page1

Pages

Sunday, February 17, 2008

ಬರವಣಿಗೆ ಅನಿವಾರ್ಯ ಕರ್ಮ

ಬರವಣಿಗೆ ಅನಿವಾರ್ಯ ಕರ್ಮ ಎನಿಸಿದ ಮೇಲೆ, ಬರೆದ ಅಕ್ಷರಗಳು ಮನತಣಿಸ ಹೋದರೆ ಸುಮ್ಮನೆ ಅದನ್ನು ಹೊರಗೆಡವುದರಲ್ಲಿ ಯಾವುದೇ ತೃಪ್ತಿ ಇರದು. ಯಾಕೊ ಮನಸ್ಸು ಒಮ್ಮೊಮ್ಮೆ ಖಾಲಿ ಖಾಲಿ ಎನಿಸಿಬಿಡುತ್ತದೆ.

ಯಾವ ವಿಷಯವೂ ರುಚಿಸದಂತೆ, ಎಲ್ಲದರಲ್ಲೂ ನಿರಾಸಕ್ತ ಭಾವ ಮೂಡಿದಂತೆ, ಏನನ್ನೊ ಹುಡುಕುತ್ತಾ, ಮತ್ತೇನನ್ನೊ ಪಡೆಯುತ್ತಾ, ನಡುವೆ ಇನ್ನೇನ್ನನೊ ಕಳೆದುಕೊಳ್ಳುವ ಈ ಜೀವನ ಎಂಬ ವಿಸ್ಮಯ ಪರಿಕ್ರಮಕ್ಕೆ ಸಾಷ್ಟಾಂಗ ನಮಸ್ಕಾರ ಹೇಳಬೇಕೆನಿಸುತ್ತದೆ.

ಬರವಣಿಗೆಗೆ(ಬರೆಯೋದಕ್ಕೆ) ಒಂದು ನೆಪ ಬೇಕೇ? ಎಷ್ಟೊ ಸಾರಿ ನನಗೆ ನಾನೇ ಕೇಳಿಕೊಂಡ ಪ್ರಶ್ನೆ. ಹಾಗಂತ ಅನಿಸಿದ್ದೆಲ್ಲದ್ದಕ್ಕೆ ಅಕ್ಷರ ರೂಪನೀಡುತ್ತಾ ಹೋದರೆ, ಮಿತಿಯಿರದ ಪುಟಗಳ ಲೆಕ್ಕಾಚಾರದಲ್ಲಿ ಕಳೆದುಹೋಗುವ ಭಯ ಕಾಡುತ್ತದೆ. ಹೌದು ಮನುಷ್ಯನಿಗೆ ಭಯ ಯಾಕಾದರೂ ಕಾಡುತ್ತದೆ.

ಏನಾದರೂ ತಪ್ಪು ಮಾಡಿದಾಗ, ತಪ್ಪು ಮಾಡೋದು ಯಾವಾಗ ಮನಸ್ಸಿನಲ್ಲಿ ಕೆಟ್ಟ ಅಲೋಚನೆ ಉಂಟಾದಾಗ. ಒಂದು ಸಿದ್ಧಾಂತದ ಪ್ರಕಾರ 'ಮನಸ್ಸಿನಲ್ಲಿ ಉಂಟಾಗುವ ಕೆಟ್ಟ ಅಲೋಚನೆಗಳಿಗೆ ಮೂಲ ಕಾರಣವೇ ಭಯ ಅಂತೆ' . ಭಯ ಅಥವಾ ಯಾವುದೇ ಫೋಬಿಯಾ ಬಗ್ಗೆ ವಿಸ್ತಾರವಾಗಿ ಬರೆದು ನಿಮಗೆ ಭಯ ಹುಟ್ಟಿಸುವುದಿಲ್ಲ ಬಿಡಿ.

