page1

Pages

Sunday, May 27, 2007

ಛೇ!! ಹೀಗೇಕಾಯ್ತು

ಹೊಂಬೆಳಕ ಕಿರಣದಿ ಕಂಡಳು ಅವಳು
ಮುಂಜಾನೆಯಲ್ಲೂ ನಶೆ ಏರಿಸಿದಳು ನನ್ನೊಳು
ತುಂತುರು ಮಳೆಯ ಮನದಿ ತಂದಳು
ಹುದುಗಿದ್ದ ಆಸೆಗಳ ಚಿಗುರಿಸಿ ನಿಂತಳು

ಗುಡುಗಿನ ಆರ್ಭಟವಿಲ್ಲ, ಸಿಡಿಲಿನ ಸದ್ದಿಲ್ಲ
ಅವಳ ಮಿಂಚಿನ ನೋಟವೊಂದೆ ಕೋರೈಸುತ್ತಿತ್ತು
ನೀಳ ಕೇಶಕ್ಕೆ ಕಿರೀಟದಂತೆ ಮುಂಗುರುಳು ಸುರಳಿ ಸುತ್ತಿತ್ತು
ರವಿಯ ಕಿರಣ ಕೆನ್ನೆಯ ರಂಗ ಹೆಚ್ಚಿಸಿತ್ತು

ಕುಡಿನೋಟವ ಬೀರಿದೆ ಅವಳೆಡೆ
ಅವಳೆತ್ತಲೋ ನೋಡುತ್ತಿದ್ದಳು.

ಸ್ಪಂದಿಸದ ಸುಂದರ ನಯನೆಯ ಮನದಲಿ ಶಪಿಸುತ್ತಾ ನಡೆದೆ.
ಯಾರೋ ಬಿದ್ದ ಶಬ್ದ ಆಲಿಸಿ ತಿರುಗಿ ನೋಡಿದೆ
ಕುಸಿದು ಕೂತಿದ್ದಳು ಅವಳಲ್ಲಿ
ಕಲುಕಿತು ಮನ
ಶಪಿಸಿದೆ ಸೃಷ್ಟಿಕರ್ತನಾ
ಎಲ್ಲಾ ಕೊಟ್ಟು ಕಣ್ಣುಕಿತ್ತೆಯಲ್ಲೊ ಎಂದು ಬೈಯುತ್ತಾ...
ಸಾಗಿದೆ ಅವಳೆಡೆಗೆ
ಕಾಂತಿ ಇರದ ನಯನಗಳ ನೋಡುತ್ತ..

ಮತ್ತೆ ಬಿತ್ತು ಮಳೆ.. ಕನಸಿನೊಡನೆ

ಮಳೆಯಲ್ಲಿ ನೆಂದ ಮನಸು
ಮೂಡಿಸಿತು ಕನಸನು
ತುಂತುರು ಹನಿಗಳ ಮಳೆ
ಸವಿಗನಸಿನ ಮಾಲೆ ಹೆಣೆದಿತ್ತು
ಸ್ವಪ್ನದ ಹೊಳೆ ಹರಿಸಿ ನನ್ನ ತೇಲಿಸಿತ್ತು.
ನೆಂದರೂ ಮನ ನಡುಕವಿಲ್ಲ
ಲಹರಿಯಂತೆ ಕನಸ ಅಲೆಯಿದ್ದರೂ
ಸವಿನೆನಪ ದೋಣಿ ದಿಕ್ಕು ತಪ್ಪಿಲ್ಲ

ಬದಲಾಗದೆ ದಿಕ್ಕು ಮನಕೆ ಮೂಡಿತು ಬೇಸರ
ನೆತ್ತಿಯನ್ನು ಸುಡುತ್ತಿದ್ದ ಆಗ ನೇಸರ
ದೂರದಿ ಕಂಡ ನೆಲೆ ಮರೀಚಿಕೆಯಾಯ್ತು
ಕನಸ ಕಂಡ ಮನಸ್ಸು ಯಾನ ನಿಲ್ಲಿಸಿತು
ಆದರೆ ತುಂತುರು ಹನಿಗಳ ಮಳೆ
ನಿಲ್ಲದೆ ಸುರಿಯುತ್ತಿತ್ತು....

Monday, May 14, 2007

ಎಲ್ಲ ಭಾವಗಳು ತುಂಬಿ ವೈಖಾಖದ ಬಿಸಿ ತಂಪಾಯ್ತು!!!!

