ್ನಡ