ಮನಸ್ಸಿನಲ್ಲಿ ಬರುವ ಕಲ್ಪನೆ, ಕನಸಾಗಿ, ಕನಸು ಪದಗಳಾಗಿ, ಪದಗಳು ಪ್ಯಾರಗಳಾಗಿ ದೊಡ್ಡ ಲೇಖನವಾಗಿ ಸಾವಿರಾರು ಜನ ಓದಿ, ಅದರಿಂದ ಎಲ್ಲರ ತಲೆಯಲ್ಲೂ ಉಂಟಾಗುವ ಅಥವಾ ಬರುವ ನಾನಾ ಆಲೋಚನೆಗಳ ಜಾಲದೊಳಗೆ ಬಂಧಿತಳಾದ ಮೇಲೆ ಬರೆಯದೇ ಸುಮ್ಮನೆ ಕೂತರೆ ನಾನಾ ಓದುಗರ ವಿಭಿನ್ನ ಆಲೋಚನಾ ಕ್ರಮಕ್ಕೆ ಧಕ್ಕೆ ಉಂಟು ಮಾಡಿದಂತೆಯೇ ಸೈ.

ಎಲ್ಲಾ ಓದುಗರ ಸ್ತರಕ್ಕೆ ಮುಟ್ಟಲಾಗದಿದ್ದರೂ 'ಇವರು ಇಂದು ನೋಡಿದ್ದಾರೆ ಈ ಲೇಖನನಾ', 'ಅವರು ಏನೋ ನಾಲ್ಕು ಸಾಲು ಬರೆದಿದ್ದಾರೆ ಇದರ ಬಗ್ಗೆ' ಅನ್ನೊ ಸಣ್ಣ ಖುಷಿ, ಉತ್ಸಾಹವೇ ಮುಂದಿನ ಪ್ರತಿ ಲೇಖನಕ್ಕೆ ನಾಂದಿ ಹಾಡುತ್ತದೆ ಎನ್ನುವುದು ಸುಳ್ಳಲ್ಲ.

ಹಾಗೆ ನೋಡಿದರೆ ನಮ್ಮ ಪ್ರತಿಯೊಂದು ಕ್ರಿಯೆಯ ಫಲಿತಾಂಶ ಅಡಕವಾಗಿರುವುದು ಅದರ ಹಿಂದಿನ ಪ್ರೇರಕ ಶಕ್ತಿಯಿಂದ, ಉತ್ಸಾಹದಿಂದ. ಉತ್ಸಾಹ/ಲವಲವಿಕೆ ಇದ್ದರೆ ಶ್ರದ್ಧೆ ಮೂಡುತ್ತದೆ. ಶ್ರದ್ಧೆ ಬಂದರೆ ಜ್ಞಾನ ಸಿಗುತ್ತದೆ. ಒಮ್ಮೆ ಜ್ಞಾನಿಯಾದ ಮೇಲೆ ಅವನಿಗೆ ಕರ್ಮದ ಯಾವುದೇ ಬಂಧನವಿರುವುದಿಲ್ಲ.

ಹಾಗಂತ ಪಡೆದ ಜ್ಞಾನವನ್ನು ಹಂಚದೆ ಹೋದರೆ, ಅದು ತಪ್ಪಾಗುತ್ತದೆ. ಒಟ್ಟಿನಲ್ಲಿ ಸೂಕ್ಷ್ಮವಾಗಿ, ಸ್ಥೂಲವಾಗಿ ಹೇಳಬೇಕೆಂದರೆ, ತಿಳಿದಿದ್ದನ್ನು ತಿಳಿಯದವರಿಗೆ ತಿಳಿ ಹೇಳೋ ಕಾಯಕನಾ ಜೀವನ ಪರ್ಯಂತ ಮುಂದುವರೆಸುವುದರಲ್ಲೇ ಇದೆ ನಿಜವಾದ ಆನಂದ.

ಹ್ಞು...ಇಷ್ಟೆಲ್ಲಾ ಪೀಠಿಕೆ ಯಾಕಾದರೂ ಬರೆದೆ ಎಂದು ಒಮ್ಮೆ ಅವಲೋಕಿಸಿದಾಗ ಕಾಣುವುದು ಒಂದೇ. ಬ್ಲಾಗ್ ಅಂಥಾ ಒಂದು ಸೃಷ್ಟಿ ಮಾಡೋದು ಮುಖ್ಯ ಅಲ್ಲ ಅದನ್ನು ಸಾಕಿ ಸಲುಹುವುದು ಕೂಡ ಅಷ್ಟೇ ಮುಖ್ಯ ಅಂತಾ. ಸಹೃದಯ ಮಿತ್ರರ ಆಣತಿಯಂತೆ ಉಪವಾಸ ಮುಗಿಸಿ ಮತ್ತೆ ಅಕ್ಷರದೊಡನೆ ಕಾದಾಟಕ್ಕೆ ಸಿದ್ಧಳಾಗುತ್ತಿದ್ದೇನೆ. ಸ್ವಲ್ಪ ಬಿಡುವು ಕೊಡಿ..........(ಅರೆ..ಬಿಡುವು ಯಾರನ್ನು ಕೇಳುತ್ತಿದ್ದೇನೆ..ಯಾವುದರಿಂದ ಅಂಥಾ ಒಮ್ಮೆ ನಗು ಬಂತು.. ಕ್ಷಮಿಸಿ)