ಬೆಂಗಳೂರಿಗೆ ರಜೆ ಮೇಲೆ ಬಂದಿದ್ದ ನನಗೆ, ಸಂಗೀತದ ಕಾರ್ಯಕ್ರಮ ಅದರಲ್ಲೂ ಸಿ. ಅಶ್ವಥ್ ತಂಡದ ಕಾರ್ಯಕ್ರಮ ನೋಡೊಕೆ ಹೋಗುತ್ತಿದ್ದೀನಿ ಅನ್ನೋ ವಿಷ್ಯಾನೆ ಮನ ತಣಿಸಿತ್ತು. ಅಲ್ಲಿ ಹೋದ್ರೆ ಧನೀ ಜನ, ಹೇಗೋ ಟಿಕೆಟ್ ಪಡೆದು ಒಳಹೊಕ್ಕು ಕುಳಿತಿದ್ದಷ್ಟೇ ಗೊತ್ತು.. ಉಳಿದಿದ್ದೆಲ್ಲಾ ಗಂಧರ್ವ ಲೋಕದಲ್ಲಿ ತೇಲುತ್ತಿದ್ದ ಅನುಭವ. . .ಸುಂದರ ರಸಾನುಭೂತಿ...ಹಸಿರಿನ ಮಧ್ಯೆ ನಾನು ಪಡೆಯುತ್ತಿದ್ದ ಧನ್ಯತೆಯ ಭಾವ. . .ರಾಗಾಲಾಪಾನೆಯಿಂದ ಆಗಿತ್ತು.

ವೈಶಾಖ ಸಂಜೆ - ಭಾವನೆಗಳ ರಂಗವಲ್ಲಿಯನ್ನು ಚೆಲ್ಲುತ್ತಾ, ಕಾಮನಬಿಲ್ಲಿನ ಹಾಗೆ ಎಲ್ಲ ರಂಗನ್ನು ಮೂಡಿಸಿತು. ಬಹುದಿನಗಳ ನಂತರ ರವೀಂದ್ರ ಕಲಾಕ್ಷೇತ್ರ ಪ್ರೇಕ್ಷಕರ ಕರತಾಡನ, ಕೇಕೇ ಯಲ್ಲಿ ತುಂಬಿ ಹೋಗಿತ್ತು. ವೈಶಾಖದ ಬಿಸಿಲಿನ ತಾಪ ಕಮ್ಮಿ ಯಾಗುತ್ತಿದ್ದಂತೆ ಮೂಡಿದ ಭಾನುವಾರದ ಸಂಜೆಗೆ ಸಿ.ಅಶ್ವಥ್ ತಂಡದ ಗಾನದ ಇಂಪು ಸೇರಿ ತಂಪಾಗಿಸಿತು.

ಕಾರ್ಯಕ್ರಮದ ನಿರೂಪಣೆ ಮಾಡಿದ ಭಾಗವತರು ತಂಡದ ರೇವಣ್ಣಯವರು ನೆರಿದಿದ್ದ ಪ್ರೇಕ್ಷಕರತ್ತ ಕಣ್ಣು ಹಾಯಿಸಿ, ಒಮ್ಮೆ ಮೂಕವಿಸ್ಮಿತರಾದಂತೆ ನಿಂತಿದ್ದು ಕಾಣಿಸುತ್ತಿತ್ತು. ಭಾವಗೀತೆಗಳ ಕಾರ್ಯಕ್ರಮಕ್ಕೆ ಜನ ಬರೋದೇ ಕಮ್ಮಿ ಅಂಥದರಲ್ಲಿ ೫೦ , ೧೦೦ ರೂ ಟಿಕೆಟ್ ಇಟ್ಟರೆ ಜನ ಬರುತ್ತಾರ ಅಂತಾ ನನಗೆ ಹೋದೆಡೆಯಲ್ಲ ಪ್ರಶ್ನೆ ಹಾಕುತ್ತಿದ್ದರು. ಕನ್ನಡದ ಜನ ಒಳ್ಳೆಯದಕ್ಕೆ ಯಾವತ್ತು ಪ್ರೋತ್ಸಾಹ ನೀಡುತ್ತಾರೆ ಎನ್ನುವುದಕ್ಕೆ ನೀವುಗಳೇ ಸಾಕ್ಷಿ ಎಂದು ಪ್ರೇಕ್ಷಕರಿಗೆ ಧನ್ಯವಾದಗಳನ್ನು ಅರ್ಪಿಸಿದರು.


ಹೆಚ್ಚು ಸಮಯ ಮಾತುಕತೆಯಲ್ಲಿ ಕಳೆಯದೆ, ಗಾಯಕ ಸಿ. ಅಶ್ವಥ್ ಹಾಗೂ ಕಾರ್ಯಕ್ರಮದ ಪ್ರಮುಖ ಪ್ರಾಯೋಜಕರಾದ ಜೀ ಕನ್ನಡ ವಾಹಿನಿಯ ಎಸ್‌ಎಲ್‌ಎಲ್ ಸ್ವಾಮಿಯವರಿಗೆ ಕನ್ನಡ ಪ್ರಭ ಸಂಪಾದಕ ಎಚ್. ಆರ್. ರಂಗನಾಥ್ ಅವರಿಂದ ಸನ್ಮಾನ ಮಾಡಿಸಿ ಗೌರವಿಸಿದರು.

ರಾಷ್ಟ್ರಕವಿ ಕುವೆಂಪು ಅವರ ಎಲ್ಲಾದರೂ ಇರು ಎಂತಾದರೂ ಇರು ಗೀತೆಯನ್ನು ಹೊಸ ಬಗೆಯ ಸಂಯೋಜನೆಯನ್ನು ಹಾಡಿ ಕಾರ್ಯಕ್ರಮಕ್ಕೆ ಅರ್ಥಪೂರ್ಣವಾಗಿ ನಾಂದಿ ಹಾಡಿದ ಸಿ. ಅಶ್ವಥ್ ಅವರಿಗೆ ಎಂ.ಡಿ. ಪಲ್ಲವಿ ಅರುಣ್, ಸುಪ್ರಿಯಾ ಆಚಾರ್ಯ ಹಾಗೂ ರವಿ ಮುರೂರು ಗಾಯನದ ಸಾಥ್ ನೀಡಿದರು.
ನಂತರ ಒಂದೊಂದಾಗಿ ಆರಂಭದ ಗಾನ ಪಂಕ್ತಿಯಲ್ಲಿ ಬೇಂದ್ರೆ, ಕುವೆಂಪು, ಬಿ.ಆರ್ .ಲಕ್ಷಣ್‌ರಾವ್, ದೇಸ್ ಕುಲಕರ್ಣಿ, ಕೆ. ಎಸ್ . ನರಸಿಂಹಸ್ವಾಮಿ ಅಲ್ಲದೆ ಶಿಶುನಾಳ ಷರೀಫರ ತತ್ವಪದಗಳೂ ಸೇರಿ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸಿತು.

ಹೆಚ್ಚಾಗಿ ಮೈಸೂರು ಅನಂತಸ್ವಾಮಿ ಹಾಗೂ ಸಿ.ಅಶ್ವಥ್ ಅವರ ರಾಗ ಸಂಯೋಜನೆಯಲ್ಲಿದ್ದ ಗೀತೆಗಳು ಕೇಳುಗರ ಹೃದಯ ತಣಿಸಿದವು. ಪ್ರೇಮ, ಹುಡುಗಾಟ, ವೇದನೆ, ಉಲ್ಲಾಸ, ದೇಶಭಕ್ತಿ, ವಿರಹ ಹೀಗೆ ನಾನಾ ಬಗೆಯ ರಸಗಳು ಒಮ್ಮೆಗೆ ಮೆಳೈಸಿ ಗಾನಸುಧೆಯನ್ನು ಹರಿಸಿದರು. ಗಾಯನಕ್ಕೆ ತಕ್ಕಂಥ ವಾದ್ಯವೃಂದ ಕೆಲಬಾರಿ ಗಾಯನದ ಜೊತೆ ಪೈಪೋಟಿಗೆ ಇಳಿದಂತೆ ಗಾಯಕ/ಕಿಯರನ್ನೆ ಮೋಡಿ ಮಾಡಿತು ಎಂದರೆ ತಪ್ಪಾಗಲಾರದು.