ಸುಮ್ಮನೆ ಕಾಲಹರಣಕ್ಕೆಂದು ಗೀಚಿದ ಸಂಚಾರ ವಾಣಿಯಲ್ಲಿ ಕಂಡ ನಾಲ್ಕಾರು ಎಸ್ಸೆಎಂಎಸ್ ಸಂದೇಶಗಳ ಕನ್ನಡೀಕರಣ ಸಾಲುಗಳು ನೀಡುತ್ತಿರುವೆ. ಕ್ಷಮಿಸಿ ಇವು ಯಾವುದು ಸ್ವಂತದಲ್ಲ. ಗೆಳೆಯ ಕಳಿಸಿದ ಪರಭಾಷೆಯ ಸಂದೇಶದ ಕನ್ನಡರೂಪ ಅಷ್ಟೇ.

ನನ್ನ ಇನಿಯ ತೊರೆದನು ನನ್ನ ಕೆಲ ಕ್ಷಣ
ದೂರಾಗಿ ಸನಿಹವಾದ ಎಂದಿತು ಮನ
ಅವನ ನೆನೆಯದೇ ಇರದ ಕ್ಷಣವೂ ಕ್ಷಣವಲ್ಲ
ಹೃದಯದಿ ನೆಲೆಸಿಹ ಅವನು ನನಗೆ ಕ್ಷಣಿಕವಲ್ಲ
*********
ವಿರಕ್ತನಾಗಿ ಈ ಬದುಕಿನಿಂದ ನಾನು ಮುಕ್ತಿಹೊಂದಿದ ಮೇಲೆ
ನನಗೆ ಸಂದೇಶ ಕಳುಹಿಸದೆ ಈಗ ನೀನು ಉಳಿಸುತ್ತಿರುವ ಹಣದಿಂದ
ನನಗಾಗಿ ಶ್ವೇತ ಪುಷ್ಪಗಳ ಖರೀದಿಸಿ ಅರ್ಪಿಸು ಗೆಳೆಯ
*********
ನೆನ್ನೆಯ ತಪ್ಪುಗಳ ನಡುವೆ, ನಾಳೆಯ ಭರವಸೆಗಳ ನಡುವೆ
ಅವಕಾಶಗಳ ಮೂಟೆ ಹೊತ್ತು ಇಂದು ನಿಮ್ಮ ಮುಂದಿದೆ
ಈ ಅವಕಾಶವ ಜೀವನದಲ್ಲಿ ಸರಿಯಾಗಿ ಉಪಯೋಗಿಸಿಕೊಳ್ಳಿ.
*********
ಬರೆದೆ ನಿನ್ನ ಹೆಸರ ಮರಳ ಮೇಲೆ
ನೀರಿನ ಅಲೆ ಬಂದು ಕೊಚ್ಚಿ ಹೋಯ್ತು
ಬರೆದೆ ನಿನ್ನ ಹೆಸರ ಗಾಳಿಯ ಮೇಲೆ
ಬಿರುಗಾಳಿ ಬಂದು ತೂರಿ ಹೋಯ್ತು
ಕಡೆಗೆ ನಿನ್ನ ಹೆಸರ ಬರೆದೆ ನನ್ನ ಹೃದಯದಿ
ಪಾಪಿ! ನಿನ್ನ ಹೆಸರ ಬರೆದಿದ್ದಿದ್ದೆ ತಡ ಹೃದಯಬಡಿತ ನಿಂತೊಯ್ತು.
***********