ಸಿ. ಅಶ್ವಥ್ ತಂಡ ಹಾಡುವ ಎಂದಿನ ಭಾವಗೀತೆಗಳ ಜತೆಗೆ ಕೆಲವು ಹೊಸ ಗೀತೆಗಳನ್ನು ಹಾಡಿದ್ದು ವಿಶೇಷವಾಗಿತ್ತು. ಉಳಿದಂತೆ ಅಶ್ವಥ್ ತಂಡದ ಪ್ರಮುಖ ಗೀತೆಗಳಾದ ಎದೆ ತುಂಬಿ ಹಾಡಿದೆನು. ., ಶ್ರಾವಣ ಬಂತು ನಾಡಿಗೆ. .. , ಬಂಗಾರ ನೀರ ಕಡಲಾಚೆಗೀಚೆ..,ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು. . . ನಿನ್ನ ಪ್ರೇಮದ ಪರಿಯ. . .ನಿನ್ನೊಲುಮೆಯಿಂದಲೇ ಬಾಳು. . ., ಸಿರಿಗೆರೆಯ ನೀರಿನಲ್ಲಿ ಬಿರಿದ ತಾವರೆಯಲ್ಲಿ ಕೆಂಪಾಗಿ. . ನಿನ್ನ ಹೆಸರು. . .ನೀ ಹೀಂಗ ನೋಡಬ್ಯಾಡ ನನ್ನ, ನೂರು ದೇವರನೆಲ್ಲ ನೂಕಾಚೆ ದೂರ, ಅಂದಿನಿಂದಲೂ ರಂಜಿಸುತ್ತ ಬಂದಿದೆ.

ಭಾನುವಾರದ ಸಂಜೆ ಕೂಡ ರಂಜಿಸಿತು. ಎಂ. ಡಿ. ಪಲ್ಲವಿ ಕಂಠದಲ್ಲಿ ಮೂಡಿಬಂದ ಎದೆ ತುಂಬಿ ಹಾಡಿದೆನು, ದೀಪವು ನಿನ್ನದೇ ಗಾಳಿಯು ನಿನ್ನದೇ, ಹಾಗೂ ಸುಪ್ರಿಯಾ ಆಚಾರ್ಯ ಹಾಡಿದ ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ, ಅಮ್ಮ ನಿನ್ನ ಎದೆಯಾಳದಲ್ಲಿ ಗೀತೆಗಳು ಬಹು ಮೆಚ್ಚುಗೆಗೆ ಪಾತ್ರವಾಯಿತು. ರವಿ ಮುರೂರು ತಮ್ಮ ಪಾಲಿಗೆ ಸಿಕ್ಕ ` ಮರೆಯಲಾರೆ ನಿನ್ನ . . . . ' ಎಂಬ ಒಂದು ಹಾಡಿನಿಂದಲೇ ಅಶ್ವಥ್ ಹಾಗೂ ಕೇಳುಗರ ಮನಸೂರೆಮಾಡಿದರು.

"ಬದುಕು ಮಾಯೆಯ ಮಾಟ", "ಆವು ಈವಿನಾ""ಮುಚ್ಚುಮರೆಯಿಲ್ಲದೆಯೆ"
ಸಿ. ಅಶ್ವಥ್ ಕಂಠ ಯಾಕೋ ಸ್ವಲ್ಪ ಡಲ್ ಆಗಿದೆ ಇವತ್ತು ಎನ್ನುವಷ್ಟರಲ್ಲೆ ಷರೀಫರ ಪದಗಳು ಅಶ್ವಥ್ ಅವರ ದನಿಯಿಂದ ಒಂದೊಂದಾಗಿ ನುಗ್ಗಿ ಎಲ್ಲೆಡೆ ಹರಡಿ, ವಿಜೃಂಭಿಸಿ, ಜನರನ್ನು ಕುಣಿಯುವಂತೆ ಮಾಡಿತು. ಸುಮಾರು ೩ ತಾಸಿನ ಅವ ಮುಗಿದಿದ್ದೆ ಜನರಿಗೆ ತಿಳಿಯಲಿಲ್ಲ.

ಗಾಯನ ಮುಗಿದ ಮೇಲೆ ಸಿ. ಅಶ್ವಥ್ ಅವರು ಕನ್ನಡವೇ ಸತ್ಯ ಕಾರ್ಯಕ್ರಮವನ್ನು ನೆನೆದು, ಟಿಕೆಟ್ ಇಟ್ರೆ ಜನ ಬರುತ್ತಾರಾ ಎಂಬ ಸಂಶಯ ನನ್ನಲ್ಲೂ ಇತ್ತು. ಆದರೆ ಕನ್ನಡಿಗರು ಎಂದೂ ಕಲಾವಿದರನ್ನು ಕೈ ಬಿಟ್ಟಿಲ್ಲ. ಬಿಡೋದಿಲ್ಲ ಎನ್ನೋದನ್ನು ಇವತ್ತು ನೀವೆಲ್ಲ ಸಾಬೀತು ಮಾಡಿದ್ದೀರಿ ನಿಮಗೆ ಧನ್ಯವಾದಗಳು ಎಂದು ಪ್ರೇಕ್ಷಕರತ್ತ ಕೈ ಬೀಸಿದರು. ಕಾರ್ಯಕ್ರಮಕ್ಕೆ ಉತ್ತಮ ಸಂಗೀತ ಹಿಮ್ಮೇಳ ನೀಡಿದ ಪ್ರಸಾದ್, ಜೆರಾಲ್ಡ್, ಕೃಷ್ಣ ಉಡುಪ, ಮಹೇಶ್, ಉಮೇಶ್ ತಂಡದವರನ್ನು ಹೊಗಳಿದರು.

ಕಡೆಗೆ, ಎಂ. ಡಿ. ಪಲ್ಲವಿ ಹಾಗೂ ಸುಪ್ರಿಯಾ ಆಚಾರ್ಯ ಅವರತ್ತ ತಿರುಗಿ, ಈ ಇಬ್ಬರು ಹೆಣ್ಮಕ್ಕಳು ತುಂಬಾ ಅದ್ಭುತ ಗಾಯಕಿಯರು, ಇವತ್ತಿನ ಕಾರ್ಯಕ್ರಮದ ಯಶಸ್ಸಿಗೆ ಇವರೇ ಕಾರಣ ಎಂದು ಹೇಳಿದಾಗ, ಪ್ರೇಕ್ಷಕರ ಕರತಾಡನದ ಸದ್ದು ಮುಗಿಲು ಮುಟ್ಟಿತ್ತು.

ಒಟ್ಟಿನಲ್ಲಿ ಬೇಸಿಗೆಯ ಬಿಸಿಲಿಗೆ ಬೇಸತ್ತಿದ್ದ ಬೆಂಗಳೂರಿಗರಿಗೆ ಸಿ. ಅಶ್ವಥ್ ತಂಡದವರು ಗಾನಸುಧೆಯನ್ನು ಉಣಬಡಿಸಿ ತಂಪು ನೀಡಿದರು ಅಂದರೆ ಅದು ಅತಿಶಯೋಕ್ತಿ ಆಗಲಾರದು. ಪಲ್ಲವಿ ಅಕ್ಕನನ್ನು ಒಮ್ಮೆ ಕಾಣುವ ಆಸೆ ಏನೊ ಇತ್ತು, ಆದರೆ ಊರಿಗೆ ಅಂದೇ ಹೊರಡುವ ಆತುರ.... ಹೊರಟು ಬಿಟ್ಟೆ..ಅವಳು ಹಾಡನ್ನು ಗುನುಗುತ್ತಾ... ನಮ್ ಊರಿಗೂ ಬರಲಿ ಇವರ ಮೇಳದ ದಿಬ್ಬಣ ಎಂದುಕೊಳ್ಳುತ್ತ ನಡೆದೆ.

Sunday, May 6, 2007

ನೆನಪು. . . .ಸವಿಯಾಗಿದ್ದರೆ ಚೆನ್ನ

ನೆನಪುಗಳು ಬರುತ್ತಿವೆ ಇಂದು
ಭಾವನೆಗಳ ಮಾಡುತ್ತ ಹಿಂದು-ಮುಂದು
ಎಲ್ಲೆಡೆ ನೀ ಇದ್ದರೂ ನಾ ನಾನಾಗಿದ್ದೆ
ನನ್ನಲ್ಲಿ ನೀ ಸೇರಿ ಎಲ್ಲರಂತೆ ನಾನಾದೆ!

ಕಳೆದೋದೆ ನಿನ್ನ ಪ್ರಭೆಗೆ,
ಮನಸೋತೆ ನಿನ್ನ ಕರುಣೆಗೆ,
ತಲೆಬಾಗಿದೆ ನಿನ್ನ ಸ್ನೇಹಕೆ,
ಹಾತೊರೆದಿದೆ ಕಣ್ಗಳು ನಿನ್ನ ಸನಿಹಕೆ

ಭಾವನೆಗಳ ಬಣ್ಣ ತುಂಬಿದವನೆ
ರಂಗೋಲಿಯ ಚಿತ್ತಾರ ಅಳಿಸುವ ಮುನ್ನ
ಕನಿಕರಿಸಿ ಉಳಿಸು ಬಾ ನನ್ನನ್ನು
ಮರೆತೆನೆಂದರೂ ಮರೆಯಲಾರೆ ನಿನ್ನನ್ನು